Agriculture and Rural Development

       
ಜೂನ್ ೨೦೧೬ರ ಆರಂಭದಿಂದಲೇ ಕರ್ನಾಟಕದ ಹಲವೆಡೆ ಭಾರೀ ಮಳೆ. ಕರಾವಳಿಯಲ್ಲಂತೂ ಪ್ರತಿ ದಿನವೂ ಭರ್ಜರಿ ಮಳೆ. ಜೂನ್ ೯ರಂದು ಕೇರಳಕ್ಕೆ ನೈಋತ್ಯ ಮಳೆ ಮಾರುತ ನುಗ್ಗಲಿದೆ ಎಂಬುದು ಹವಾಮಾನ ಇಲಾಖೆಯ ಘೋಷಣೆ. ಜೊತೆಯಲ್ಲೇ, ಈ ವರುಷ ಕಳೆದ ಕೆಲವು ವರುಷಗಳಿಗಿಂತ ಹೆಚ್ಚಿಗೆ ಮಳೆ ಸುರಿಯಲಿದೆ ಎಂಬ ನಿರೀಕ್ಷೆ.
ಈ ಎಲ್ಲ ಮಳೆಗದ್ದಲದಲ್ಲಿ ನಾವು ೨೦೧೬ರ ಭೀಕರ ಬರಗಾಲ, ಬಿರು ಬಿಸಿಲು, ಕುಡಿನೀರಿಗಾಗಿ ಜನರ ಬವಣೆ – ಇವೆಲ್ಲವನ್ನೂ ಮರೆತೇ ಬಿಡುತ್ತೇವೆ. ಮರೆತು ಬಿಡುವ ಮುನ್ನ, ಮೊನ್ನೆಮೊನ್ನೆಯ ವರೆಗೆ ನಮ್ಮ ಬೆವರಿಳಿಸಿದ ಬರಗಾಲದ ಭೀಕರತೆಯ ಚಿತ್ರಣ ದಾಖಲಿಸೋಣ. ೨೦೧೬ರ ಬರಗಾಲದಿಂದ (ಸತತ ಎರಡನೇ ವರುಷ ಕಾಡಿದ ಬರಗಾಲ) ತತ್ತರಿಸಿದ್ದು ಭಾರತದ ಅರ್ಧ ಭೂಪ್ರದೇಶ. ಅಂದರೆ ಭಾರತದ ೬೭೮ ಜಿಲ್ಲೆಗಳಲ್ಲಿ ೨೫೪ರಲ್ಲಿ ಸರಕಾರಗಳನ್ನೂ ಜನರನ್ನೂ ಕಂಗೆಡಿಸಿದ ಬರಗಾಲ. ಭಾರತದ ಉದ್ದಗಲದಲ್ಲಿ ಹರಡಿದ ೬ ಲಕ್ಷ ಹಳ್ಳಿಗಳಲ್ಲಿ ೨ ಲಕ್ಷ ಹಳ್ಳಿಗಳಲ್ಲಿ ನೀರಿಲ್ಲದೆ ಹಾಹಾಕಾರ. ಹತ್ತು ರಾಜ್ಯಗಳಲ್ಲಿ ಸುಮಾರು ೬೦,೦೦೦ ಟ್ಯಾಂಕರುಗಳ ಮೂಲಕ ಜನರಿಗೆ ನೀರಿನ ಪೂರೈಕೆ. ಸುಮಾರು ಒಂದೂವರೆ ಕೋಟಿ ಹೆಕ್ಟೇರ್ ಕೃಷಿಭೂಮಿಯಲ್ಲಿ ಬೆಳೆನಾಶ. ಈ ದೇಶದ ೧೨೫ ಕೋಟಿ ಜನರಲ್ಲಿ ಸುಮಾರು ೩೩ ಕೋಟಿ ಜನರು ಬರಗಾಲದಿಂದ ಕಂಗಾಲು.

       
ಅದೊಂದು ದಿನ ಸಿಲ್ಬಿಯಾ ತೊಪ್ನೊ ಎಂಬಾಕೆ ತನ್ನ ಹಳ್ಳಿಯಲ್ಲಿ ನಡೆದು ಹೋಗುತ್ತಿದ್ದಳು. ತುಸು ದೂರದಲ್ಲಿ ಅವಳೊಂದು ವಿಚಿತ್ರ ವಿದ್ಯಮಾನ ಕಂಡಳು.
ಜಾರ್ಖಡದ ಗುಮ್ಲಾ ಜಿಲ್ಲೆಯ ಕನಕಲೊಯಾ ಎಂಬ ಆ ಹಳ್ಳಿಯಲ್ಲಿ, ಹಕ್ಕಿಯೊಂದು ಹಾರುತ್ತ ಮಣ್ಣಿನೆಡೆಗೆ ಧುಮುಕುತ್ತಿತ್ತು; ಪುನಃ ಮೇಲಕ್ಕೆ ಹಾರಿ ಕರ್ಕಶವಾಗಿ ಕೂಗುತ್ತ ಮತ್ತೆ ಮಣ್ಣಿನೆಡೆಗೆ ಧುಮುಕುತ್ತಿತ್ತು. ಅದು ಕೆಂಪು-ಕೊಕ್ಕುಪಟ್ಟಿಯ ಟಿಟ್ಟಿಭ ಹಕ್ಕಿ.
ಕುತೂಹಲದಿಂದ ಸಿಲ್ಬಿಯಾ ತೊಪ್ನೊ ಆ ಜಾಗದ ಹತ್ತಿರಕ್ಕೆ ನಡೆದಳು. ಅಲ್ಲಿ ಅವಳು ಕಂಡದ್ದೇನು? ನಾಗರ ಹಾವೊಂದು ಹೆಡೆಯೆತ್ತಿ ಭುಸುಗುಡುತ್ತಿತ್ತು. ಆ ಟಿಟ್ಟಿಭ ಮತ್ತೆಮತ್ತೆ ನಾಗರ ಹಾವಿನೆಡೆಗೆ ಧುಮುಕುತ್ತ ಅದನ್ನು ಬೆದರಿಸಲು ಯತ್ನಿಸುತ್ತಿತ್ತು. ಈ ತಂತ್ರಕ್ಕೆ ನಾಗರಹಾವು ಹೆದರದಿದ್ದಾಗ, ಆ ಹಕ್ಕಿ ಇನ್ನೊಂದು ತಂತ್ರ ಝಳಪಿಸಿತು. ಹತ್ತಿರದ ಗಿಡವೊಂದರ ಪುಟ್ಟಪುಟ್ಟ ಗೆಲ್ಲುಗಳನ್ನು ಕೊಕ್ಕಿನಿಂದ ಮುರಿದು ತಂದು, ನಾಗರಹಾವಿನ ಸುತ್ತಲೂ ಚೆಲ್ಲಲು ಆರಂಭಿಸಿತು.
ಸ್ವಲ್ಪ ಹೊತ್ತಿನಲ್ಲಿ ನಾಗರಹಾವು ತನ್ನ ಹೆಡೆ ಇಳಿಸಿ, ನಿಧಾನವಾಗಿ ಅಲ್ಲಿಂದ ಸರಿದು ಹೋಯಿತು. ಅನಂತರ ಸಿಲ್ಬಿಯಾ ತೊಪ್ನೊ ಎಚ್ಚರಿಕೆಯಿಂದ ಹಾವು ಹೆಡೆಯೆತ್ತಿದ್ದ ಜಾಗ ತಲಪಿದಳು. ಅಲ್ಲಿದ್ದವು ಒಂದು ಪುಟ್ಟ ಹಕ್ಕಿಗೂಡಿನಲ್ಲಿ ಎರಡು ಮೊಟ್ಟೆಗಳು. ಅಂದರೆ, ಆ ಮೊಟ್ಟೆಗಳನ್ನು ನುಂಗಲು ಹವಣಿಸುತ್ತಿದ್ದ ನಾಗರಹಾವನ್ನು ತಡೆಯಲು ಟಿಟ್ಟಿಭ ಶಕ್ತಿಮೀರಿ ಪ್ರಯತ್ನಿಸುತ್ತಿತ್ತು.
ಟಿಟ್ಟಿಭ ತಂದು ಚೆಲ್ಲಿದ್ದ ಗಿಡದ ಗೆಲ್ಲುಗಳಲ್ಲಿ ನಾಗರಹಾವನ್ನು ವಿಕರ್ಷಿಸುವ ಯಾವುದೋ ಅಂಶ ಇದ್ದದಂತೂ ನಿಜ. ಈ ರೀತಿಯಲ್ಲಿ ಆ ಗಿಡದ ಔಷಧೀಯ ಗುಣ ಆಕಸ್ಮಿಕವಾಗಿ ಪತ್ತೆಯಾಯಿತು. ಗುಜರಾತಿ ಭಾಷೆಯಲ್ಲಿ ಆ ಗಿಡದ ಹೆಸರು ಗುಸುಂಪುತು (ಮುಂಡಾರಿ). ಅದರ ಸಸ್ಯಶಾಸ್ತ್ರೀಯ ಹೆಸರು ಇಂಡೋನೀಸಿಯೆಲ್ಲ ಇಕೆಯೊಡಿಸ್ (ಕುಟುಂಬ: ಅಕಾಂತಸಿಯೇ). ಈ ಗಿಡದ ಸಾರವನ್ನು ಹಾವು-ಕಡಿತದ ಚಿಕಿತ್ಸೆಗೆ ಬಳಸಲಾಗುತ್ತಿದೆ.
ಆಫ್ರಿಕಾದ ಚಿಂಪಾಂಜಿಗಳಲ್ಲಿಯೂ ಇಂತಹದೇ ಜ್ನಾನಸಂಪತ್ತಿದೆ. ಅದನ್ನು ಬಳಸುವ ಅವುಗಳ ಜಾಣತನ ದಾಖಲಿಸಿದ್ದಾರೆ ಮೈಖೇಲ್ ಎ. ಹಫ್ಮಾನ್.


ಬೆಂಬಿಡದ ಬರಗಾಲ ಗ್ರಾಮೀಣ ಭಾರತದ ರೈತ ಕುಟುಂಬಗಳ ಬದುಕಿಗೆ ಕೊಳ್ಳಿಯಿಟ್ಟ ವಾಸ್ತವದ ಚಿತ್ರಣ ಈ ಲೇಖನದಲ್ಲಿದೆ.
ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಮಲೆಗಾಂವ್ ಹಳ್ಳಿಯ ರೈತ ಮುಕುಂದ ವಾಗ್ಗೆ ಬದುಕು ಬೇಡವಾಗಿತ್ತು. ತನ್ನ ಮನೆಯ ಪಕ್ಕದ ದನದ ಹಟ್ಟಿಯಲ್ಲಿ ಕೀಟನಾಶಕ ನುಂಗಿದ ವಾಗ್, ಬಾಯಿಯಿಂದ ನೊರೆ ಬಿಡುತ್ತಾ ಮೂರ್ಛೆ ತಪ್ಪಿ ಬಿದ್ದಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಪತ್ನಿ ಇವರನ್ನು ತಕ್ಷಣ ಆಸ್ಪತ್ರೆಗೆ ಒಯ್ದಳು. ಅಲ್ಲಿ ಡಾಕ್ಟರ್ ಅವರಿಗೆ ಚಿಕಿತ್ಸೆ ನೀಡಿದ್ದರಿಂದಾಗಿ ಬದುಕುಳಿದರು. ಇದು ನಡೆದದ್ದು ೨೦೦೯ರಲ್ಲಿ.
ಮೂರು ವರುಷಗಳ ನಂತರ ೨೦೧೨ರಲ್ಲಿ ಮುಕುಂದ ವಾಗ್ಗೆ ಪುನಃ ಬದುಕು ಬೇಡವೆನಿಸಿತು. ಯಾಕೆಂದರೆ ಎರಡು ಎಕ್ರೆಯಲ್ಲಿ ಅವರು ಬಿತ್ತಿದ ಸೋಯಾಬೀನಿನಿಂದ ಏನೂ ಫಸಲು ಸಿಗಲಿಲ್ಲ. ಅದಕ್ಕಾಗಿ ಸ್ನೇಹಿತರಿಂದ ಮತ್ತು ಬಂಧುಗಳಿಂದ ಅವರು ಪಡೆದ ರೂ.೬೦,೦೦೦ ಸಾಲ ಹೊರೆಯಾಗಿತ್ತು. ಅದೊಂದು ದಿನ ಮುಕುಂದ ವಾಗ್ ತನ್ನ ಜೀವವನ್ನೇ ಬಲಿಗೊಟ್ಟರು. ಆಗ ಮುಕುಂದರ ವಯಸ್ಸು ೩೮.
“ಅವರು ಮದ್ಯ ಕುಡಿದು ಕುಡಿದು ತೀರಿಕೊಂಡರು ಎನ್ನುತ್ತಾರೆ ಕೆಲವರು. ಇನ್ನು ಕೆಲವರ ಪ್ರಕಾರ ಅವರು ಕರೆಂಟಿನ ಷಾಕ್ಗೆ ಬಲಿಯಾದರು. ಅವರ ಶವ ಕಪ್ಪಗಾಗಿತ್ತು. ಅವರು ಪ್ರಾಣ ಬಿಟ್ಟಾಗ ನಾನು ನನ್ನ ತವರು ಮನೆಗೆ ಹೋಗಿದ್ದೆ. ನೀನು ಮನೆಯಲ್ಲೇ ಇದ್ದಿದ್ದರೆ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎನ್ನುತ್ತಾರೆ ನನ್ನ ಮಕ್ಕಳು” ಎನ್ನುತ್ತಾ ಕಣ್ಣೀರಾಗುತ್ತಾಳೆ, ಮುಕುಂದ ವಾಗ್ರ ೩೮ ವರುಷ ವಯಸ್ಸಿನ ಪತ್ನಿ ಬಾಬಿ.


ಬಹುರಾಷ್ಟ್ರೀಯ ಬೀಜಕಂಪೆನಿ ಮೊನ್ಸಾಂಟೊ ಮತ್ತೆ ಸುದ್ದಿಯಲ್ಲಿದೆ. ಕಾಂಪಿಟೀಷನ್ ಕಮಿಷನ್ ಆಫ್ ಇಂಡಿಯಾ (ಸಿಸಿಐ) ಇತ್ತೀಚೆಗೆ ಅದರ ವಿರುದ್ಧ ಆದೇಶ ನೀಡಿದೆ: ಮೇಲ್ನೋಟಕ್ಕೆ ಸ್ಫರ್ಧಾ ಕಾಯಿದೆ (ಕಾಂಪಿಟೀಷನ್ ಆಕ್ಟ್)ಯ ಸೆಕ್ಷನ್ ೩(೪) ಮತ್ತು ೪ ಅನ್ನು ಮೊನ್ಸಾಂಟೊ ಉಲ್ಲಂಘಿಸಿದೆಯೆಂದು ಕಾಣಿಸುತ್ತಿದ್ದು, ಇದನ್ನು ಸಿಸಿಐಯ ಡೈರೆಕ್ಟರ್-ಜನರಲ್ ತನಿಖೆ ಮಾಡಬೇಕೆಂದು ಆದೇಶಿಸಿದೆ. ಇದಕ್ಕೆ ಕಾರಣ, ಮೊನ್ಸಾಂಟೊದ ಜಂಟಿಉದ್ಯಮವು ಭಾರತದಲ್ಲಿ ಕುಲಾಂತರಿ ಹತ್ತಿಬೀಜಗಳ ಪ್ರಧಾನ ಪೂರೈಕೆದಾರನೆಂಬ ತನ್ನ ಸ್ಥಾನವನ್ನು ದುರುಪಯೋಗ ಪಡಿಸಿದೆಯೆಂಬ ಸಂಶಯವೆಂದು ಸಿಸಿಐ ಹೇಳಿದೆ.

ಮೊನ್ಸಾಂಟೊ ಬೀಜಕಂಪೆನಿಯು ಕೆಲವು ರಾಜ್ಯ ಸರಕಾರಗಳು ಮತ್ತು ನಮ್ಮ ದೇಶದ ಕೆಲವು ಬೀಜಕಂಪೆನಿಗಳು ಹೂಡಿರುವ ದಾವೆಗಳನ್ನೂ ಎದುರಿಸುತ್ತಿದೆ; ಮೊನ್ಸಾಂಟೊ ಅತಿ ದುಬಾರಿ ರಾಯಧನ ವಸೂಲಿ ಮಾಡುತ್ತಿದೆ ಎಂಬುದೇ ದಾವೆಗಳ ತಕರಾರು. ಆದರೆ, ತಾನು ವಸೂಲಿ ಮಾಡುತ್ತಿರುವುದು ರಾಯಧನವಲ್ಲ, “ವಿಶೇಷಗುಣ ಶುಲ್ಕ" (ಟ್ರೇಯಿಟ್ ಫೀಸ್) ಎಂಬುದು ಮೊನ್ಸಾಂಟೊ ಕಂಪೆನಿಯ ವಾದ. ನಮ್ಮ ದೇಶದ ಕಾಯಿದೆಗಳ ಬಗ್ಗೆ ಮೊನ್ಸಾಂಟೊ ಕಂಪೆನಿಯ ಧೋರಣೆ ಏನೆಂದರೆ ಅವು ನಮ್ಮ ರೈತರನ್ನು ಸುಲಿಯುವ ದಂಧೆಯಲ್ಲಿ ಎದುರಾಗುವ ತೊಡಕುಗಳು, ಅಷ್ಟೇ.

ಇದೆಲ್ಲ ಶುರುವಾದದ್ದು ೧೦ ಮಾರ್ಚ್ ೧೯೯೫ರಂದು ಜೆನೆಟಿಕ್ ಇಂಜಿನಿಯರಿಂಗ್ ಪರಿಶೀಲನಾ ಸಮಿತಿ (ಜಿಇಎಸಿ)ಯ ಅನುಮತಿ ಪಡೆಯದೆ ಮಹಿಕೊ (ಮೊನ್ಸಾಂಟೊ - ಮಹಿಕೊ ಜಂಟಿ ಉದ್ಯಮ) ೧೦೦ ಗ್ರಾಮ್ ಹತ್ತಿ ಬೀಜಗಳನ್ನು ಭಾರತಕ್ಕೆ ತಂದಾಗ. ಆ ಬೀಜಗಳು ಎಂಒಎನ್ ೫೩೧ ಎಂಬ ಬಿಟಿ ಜೀನ್ ಹೊಂದಿದ್ದವು.

ಹೀಗೆ “ಕಳ್ಳಸಾಗಣೆ" ಮಾಡಿದ ಎಂಒಎನ್ ೫೩೧ ಜೀನನ್ನು ಬಳಸಿಕೊಂಡು, ಭಾರತದಲ್ಲಿ ಹತ್ತಿ ಬೀಜ ಪೂರೈಕೆಯ ಏಕಸ್ವಾಮ್ಯ ಸಾಧಿಸಬೇಕೆಂಬುದು  ಮೊನ್ಸಾಂಟೊ - ಮಹಿಕೊ ಕಂಪೆನಿಯ ಉದ್ದೇಶವಾಗಿತ್ತು; ಅದಕ್ಕಾಗಿ ಒಂಭತ್ತು ರಾಜ್ಯಗಳಲ್ಲಿ ೪೦ ಜಾಗಗಳಲ್ಲಿ ಕ್ಷೇತ್ರಪ್ರಯೋಗಗಳನ್ನು ಆರಂಭಿಸಿತು - ಇದಕ್ಕೂ ಜಿಇಎಸಿಯ ಅನುಮತಿ ಪಡೆದಿರಲಿಲ್ಲ.


ಈಗ ಕೃಷಿಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆ: ಕೃಷಿ ಕಾರ್ಮಿಕರ ಕೊರತೆ.
ಈ ಬಗ್ಗೆ ಅಂಕೆಸಂಖ್ಯೆಗಳು ಏನು ಹೇಳುತ್ತವೆ? ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆಯ ೨೦೦೪-೦೫ರಿಂದ ೨೦೧೧-೧೨ ಅವಧಿಯ ದತ್ತಾಂಶ ಪರಿಶೀಲಿಸಿದಾಗ ತಿಳಿದು ಬರುವ ಮಾಹಿತಿ: ಈ ಅವಧಿಯಲ್ಲಿ ಭಾರತದ ಒಟ್ಟು ಕಾರ್ಮಿಕರ ಸಂಖ್ಯೆ ೧೦ ಮಿಲಿಯ (ದಶಲಕ್ಷ) ಹೆಚ್ಚಿತು; ಆದರೆ ಕೃಷಿ ಕಾರ್ಮಿಕರ ಸಂಖ್ಯೆ ೩೪ ಮಿಲಿಯ ಕಡಿಮೆಯಾಯಿತು!
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ನರೇಗಾ)ಯ ಜ್ಯಾರಿಯಿಂದಾಗಿ ಕೃಷಿ ಕಾರ್ಮಿಕರ ಕೊರತೆ ಉಂಟಾಗಿದೆ ಎಂಬುದು ರೈತಾಪಿ ವರ್ಗದ ಅಭಿಪ್ರಾಯ. ಇದನ್ನು ಪರೀಕ್ಷಿಸಲು ಮುಂದಾದವರು ನವದೆಹಲಿಯ ರಾಷ್ಟ್ರೀಯ ಕೃಷಿ ಆರ್ಥಿಕತೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಪಿ. ಎಸ್. ಬಿರ್ತಾಲ್. ಅದಕ್ಕಾಗಿ ಅವರು ವಿಶ್ಲೇಷಿಸಿದ್ದು ೬೧ನೇ ಸುತ್ತಿನ (೨೦೦೪-೦೫) ಮತ್ತು ೬೮ನೇ ಸುತ್ತಿನ (೨೦೧೧-೧೨) “ಉದ್ಯೋಗ ಮತ್ತು ನಿರುದ್ಯೋಗ ಸರ್ವೆ”ಯ ಅಂಕೆಸಂಖ್ಯೆಗಳನ್ನು.
ಈ ಅವಧಿಯಲ್ಲಿ ಕೃಷಿ ಉದ್ಯೋಗ ತೊರೆದವರು ೩೪ ಮಿಲಿಯ ಕಾರ್ಮಿಕರು. ಇವರಲ್ಲಿ ಶೇಕಡಾ ೭೯ ಮಹಿಳೆಯರು. ಅವರಲ್ಲಿ ಶೇಕಡಾ ೮೧ ಮಹಿಳೆಯರು ಅನಂತರ ಕೃಷಿಯೇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿಲ್ಲ ಎಂಬುದು ಗಮನಾರ್ಹ. ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗಮನಿಸಬೇಕಾದ ಇನ್ನೊಂದು ಬೆಳವಣಿಗೆ: ಕೃಷಿಯೇತರ ಚಟುವಟಿಕೆಗಳಲ್ಲಿ ದುಡಿಯುವ ಕಾರ್ಮಿಕರ ಸಂಖ್ಯೆಯಲ್ಲಿ ೨೭ ಮಿಲಿಯ ಹೆಚ್ಚಳ. ಈ ಬೆಳವಣಿಗೆಯ ಮುಂಚೂಣಿಯಲ್ಲಿದೆ ಕಟ್ಟಡ ನಿರ್ಮಾಣ ರಂಗ. ಇದು ಅದೇ ಅವಧಿಯಲ್ಲಿ ಶೇ.೧೦.೩ ವಾರ್ಷಿಕ ಬೆಳವಣಿಗೆ ದರ ದಾಖಲಿಸಿದೆ.


ಖಡ್ಗಮೃಗದ ಕೊಂಬುಗಳ್ಳರು ಅವನ್ನು ಕೊಲ್ಲುವುದು ಕೇವಲ ಕೊಂಬಿಗಾಗಿ. ಆದ್ದರಿಂದ, ಖಡ್ಗಮೃಗಗಳ ಕೊಂಬನ್ನೇ ಕತ್ತರಿಸಿದರೆ ಹ್ಯಾಗೆ?

ಭಾರತದ ಒಂದು-ಕೊಂಬಿನ ಖಡ್ಗಮೃಗಗಳನ್ನು ಉಳಿಸಲಿಕ್ಕಾಗಿ ಹೀಗೊಂದು ಚರ್ಚೆ ಕೆಲವು ವರುಷಗಳಿಂದ ನಡೆಯುತ್ತಿದೆ. ಅಸ್ಸಾಂನಲ್ಲಿ ಖಡ್ಗಮೃಗಗಳನ್ನು ಹೊಂಚು ಹಾಕಿ ಕೊಲ್ಲುವ ದಂಧೆ ನಡೆಯುತ್ತಲೇ ಇದೆ. ಅವನ್ನು ಉಳಿಸಲಿಕ್ಕಾಗಿ ಕೈಗೊಂಡ ಕ್ರಮಗಳು ಹಲವು. ಆದರೆ, ಎಲ್ಲ ಕ್ರಮಗಳೂ ವೈಜ್ನಾನಿಕ ಅಧ್ಯಯನಗಳನ್ನು ಆಧರಿಸಿವೆ ಎನ್ನುವಂತಿಲ್ಲ.

ಉದಾಹರಣೆಗೆ, ರಾಷ್ಟ್ರೀಯ ಉದ್ಯಾನಗಳ ಕಣ್ಗಾವಲಿಗಾಗಿ ಪೈಲಟ್-ರಹಿತ ವಿಮಾನಗಳನ್ನು ಬಳಸಲಾಯಿತು. ಇದರಿಂದಾಗಿ ಸಾರ್ವಜನಿಕ ಹಣ ಪೋಲಾಯಿತು ವಿನಃ ಬೇರೇನೂ ಪ್ರಯೋಜನವಾಗಲಿಲ್ಲ. ಹಾಗೆಯೇ, ಕೊಂಬುಗಳ್ಳರ ಪತ್ತೆಗಾಗಿ ತರಬೇತಾದ ನಾಯಿಗಳನ್ನು ಬಳಸಬೇಕೆಂದು ಕೆಲವು ಸರಕಾರೇತರ ಸಂಸ್ಥೆಗಳ ಸಲಹೆ! ಇತ್ತೀಚೆಗಿನದು ರಾಜ್ಯ ಅರಣ್ಯ ಇಲಾಖೆಯ ಸಲಹೆ: ಖಡ್ಗಮೃಗಗಳ ಕೊಂಬು ಕತ್ತರಿಸುವುದು.

ಜನವರಿ ೨೦೧೪ರಲ್ಲಿ ಜರಗಿದ “ಇಂಡಿಯಾ ರೈನೋ ವಿಷನ್ ೨೦೨೦” ಎಂಬ ಕಾರ್ಯಕ್ರಮದಲ್ಲಿ ಇದರ ಚರ್ಚೆ. ಈ ಯೋಜನೆಯು ಕೊಂಬು ಕತ್ತರಿಸಿದ ಖಡ್ಗಮೃಗಗಳ ಬಗೆಗಿನ ಈ ಮುಂಚಿನ ಅಧ್ಯಯನಗಳ ಫಲಿತಾಂಶಗಳನ್ನೂ ನಿರ್ಲಕ್ಷಿಸಿದೆ. ಆದ್ದರಿಂದ, ಜಿಂಬಾಬ್ವೆ, ನಮಿಬಿಯ ಮತ್ತು ಸ್ವಾಜಿಲ್ಯಾಂಡುಗಳಲ್ಲಿ ಕೊಂಬುಗಳ್ಳರಿಂದ ಖಡ್ಗಮೃಗಗಳನ್ನು ಪಾರು ಮಾಡಲಿಕ್ಕಾಗಿ ಅವುಗಳ ಕೊಂಬು ಕತ್ತರಿಸಿದ್ದನ್ನು ವಿಶ್ಲೇಷಣೆ ಮಾಡಿದ ಅಧ್ಯಯನಗಳನ್ನು ಭಾರತದ ತಜ್ನರು ಪರಿಶೀಲಿಸಬೇಕಾಗಿದೆ.

ಕರೋಲ್ ಕನ್ನಿಂಗ್ಹ್ಯಾಮ್ ಮತ್ತು ಜೋಯಲ್ ಬರ್ಜರ್ ಬರೆದಿರುವ “ಹೋರ್ನ್ ಆಫ್ ಡಾರ್ಕ್ ನೆಸ್: ರೈನೋಸ್ ಆನ್ ದ ಎಜ್” ಎಂಬ ಪುಸ್ತಕದಲ್ಲಿ ಅಂತಹ ಒಂದು ಅಧ್ಯಯನವನ್ನು ಪ್ರಸ್ತಾಪಿಸಿದ್ದಾರೆ. ಪರಿಸರ ರಕ್ಷಣೆಯ ರಾಜಕೀಯದ ನೀಚ ಜಗತ್ತಿಗೆ ಈ ಪುಸ್ತಕ ನಮ್ಮನ್ನು ಒಯ್ಯುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ನಶಿಸುತ್ತಿರುವ ದೊಡ್ಡ ಸಸ್ತನಿಗಳನ್ನು ರಕ್ಷಿಸುವ ಕಾಯಕದ ಸಂಕೀರ್ಣತೆಗಳನ್ನು ಈ ಪುಸ್ತಕ ಬಹಿರಂಗ ಪಡಿಸುತ್ತದೆ.


ಈಶಾನ್ಯದ ತ್ರಿಪುರಾ ರಾಜ್ಯದಲ್ಲಿ ಬೊಸ್ತಮಿ ಆಮೆ ಎಂದೇ ಹೆಸರಾದ ಮೃದುಚಿಪ್ಪಿನ ಆಮೆಗಳು ನಿರ್ವಂಶವಾಗುವ ಅಪಾಯ ದಟ್ಟವಾಗಿತ್ತು. ಇದೀಗ, ಅವನ್ನು ಉಳಿಸುವ ದಾರಿ ತೋರಿಸಿದೆ, ಪರಿಸರ ಕಾರ್ಯಕರ್ತರ ಕಾರ್ಯಾಚರಣೆ.

ಯಾಕೆಂದರೆ, ಹತ್ತು ವರುಷಗಳ ನಂತರ, ಈ ವರುಷ ೨೦೧೫ರ ಜೂನ್ ಮೊದಲ ವಾರದಲ್ಲಿ ಬೊಸ್ತಮಿ ಆಮೆಗಳು ಮೊಟ್ಟೆಯಿಟ್ಟವು – ತ್ರಿಪುರಾದ ರಾಜಧಾನಿ ಅಗರ್ತಲಾದಿಂದ ೫೫ ಕಿಮೀ ದೂರದ ಉದಯಪುರದ ತ್ರಿಪುರೇಶ್ವರಿ ದೇವಸ್ಥಾನದ ಪವಿತ್ರ ಸರೋವರದಲ್ಲಿ. ಅನಂತರ, ಭಾರೀ ಮಳೆ ಸುರಿದ ದಿನ, ಹತ್ತು ವರುಷಗಳ ನಂತರ ಮೊದಲ ಬಾರಿಗೆ ಹತ್ತು ಆಮೆ ಮರಿಗಳು ರಾಷ್ಟ್ರೀಯ ಹೆದ್ದಾರಿ ೪೪ಎಯಲ್ಲಿ ಕಾಣಿಸಿಕೊಂಡವು. ಸುಮಾರು ೧೬೩ ಮೊಟ್ಟೆಗಳು ಒಡೆದು ಹೊರಬಂದ ಆಮೆ ಮರಿಗಳಲ್ಲಿ ಇವು ಕೆಲವು.

ಬೊಸ್ತಮಿ ಆಮೆಗಳನ್ನು ಆ ಪರಿತ್ರ ಸರೋವರಕ್ಕೆ ತಂದದ್ದು ತ್ರಿಪುರಾದ ರಾಜನಾಗಿದ್ದ ಮಾಣಿಕ್ಯ ರಾಜ ಎಂದು ಪ್ರತೀತಿ. ದಕ್ಷಿಣ ಬಾಂಗ್ಲಾ ದೇಶದ ಚಿತ್ತಗಾಂಗ್ ಗುಡ್ಡಗಳಿಂದ ಪವಿತ್ರತೆಯ ಸಂಕೇತವಾಗಿ ಆತ ಆಮೆಗಳನ್ನು ತಂದನಂತೆ. ತ್ರಿಪುರೇಶ್ವರಿ ದೇವಸ್ಥಾನ ಭಾರತದ ೫೧ ಶಕ್ತಿ ಪೀಠಗಳಲ್ಲೊಂದು. ಅದು ರಾಜಾ ಧನ್ಯಮಾಣಿಕ್ಯ ೧೫ನೇ ಶತಮಾನದಲ್ಲಿ ಕಟ್ಟಿಸಿದ ದೇವಸ್ಥಾನ.

ಆ ದೇವಸ್ಥಾನದ ೧.೧೧ ಹೆಕ್ಟೇರ್ ವಿಸ್ತೀರ್ಣದ ಸರೋವರ ಕಳೆದ ೬೦೦ ವರುಷಗಳಿಂದ ಬೊಸ್ತಮಿ ಆಮೆಗಳ ಆವಾಸಸ್ಥಾನ. ಅವು ಸರೋವರದ ಆಳದಿಂದ ತೀರಕ್ಕೆ ಬರುತ್ತಿದ್ದವು – ಭಕ್ತರು ಎಸೆದ ಆಹಾರ ಹುಡುಕುತ್ತಾ. ಆಮೆಗಳಿಗಾಗಿ ಅಕ್ಕಿ ಮತ್ತು ಬಿಸ್ಕಿಟ್ ಸರೋವರದ ಕಟ್ಟೆಯಲ್ಲಿ ಇರಿಸುವುದೂ ಅಲ್ಲಿನ ಭಕ್ತರ ಪೂಜಾವಿಧಿಯ ಅಂಗ.


ಡೆಲ್ಲಿ ಪಕ್ಕದ ಗುರ್ಗಾಂವ್ನಲ್ಲಿ “ಜನತಾ ಮೀಲ್ಸ್”ನ ೩೦ ಮಾರಾಟ ಕೇಂದ್ರಗಳಿಂದ ಪ್ರತಿ ದಿನ ೯,೦೦೦ ಊಟ ಮಾರಾಟ!
ಈ ದಾಖಲೆ ಮಾರಾಟದ ಗುಟ್ಟು: ಕಡಿಮೆ ಬೆಲೆಗೆ ಆರೋಗ್ಯಯುತ ಊಟ ಪೂರೈಕೆ. ಮಂಗಳೂರು ಅಥವಾ ಬೆಂಗಳೂರಿನಂತಹ ನಗರಗಳಲ್ಲಿ ಐವತ್ತು ರೂಪಾಯಿಗೆ ಎರಡು ಊಟ ಸಿಕ್ಕೀತೇ? ಇಲ್ಲ. ಆದರೆ ಗುರ್ಗಾಂವ್ನಲ್ಲಿ ಆ ಬೆಲೆಗೆ ಎರಡು ಜನತಾ ಮೀಲ್ಸ್ ಲಭ್ಯ. ಉದಾಹರಣೆಗೆ, ಬಿಹಾರದಿಂದ ಗುರ್ಗಾಂವಿಗೆ ಬಂದು ರಿಕ್ಷಾ ತಳ್ಳುತ್ತಾ ಬದುಕು ಸಾಗಿರುತ್ತಿರುವ ಮನೋಜ್ ಮಹತೋ ಜನತಾ ಮೀಲ್ಸಿನಿಂದ ದಿನನಿತ್ಯ ಖರೀದಿಸುವ ಎರಡು ಊಟಗಳ ವೆಚ್ಚ ರೂ.೫೦. ಮಧ್ಯಾಹ್ನ ರೂ.೩೦ರ ಊಟದಲ್ಲಿ ಚಪಾತಿಗಳು, ತೊವ್ವೆ, ಅನ್ನ, ತರಕಾರಿ ಸಾಂಬಾರ್ ಮತ್ತು ಸಲಾಡ್. ರಾತ್ರಿಯ ರೂ.೨೦ರ ಊಟದಲ್ಲಿ ಐದು ಚಪಾತಿಗಳು, ತರಕಾರಿ ಪಲ್ಯ, ಚಟ್ನಿ ಮತ್ತು ಸಲಾಡ್. ಜೊತೆಗೆ ಇದು ಸುರಕ್ಷಿತ ಎಂಬ ವಿಶ್ವಾಸ ಆತನಿಗೆ.
ಸೆಕ್ಯುರಿಟಿ ಗಾರ್ಡ್ ಆಗಿರುವ ರಣಜಿತ್ ಗಲ್ ಸಿನ್ಹಾ ದಿನದಿನವೂ ಜನತಾ ಊಟ ಮಾಡಲು ಕಾರಣ: ಊಟದಲ್ಲಿರುವ ತಾಜಾ ತರಕಾರಿಗಳು ಮತ್ತು ಊಟದ ಕಡಿಮೆ ಬೆಲೆ. ಈಗಂತೂ ಅಲ್ಲಿನ ಶಾಲೆ, ಕಾರ್ಖಾನೆ, ಕೆಫೆತೀರಿಯ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಘಟಕಗಳಲ್ಲಿ ಜನತಾ ಮೀಲ್ಸ್ ಭಾರೀ ಜನಪ್ರಿಯ.
ಇದೆಲ್ಲ ಶುರುವಾದದ್ದು ಎರಡು ವರುಷಗಳ ಮುಂಚೆ, ೨೦೧೩ರಲ್ಲಿ. ಭಾರತದ ನಗರಗಳಲ್ಲಿ ಅದ್ದೂರಿಯ ಊಟ ಒದಗಿಸುವ ದುಬಾರಿ ಹೋಟೆಲುಗಳು ಅನೇಕ. ಕಡಿಮೆ ಬೆಲೆಯ ಊಟ ಮಾರುವ ಕ್ಯಾಂಟೀನುಗಳು ಹಲವಾರು ಇದ್ದರೂ ಇಲ್ಲಿ ಸಿಗುವ ಊಟ ಆರೋಗ್ಯಯುತ ಅನ್ನುವಂತಿಲ್ಲ. ಇಂತಹ ಸನ್ನಿವೇಶದಲ್ಲಿ, ಭಾರತದ ನಗರಗಳ ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಒಳ್ಳೆಯ ಊಟ ಒದಗಿಸುವ ದೊಡ್ದ ಅವಕಾಶವನ್ನು ಗುರುತಿಸಿದವರು ಜೆಸ್ಸಿ ವಾನ್ ಡೆ ಜಾಂಡ್ ಎಂಬ ಡಚ್ ವ್ಯಕ್ತಿ ಮತ್ತು ಪ್ರಭಾತ್ ಅಗರ್ವಾಲ್. ಇವರಿಬ್ಬರು ಅಪೇಕ್ಷಾ ಪೊರ್ವಾಲ್ ಜೊತೆ ಸೇರಿ ಸ್ಥಾಪಿಸಿದ ಉದ್ಯಮ ಜನತಾ ಮೀಲ್ಸ್.  


ಡಿಸೆಂಬರ್ ೨೦೧೪ರ ಮೂರನೇ ವಾರದಲ್ಲಿ ಬೆಂಗಳೂರು ನಗರ ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ನಾಲ್ಕು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಕಳ್ಳಸಾಗಾಟದ ೧೬ ಟನ್ ರಕ್ತಚಂದನದ ಬೆಲೆ ರೂ.೪೭ ಕೋಟಿ (ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ).
ಕಳ್ಳಸಾಗಣೆದಾರರ ಒಂದು ಗ್ಯಾಂಗ್ ತುಮಕೂರು ಜಿಲ್ಲೆಯ ಸಿರಾದಿಂದ, ಇನ್ನೊಂದು ಗ್ಯಾಂಗ್ ಹೊಸಕೋಟೆಯ ಕಟ್ಟಿಗೇನ ಹಳ್ಳಿಯಿಂದ ಈ ಕಳ್ಳವ್ಯವಹಾರ ನಡೆಸುತ್ತಿತ್ತು. ಪೊಲೀಸರು ಕಳ್ಳಸಾಗಣೆದಾರರ ಸೋಗು ಹಾಕಿ, ಗ್ಯಾಂಗ್ಗಳನ್ನು ಸಂಪರ್ಕಿಸಿದ್ದರಿಂದ ಭಾರೀ ಕಳ್ಳಮಾಲು ವಶಪಡಿಸಿಕೊಳ್ಳಲು ಸಾಧ್ಯವಾಯಿತು.
ನಾಲ್ಕು ತಿಂಗಳ ಮುಂಚೆ, ೨೦ ಆಗಸ್ಟ್ ೨೦೧೪ರಂದು ಮಂಗಳೂರು ಬಂದರಿನಲ್ಲಿಯೂ ೧೭ ಟನ್ ಅಕ್ರಮ ಸಾಗಾಟದ ರಕ್ತಚಂದನ ವಶ. ಆ ರೋಚಕ ಪ್ರಕರಣ, ಡಿಆರ್ಎ (ಕಂದಾಯ ಗುಪ್ತಚರ ನಿರ್ದೇಶನಾಲಯ) ಅಧಿಕಾರಿಗಳ ಕಾರ್ಯಾಚರಣೆಯ ಫಲ. ಎಂವಿ ಟೈಗರ್ ಮ್ಯಾಂಗೊ ಎಂಬ ಹಡಗಿನಲ್ಲಿ ಮೀನಿನೆಣ್ಣೆ, ಗೇರುಬೀಜ ಇತ್ಯಾದಿಗಳ ಕನ್ಟೈನರುಗಳನ್ನು ಮಂಗಳೂರಿನಿಂದ ಶ್ರೀಲಂಕಾಕ್ಕೆ ಸಾಗಿಸಲಾಗಿತ್ತು. ಅದರ ಒಂದು ಕನ್ಟೈನರಿನಲ್ಲಿ ೧೭ ಟನ್ ರಕ್ತಚಂದನ ಇದೆಯೆಂದು ಆ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತು. ಹಾಗಾಗಿ, ಅದನ್ನು ಅದೇ ಹಡಗಿನಲ್ಲಿ ಮುಂದಿನ ಟ್ರಿಪ್ನಲ್ಲಿ ಮಂಗಳೂರು ಬಂದರಿಗೆ ತರಿಸಿಕೊಂಡು, ಇಲ್ಲಿ ವಶಪಡಿಸಿಕೊಂಡರು. ಆ ಕನ್ಟೈನರಿನಲ್ಲಿದ್ದ ರಕ್ತಚಂದನವನ್ನು ಬೆಂಗಳೂರಿನಿಂದ ಮಂಗಳೂರಿಗೆ ಟ್ರಕ್ಕಿನಲ್ಲಿ ಕಳ್ಳಸಾಗಾಟ ಮಾಡಲಾಗಿತ್ತು.


ಭಾರತ ಲಕ್ಷಾಂತರ ಭತ್ತದ ದೇಸಿ ತಳಿಗಳ ತವರೂರಾಗಿತ್ತು. ೧೯೯೦ರ ದಶಕದ ವರೆಗೂ ಭಾರತದ ವಿವಿಧ ಭಾಗಗಳಲ್ಲಿ ಬೆಳೆಯುತ್ತಿದ್ದ ಭತ್ತದ ತಳಿಗಳ ಸಂಖ್ಯೆ ಎರಡು ಲಕ್ಷ. ಅಂದರೆ, ದಿನಕ್ಕೊಂದು ತಳಿಯ ಭತ್ತದ ಅನ್ನ ಉಂಡರೂ, ೫೦೦ ವರುಷಗಳ ದೀರ್ಘ ಅವಧಿಯಲ್ಲಿ ಒಮ್ಮೆ ಉಂಡ ತಳಿಯ ಅನ್ನ ಇನ್ನೊಮ್ಮೆ ಉಣ್ಣ ಬೇಕಾಗಿಲ್ಲ!
ವೇದಗಳ ಕಾಲದಲ್ಲಿ ಭಾರತದಲ್ಲಿದ್ದ ದೇಸಿ ಭತ್ತದ ತಳಿಗಳ ಸಂಖ್ಯೆ ನಾಲ್ಕು ಲಕ್ಷ ಎಂದು ಅಂದಾಜಿಸಿದ್ದಾರೆ ಹೆಸರುವಾಸಿ ಭತ್ತವಿಜ್ನಾನಿ ಆರ್. ಎಚ್. ರಿಚಾರಿಯಾ. ಎಂತಹ ಅಗಾಧ ತಳಿ ವೈವಿಧ್ಯ!
ಆಯುರ್ವೇದ ಮತ್ತು “ಸಿದ್ಧ”ದ ಪುರಾತನ ಗ್ರಂಥಗಳಲ್ಲಿ ಭತ್ತದ ತಳಿಗಳ ಬಗ್ಗೆ ಇರುವ ಮಾಹಿತಿ ಅಪಾರ. ವಿವಿಧ ದೇಸಿ ಭತ್ತದ ತಳಿಗಳ ಚಿಕಿತ್ಸಾ ಗುಣಗಳ ಮತ್ತು ಪೋಷಕಾಂಶಗಳ ವಿವರ ಅವುಗಳಲ್ಲಿದೆ. ರೋಗನಿರೋಧ ಶಕ್ತಿ, ದೇಹದ ಮಾಂಸಖಂಡ, ತಲೆಗೂದಲ ಬೆಳವಣಿಗೆ - ಇವನ್ನು ಹೆಚ್ಚಿಸಿಬಲ್ಲ ತಳಿಗಳು, ಚರ್ಮರೋಗಗಳು/ ಕಣ್ಣಿನ ತೊಂದರೆ ನಿವಾರಿಸಬಲ್ಲ ತಳಿಗಳು – ಹೀಗೆ ವಿಭಿನ್ನ ಗುಣವಿಶೇಷಗಳ ದೇಸಿ ಭತ್ತದ ತಳಿಗಳ ಖಜಾನೆಯಾಗಿತ್ತು ನಮ್ಮ ದೇಶ.
ಆದರೆ ಕೆಲವು ರೈತರು ಮಾತ್ರ ದೇಸಿ ಭತ್ತದ ತಳಿವಿವಿಧತೆಗೆ ಬೆಲೆ ಕಟ್ಟಲಾಗದು ಎಂದು ಅರಿತಿದ್ದಾರೆ. ಬಹುಪಾಲು ರೈತರು ದೇಸಿ ತಳಿಗಳ ಸಂರಕ್ಷಣೆಗೆ ಕಾಳಜಿ ತೋರಲಿಲ್ಲ. ಅದರಿಂದಾಗಿ, ಲಕ್ಷಗಟ್ಟಲೆ ದೇಸಿ ಭತ್ತದ ತಳಿಗಳನ್ನು ಶಾಶ್ವತವಾಗಿ ಕಳೆದು ಕೊಂಡೆವು.
ಇದೀಗ, ಚೆನ್ನೈಯ ಒಂದು ಸಂಸ್ಥೆ ದೇಸಿ ಭತ್ತದ ತಳಿಗಳ ಪುನರುಜ್ಜೀವನಕ್ಕೆ ಟೊಂಕ ಕಟ್ಟಿದೆ. ಅದುವೇ, ಸೆಂಟರ್ ಫಾರ ಇಂಡಿಯನ್ ನಾಲೆಜ್ ಸಿಸ್ಟಮ್ಸ್ (ಸಿ.ಐ.ಕೆ.ಎಸ್.). ಈ ಸಂಸ್ಥೆ ದೇಸಿ ಭತ್ತದ ತಳಿಗಳ ಚಿಕಿತ್ಸಾ ಗುಣಗಳು ಮತ್ತು ಪೋಷಕಾಂಶಗಳ ದಾಖಲೀಕರಣ ಮತ್ತು ಸಂಶೋಧನೆ ಮಾಡುತ್ತಿದೆ. ಇತ್ತೀಚೆಗೆ ಸಿ.ಐ.ಕೆ.ಎಸ್. ಸಂಶೋಧನೆಯೊಂದನ್ನು ಪೂರೈಸಿದೆ. ಈ ಸಂಶೋಧನೆಯ ಫಲಿತಾಂಶಗಳು ನಾವು ಯಾವ ಅನ್ನ ಉಣ್ಣುತ್ತೇವೆ ಎಂಬ ಬಗ್ಗೆ ಮರುಚಿಂತನೆ ಮಾಡಲು ಪ್ರೇರೇಪಿಸಬಲ್ಲವು.

Pages