My Books

Monday, January 26, 2026 - 08:42

ಲೇಖಕರು: ಬಿ.ಜಿ.ಎಲ್. ಸ್ವಾಮಿ
ಪ್ರಕಾಶಕರು: ಕಾವ್ಯಾಲಯ, ಮೈಸೂರು 
2ನೇ ಮುದ್ರಣ: 1996         ಪುಟ: 122         ಬೆಲೆ: ರೂ. 40/-

ಸಸ್ಯಶಾಸ್ತ್ರವನ್ನು “ಹಸುರು ಹೊನ್ನು” ಮತ್ತು ಇತರ ಅತ್ಯಪೂರ್ವ ಪುಸ್ತಕಗಳಲ್ಲಿ ಅದ್ಭುತವಾಗಿ ಪರಿಚಯಿಸಿದ ಬಿ.ಜಿ.ಎಲ್. ಸ್ವಾಮಿಯವರು ಕನ್ನಡದ ಪ್ರಸಿದ್ಧ ಸಾಹಿತಿ. “ಅಮೆರಿಕದಲ್ಲಿ ನಾನು”, “ಕಾಲೇಜುರಂಗ”, “ತಮಿಳುತಲೆಗಳ ನಡುವೆ” ಇತ್ಯಾದಿ ವಿಶಿಷ್ಟ ಪುಸ್ತಕಗಳಿಂದಾಗಿಯೂ ಅವರು ಕನ್ನಡಿಗರಿಗೆ ಚಿರಪರಿಚಿತರು. 2 ನವಂಬರ್ 1980ರಂದು ಅವರು ನಮ್ಮನ್ನು ಅಗಲಿದರು. ಅವರ ನಿಧನಾ ನಂತರ ಪ್ರಕಟವಾದ ಅವರ ಪುಸ್ತಕಗಳು “ಬೆಳದಿಂಗಳಲ್ಲಿ ಅರಳಿದ ಮೊಲ್ಲೆ ಮತ್ತು ಇತರ ಪ್ರಬಂಧಗಳು”, “ಫಲಶ್ರುತಿ”, “ಸಸ್ಯಜೀವಿ - ಪ್ರಾಣಿಜೀವಿ” ಮತ್ತು “ಮೈಸೂರು ಡೈರಿ.” 

ಬಿ.ಜಿ.ಎಲ್. ಸ್ವಾಮಿಯವರು ನಿವೃತ್ತರಾದ ನಂತರ ಅವರನ್ನು ಮೈಸೂರು ವಿಶ್ವವಿದ್ಯಾಲಯ ಒಂದು ಶೈಕ್ಷಣಿಕ ವರುಷದ ಅವಧಿಯಲ್ಲಿ ಎರಡು ಕಂತುಗಳಲ್ಲಿ ಸಂದರ್ಶನ ಪ್ರಾಧ್ಯಾಪಕರನ್ನಾಗಿ ನೇಮಿಸಿತು. ಆ ಅವಧಿಯ ಹತ್ತುಹಲವು ಅನುಭವಗಳನ್ನು ಈ ಪುಸ್ತಕದ 11 ಅಧ್ಯಾಯಗಳಲ್ಲಿ ತಮ್ಮದೇ ಶೈಲಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ ಸ್ವಾಮಿಯವರು. 

Monday, January 26, 2026 - 08:38

ಲೇಖಕರು: ಕಾಮರೂಪಿ 
ಪ್ರಕಾಶಕರು: ಮನೋಹರ ಗ್ರಂಥಮಾಲಾ. ಧಾರವಾಡ 
ಪ್ರಕಟ: 1981         ಪುಟ: 108        ಬೆಲೆ: ರೂ. 40/-

ತಮ್ಮ ಮೊದಲ ಕಾದಂಬರಿ “ಕುದುರೆ ಮೊಟ್ಟೆ” ಮೂಲಕ ಪ್ರಸಿದ್ಧರಾದ ಕಾಮರೂಪಿ ಅವರ ಎರಡನೆಯ ಕಾದಂಬರಿ ಇದು. ಗುಡ್ಡಳ್ಳಿ ಎಂಬ ಗ್ರಾಮದ ವಾಗ್ದೇವಿ ವಿದ್ಯಾಲಯ ಶಾಲೆಗೆ ನಗರದ ಪ್ರಾಧ್ಯಾಪಕ ರಾಮಕೃಷ್ಣ ಬಂದು ಸೇರಿಕೊಂಡ ನಂತರ ನಡೆಯುವ ಘಟನೆಗಳ ಸುತ್ತ ಹೆಣೆದಿರುವ ಕಾದಂಬರಿ. 

ಇದರಲ್ಲಿರುವ ಒಂಭತ್ತು ಅಧ್ಯಾಯಗಳ ಆರಂಭದಲ್ಲಿ ಒಂದು ವಾಕ್ಯದಲ್ಲಿ ಅಧ್ಯಾಯದ ಸಾರಾಂಶವನ್ನು ನೀಡಿದ್ದಾರೆ ಲೇಖಕರು.    ಶಾಲೆಯ ಶಿಕ್ಷಕಿಯರು ಮೂವರು: ಸಡಗರಮ್ಮ, ರೂಪ (ಸ್ಕೂಲ್-ನಲ್ಲಿ) ಮತ್ತು ರಾಣಿ (ಜ್ಯೂನಿಯರ್ ಕಾಲೇಜಿನಲ್ಲಿ). ಕಾಲೇಜಿನಲ್ಲಿ ಕಲಿಸುತ್ತಿದ್ದ ಕೇರಳದ ಮ್ಯಾಥ್ಯೂಸ್ - ಈ ನಾಲ್ವರು ಕಾದಂಬರಿಯ ಮುಖ್ಯ ಪಾತ್ರಧಾರಿಗಳು. ಅಲ್ಲಿನ ಕಾಲೇಜಿನಲ್ಲಿ ಪ್ರಿನ್ಸಿಪಾಲ್, ಮ್ಯಾಥ್ಯೂಸ್ ಮತ್ತು ವಯಸ್ಸಾದ ಈಶ್ವರದಾಸ ಹಾಗೂ ಇನ್ನಿಬ್ಬರು - ಒಟ್ಟು ಐವರು ಕಲಿಸುತ್ತಿದ್ದರು. ಇಡೀ ಕಾದಂಬರಿಯನ್ನು ನಿರೂಪಕ ನಿರೂಪಿಸುತ್ತಾ ಹೋಗುತ್ತಾನೆ. 

ಕಾದಂಬರಿಯ ಮೊದಲ ಪುಟದಲ್ಲಿದೆ “ಡಿಮೆನ್ಸಿಯಾ” ಮತ್ತು ಅಪರಾಧದ ಬಗೆಗಿನ ಸಂಬಂಧದ ಬಗ್ಗೆ ಫೋರೆನ್ಸಿಕ್ ಮೆಡಿಸನಿನ ಕೆಯಿತ್ ಸಿಂಪ್ಸನ್ ಅವರ ಒಂದು ಹೇಳಿಕೆ. ಇದು ಕಾದಂಬರಿಯ ಹಂದರದ ಬಗ್ಗೆ ಮತ್ತು ಮುಕ್ತಾಯದ ಮುಖ್ಯ ಘಟನೆಯ ಕುರಿತು ಓದುಗರಿಗೆ ಹೊಳಹನ್ನು ನೀಡುತ್ತದೆ. ಹಾಗೆಯೇ, ಮುನ್ನುಡಿಗೆ ಬದಲಾಗಿ ಲಷ್ಕರ್ಸ್ ಮ್ಯಾನುಯಲ್ ಆಫ್ ಚೆಸ್ ಇದರಿಂದ ಲೇಖಕರು ನೀಡಿರುವ ಇಮ್ಯಾನುಯೆಲ್ ಲಷ್ಕರ್ ಅವರ ಒಂದು ವಾಕ್ಯದ ಹೇಳಿಕೆಯು ಕಾದಂಬರಿಯ ವಿನ್ಯಾಸವನ್ನು ತಿಳಿಯಲು ಓದುಗರಿಗೆ ಸಹಕಾರಿಯಾಗಿದೆ. 

Monday, January 26, 2026 - 08:34

ಸಂಗ್ರಾಹಕ ಸಂಪಾದಕರು: ಕೃಷ್ಣಮೂರ್ತಿ ಹನೂರು 
ಪ್ರಕಾಶಕರು: ಮನೋಹರ ಗ್ರಂಥ ಮಾಲಾ, ಧಾರವಾಡ 
ಪ್ರಕಟ: 2014         ಪುಟ: 172         ಬೆಲೆ: ರೂ. 140/-

ಕನ್ನಡದ ಪ್ರಸಿದ್ಧ ಜನಪದ ಸಾಹಿತ್ಯ ಸಂಗ್ರಾಹಕರೂ ಕಾದಂಬರಿಕಾರರೂ ಆಗಿರುವ ಕೃಷ್ಣಮೂರ್ತಿ ಹನೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಸಂಗ್ರಹಿಸಿದ ಆರು ಜನಪದ ರಮ್ಯ ನೀಳ್ಗತೆಗಳು ಈ ಸಂಕಲನದಲ್ಲಿವೆ. ಇವು ಕನ್ನಡದ ಸಮೃದ್ಧ ಜನಪದ ಸಾಹಿತ್ಯದ ಸೂಚಿಯಾಗಿವೆ.

ಇದರಲ್ಲಿನ ಆರು ಕತೆಗಳನ್ನು ಮತ್ತು ಇದರಲ್ಲಿ ಪ್ರಕಟವಾಗದ ಇನ್ನು ನಾಲ್ಕು ಕತೆಗಳನ್ನು ಹೇಳಿದವರು ಕ್ಯಾತಗಾನಹಳ್ಳಿ ಗಿರಿಯಯ್ಯ. ಈ ಗೊಲ್ಲಗೌಡನನ್ನು ಹನೂರರ ಮಿತ್ರ ರಾಮಚಂದ್ರಪ್ಪ ಕರೆದುಕೊಂಡು ಬಂದಿದ್ದರು. ತನಗೆ ಯಾವುದೋ ಒಂದು “ಹೆಣ್ಣರಸಿಯರ ಪಟ್ಟಣದ ಕತೆ” ಬರುವುದೆಂದು ಹೇಳಲಿಕ್ಕೆ ಶುರು ಮಾಡಿದ ಗಿರಿಯಯ್ಯ ಹಗಲೆಲ್ಲ ಅದೊಂದೇ ಕತೆಯನ್ನು ಹೇಳುತ್ತಾ ಹೋದ! “ಕಥೆ ಹೇಳುವಾಗಿನ ಆತನ ಭಾಷಾಶೈಲಿ, ನಾಟಕೀಯವಾಗಿ ನಿರೂಪಿಸುವ ರೀತಿ ಇವು ಆ ಕಥೆಯನ್ನು ಕುತೂಹಲದಿಂದ ಕೇಳುವಂತೆ ತೊಡಗಿಸಿತು” ಎನ್ನುತ್ತಾರೆ ಹನೂರರು. ಅನಂತರ ತನಗೆ ತಿಳಿದಿರುವ ಕಥೆಗಳನೆಲ್ಲ ಹೇಳಿದ ಗಿರಿಯಯ್ಯ ಒಟ್ಟು ಹತ್ತು ಕಥೆಗಳನ್ನು ನಿರೂಪಿಸಿದರು. ಪುಸ್ತಕದ ಕೊನೆಯಲ್ಲಿ (ಅನುಬಂಧ) ಪ್ರಶ್ನೋತ್ತರ ರೂಪದಲ್ಲಿ ಗಿರಿಯಯ್ಯನ ಮಾತಿನಲ್ಲೇ ಅವನ ವಿವರವಾದ ಪರಿಚಯ ನೀಡಿದ್ದಾರೆ ಹನೂರರು. 

Monday, January 26, 2026 - 08:30

ಲೇಖಕರು: ಡಾ. ಉದಯ ಕುಮಾರ ಇರ್ವತ್ತೂರು 
ಪ್ರಕಾಶಕರು: ಆಕೃತಿ ಆಶಯ ಪಬ್ಲಿಕೇಷನ್ಸ್, ಮಂಗಳೂರು 
ಪ್ರಕಟ: 2022          ಪುಟ: 224 BW + 16 colour             ಬೆಲೆ: ರೂ. 250/-

ತಮ್ಮ ವೃತ್ತಿ ಜೀವನದ ಅನುಭವಗಳನ್ನು ದಾಖಲಿಸುವವರು ತೀರಾ ವಿರಳ. ಇದರಿಂದಾಗಿ, ಸಾವಿರಾರು ಸಮರ್ಥ ಅಧಿಕಾರಿಗಳ ಹಾಗೂ ಉನ್ನತ ಹುದ್ದೆಗಳಲ್ಲಿ ಅಪಾರ ಅನುಭವ ಗಳಿಸಿದವರ ಜೀವನಾನುಭವದ ಪಾಠಗಳು ಮುಂದಿನ ತಲೆಮಾರಿನವರಿಗೆ ಸಿಗದಂತಾಗಿದೆ. ಇದಕ್ಕೆ ಅಪವಾದವೆಂಬಂತೆ, ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಪ್ರಿನ್ಸಿಪಾಲರಾಗಿ, ಹಲವಾರು ಸವಾಲುಗಳಿದ್ದರೂ ಅವನ್ನೆಲ್ಲ ಎದುರಿಸಿ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಡಾ.ಉದಯ ಕುಮಾರ್ ಇರ್ವತ್ತೂರು ತಮ್ಮ ಅಮೂಲ್ಯ ಅನುಭವಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. 

Monday, January 26, 2026 - 08:28

ಲೇಖಕರು: ಅನು ಬೆಳ್ಳೆ 
ಪ್ರಕಾಶಕರು: ಅನು ಕ್ರಿಯೇಷನ್ಸ್, ಕಾರ್ಕಳ 
2ನೇ ಮುದ್ರಣ: 2024         ಪುಟ: 120         ಬೆಲೆ: ರೂ. 140/- 

“ಭೂತದ ಕೋಳಿ” ಕಥಾ ಸಂಕಲನದ ಲೇಖಕರಾದ ರಾಘವೇಂದ್ರ ಬಿ. ರಾವ್ ಅವರು “ಅನು ಬೆಳ್ಳೆ” ಎಂದೇ ಪರಿಚಿತರು. ಕಾರ್ಕಳ ತಾಲೂಕಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು. ಇವರ ಸಣ್ಣ ಕತೆಗಳು ಉದಯವಾಣಿ, ಪ್ರಜಾವಾಣಿ, ಕನ್ನಡ ಪ್ರಭ, ಸುಧಾ, ತರಂಗ, ಮಯೂರ, ತುಷಾರ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

ಹನ್ನೆರಡು ಸಣ್ಣ ಕಥೆಗಳಿರುವ ಈ ಸಂಕಲನ “ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ” ಪಡೆದಿದೆ. ಅನು ಬೆಳ್ಳೆ ಅವರಿಗೆ ಪಾತ್ರಗಳು ಮತ್ತು ಸಂದರ್ಭ ಸೃಷ್ಟಿಯ ಕಲೆ ಸಿದ್ಧಿಸಿದೆ. ಇಲ್ಲಿನ ಕತೆಗಳ ವಿವಿಧ ಪಾತ್ರಗಳು ಮನುಷ್ಯರ ವರ್ತನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತವೆ. ಇವು ವಾಸ್ತವದ ನೆಲೆಗಟ್ಟಿನಲ್ಲಿ ಬರೆದ ಕತೆಗಳಾದ ಕಾರಣ ಓದುಗರ ಮನಸ್ಸನ್ನು ತಟ್ಟುತ್ತವೆ. 

ಮೊದಲ ಕತೆ “ಗೋಲಿ ಸೋಡಾ”ದ ಸುಬ್ರಾಯಜ್ಜಿ ಕಳೆದ ಶತಮಾನದ ಕೊಂಡಿಯಂತೆ ಕಾಣಿಸುತ್ತಾರೆ. ಅವರ ಬಾಲ್ಯ ಕಾಲದಲ್ಲಿ ಸುಲಭವಾಗಿ ಸಿಗುತ್ತಿದ್ದ ಗೋಲಿ ಸೋಡಾ ಈಗಲೂ ಸಿಗುತ್ತದೆ ಎಂಬುದು ಅವರ ನಂಬಿಕೆ. ಅದೀಗ ಸಿಗುವುದಿಲ್ಲ ಎಂದು ಮಗ ಮತ್ತು ಮೊಮ್ಮಗ ಎಷ್ಟು ತಿಳಿಸಿ ಹೇಳಿದರೂ ಅವರು ನಂಬಲೊಲ್ಲರು. ತನ್ನ ಕಾಲದಲ್ಲಿ ಅಜೀರ್ಣದ ಸಮಸ್ಯೆಗಳ ಪರಿಹಾರಕ್ಕೆ ಒಂದು ಗೋಲಿ ಸೋಡಾ ಕುಡಿದರೆ ಸರಿ ಹೋಗುತ್ತಿತ್ತು; ಈಗ ಮಾತ್ರೆ ನುಂಗಬೇಕು ಎಂಬುದೇ ಅವರ ಸಂಕಟ. 

ಎರಡನೇ ಕತೆ “ಶಾಪ”ದಲ್ಲಿ ಗಂಡುಮಕ್ಕಳು ಬೇಕೆಂದು ಹಂಬಲಿಸುವ ಈಗಿನ ಕಾಲದಲ್ಲೂ ಹೆಣ್ಣು ಮಗು ಬೇಕೆಂದು ಕಾತರಿಸುವ ವನಜಾಕ್ಷಿಯ ಭಾವನೆಗಳು ಮೂಡಿ ಬಂದಿವೆ. 

Monday, January 26, 2026 - 08:23

ಲೇಖಕರು: ದೇವುಡು ನರಸಿಂಹ ಶಾಸ್ತ್ರಿ 
ಪ್ರಕಾಶಕರು: ಹೇಮಂತ ಪ್ರಕಾಶನ, ಬೆಂಗಳೂರು 
ಮುದ್ರಣ: 2011           ಪುಟ: 184          ಬೆಲೆ: ರೂ.100/-

ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳನ್ನು ರಚಿಸಿದ ಪ್ರತಿಭಾವಂತ ಸಾಹಿತಿ ದೇವುಡು ನರಸಿಂಹ ಶಾಸ್ತ್ರಿ. ತಮ್ಮ ಮೂರು ಬೃಹತ್ ಕಾದಂಬರಿಗಳಾದ “ಮಹಾ ಬ್ರಾಹ್ಮಣ”, “ಮಹಾ ಕ್ಷತ್ರಿಯ” ಮತ್ತು “ಮಹಾ ದರ್ಶನ”ಗಳಿಂದ ಮೇರು ಸದೃಶ ಸಾಹಿತಿಗಳಾಗಿ ಕನ್ನಡದ ಓದುಗರಿಗೆ ಪರಿಚಿತರು. 

ಬಹುಮುಖ ಪ್ರತಿಭೆಯ ದೇವುಡು ಅವರು ಮಕ್ಕಳ ಸಾಹಿತ್ಯಕ್ಕೆ ಕೂಡ ಸುಮಾರು 85 ವರುಷಗಳ ಹಿಂದಿನಿಂದಲೂ ಕೊಡುಗೆ ಇತ್ತವರು. ಅವರು ಬರೆದ 49 ಮಕ್ಕಳ ನೀತಿಕತೆಗಳು ಈ ಸಂಕಲನದಲ್ಲಿವೆ. ತೆನಾಲಿ ರಾಮಕೃಷ್ಣನ ವಿಚಾರವಾಗಿ ಜನಜನಿತವಾಗಿರುವ ಒಂದು ದಂತಕಥೆಯನ್ನು ಆಧರಿಸಿದ “ವಿಚಿತ್ರ ಶಿಕ್ಷೆ” ಎಂಬ ಮಕ್ಕಳ ನಾಟಕವೂ ಇದರಲ್ಲಿದೆ. 

ಸರಳ ಶೈಲಿಯಲ್ಲಿ ನೀತಿ ಬೋಧಕವಾಗಿಯೂ ಮನೋರಂಜಕವಾಗಿಯೂ ಮಕ್ಕಳ ಕತೆಗಳನ್ನು ಬರೆಯುವ ಕಲೆ ಅವರಿಗೆ ಸಿದ್ಧಿಸಿತ್ತು. ಕರ್ನಾಟಕ ಸರಕಾರದವರು ಪ್ರಾಥಮಿಕ ಶಿಕ್ಷಣ ಶಾಲೆಗಳಲ್ಲಿ ವಿಧಿಸಿರುವ ನೀತಿಬೋಧೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೇವುಡು ಅವರ ಬರೆದ ಕತೆಗಳನ್ನು ಇದರಲ್ಲಿ ಸಂಕಲಿಸಲಾಗಿದೆ. 

ಪ್ರಾಥಮಿಕ ಶಾಲಾ ಮಕ್ಕಳಿಗೆ ಉಪಾಧ್ಯಾಯರು ಮೊದಲ ದಿನ ಕತೆಯನ್ನು ರಸವತ್ತಾಗಿ ಹೇಳುವುದು. ಎರಡನೆಯ ದಿನ ಆ ಕತೆಯನ್ನು ವಿದ್ಯಾರ್ಥಿಗಳಿಂದಲೇ ಹೇಳಿಸುವುದು. ಮೂರನೆಯ ದಿನ ಕಥೆಯನ್ನು ನಾಟಕದಂತೆ ಆಡಿ ತೋರಿಸುವುದು - ಈ ವಿಧಾನವನ್ನು ಉಪಾಧ್ಯಾಯರು ಅನುಸರಿಸಿದರೆ, ಕಥೆಯಲ್ಲಿರುವ ನೀತಿಯು ಮಕ್ಕಳಿಗೆ ಚೆನ್ನಾಗಿ ಅರ್ಥವಾಗುತ್ತದೆ. ಹೀಗಾಗಬೇಕೆಂದೇ, ನೀತಿಯೊಂದನ್ನು ಮಕ್ಕಳ ಮುಂದಿಟ್ಟು ಕತೆಯನ್ನು ಹೇಳಬಾರದೆಂದೇ, ಇಲ್ಲಿನ ಕತೆಗಳಲ್ಲಿ ನೀತಿಗಳನ್ನು ಬರೆದಿಲ್ಲ - ಹೀಗೆಂದು ಪುಸ್ತಕದ “ಪೀಠಿಕೆ”ಯಲ್ಲಿ ಸ್ಪಷ್ಟಪಡಿಸಲಾಗಿದೆ.

Monday, January 26, 2026 - 08:15

ಲೇಖಕರು: ಬೆಸಗರಹಳ್ಳಿ ರಾಮಣ್ಣ 
ಪ್ರಕಾಶಕರು: ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರು 
ಪ್ರಕಟ: 1998        ಪುಟ: 212        ಬೆಲೆ: ರೂ. 100/- 

ಮಂಡ್ಯದ ಡಾ. ಬೆಸಗರಹಳ್ಳಿ ರಾಮಣ್ಣ ಕನ್ನಡದ ಹೆಸರುವಾಸಿ ಕತೆಗಾರರು. ಇದು ಅವರ ಎರಡನೆಯ ಕಥಾಸಂಕಲನ. ಅವರು 1985ರ ನಂತರ ಬರೆದ ಕತೆಗಳು ಈ ಸಂಕಲನದಲ್ಲಿವೆ (“ಕನ್ನಂಬಾಡಿ” ಎಂಬ ಮೊದಲನೆಯ ಸಂಕಲನದಲ್ಲಿ      ಅವರಿ 1962ರಿಂದ 1985ರ ಅವಧಿಯಲ್ಲಿ ಬರೆದ ಸಣ್ಣ ಕತೆಗಳು ಪ್ರಕಟವಾಗಿದ್ದವು.) ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪ್ರಕಟವಾದ ಸಂಕಲನ ಇದು. 

ಕಥಾಸಂಕಲನದ ಬೆನ್ನುಡಿಯಲ್ಲಿ ಯು. ಆರ್. ಅನಂತಮೂರ್ತಿಯವರು ಬರೆದ ಮಾತುಗಳು ಹೀಗಿವೆ: ಬೆಸಗರಹಳ್ಳಿ ರಾಮಣ್ಣನವರ ಕತೆಗಳ ವಸ್ತು: ನಿಸರ್ಗಕ್ಕೆ ಪರಕೀಯರಾಗದೆ ಉಳಿದ ಒಕ್ಕಲು ಮಕ್ಕಳ ನಿತ್ಯಜೀವನದ ಸುಖದುಃಖ, ಸಣ್ಣತನ, ಅಸೂಯೆ, ಔದಾರ್ಯ ಇತ್ಯಾದಿ. ಇವು ದಟ್ಟವಾದ ಅನುಭವದಿಂದ ಹುಟ್ಟಿದ ಕಥೆಗಳಾದ್ದರಿಂದ ಭಾವಾತಿರೇಕಕ್ಕಾಗಲಿ, ಸುಳ್ಳು ಆದರ್ಶಗಳಿಗಾಗಲಿ ಇವುಗಳಲ್ಲಿ ಎಡೆಯಿಲ್ಲ. ನಿಸರ್ಗ ಇವರ ಕತೆಗಳಲ್ಲಿ ಬರಿಯ ಪರಿಸರವಲ್ಲ; ನಿತ್ಯದ ದುಡಿಮೆಯಲ್ಲಿ ಭಾಗಿಯಾಗಿ, ವ್ಯಕ್ತಿ ಪ್ರಜ್ಞೆಯಲ್ಲಿ ಮಿಳಿತವಾಗಿರುವ ಒಂದು ಪಾತ್ರ. ಯಾವುದು ಘಟನೆ, ಯಾವುದು ಪಾತ್ರ, ಯಾವುದು ವಿವರ ಎಂದು ವಿಂಗಡಿಸಲಾಗದಂತೆ ಒಂದಕ್ಕೊಂದು ಹೊಸೆದುಕೊಂಡು ಮೂರ್ತವಾಗುವ ಕತೆಗಳನ್ನು ರಚಿಸಿದ್ದಾರೆ. ನಿಷ್ಠುರವಾಗಿ ಅನುಭವವನ್ನು ಶೋಧಿಸಬಲ್ಲ ಕನ್ನಡ ಲೇಖಕರಲ್ಲಿ ಬೆಸಗರಹಳ್ಳಿ ರಾಮಣ್ಣನವರು ಒಬ್ಬರು. 

Monday, January 26, 2026 - 08:12

ಲೇಖಕರು: ಪರಂಜ್ಯೋತಿ 
ಪ್ರಕಾಶಕರು: ಇಂಚರ ಪ್ರಕಾಶನ, ವಿವೇಕ ನಗರ, ಬೆಂಗಳೂರು 
ಪ್ರಕಟ: 2018         ಪುಟ: 136          ಬೆಲೆ: ರೂ. 130/- 

ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪರಂಜ್ಯೋತಿ ಅವರ ಸಚಿತ್ರ ಲೇಖನಗಳ ಸಂಕಲನ “ಮನೆಯಂಗಳದ ಮಿತ್ರರು”.  ಪರಂಜ್ಯೋತಿ ಎಂಬುದು ಕೆ.ಪಿ. ಸ್ವಾಮಿ ಅವರ ಕಾವ್ಯನಾಮ. ಇವರು ಕನ್ನಡದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ: ಕತೆಗಳು, ನೀಳ್ಗತೆಗಳು, ಮಕ್ಕಳ ಕತೆಗಳು, ಹಾಗೂ ಲೇಖನ ಸಂಕಲನಗಳು. “ಬೆಟ್ಟದ ಗಾಲಿ” ಇವರು ಬರೆದ ಕಾದಂಬರಿ ಮತ್ತು “ನೀಲಗಿರಿ: ಸಾಮಾಜಿಕ - ಸಾಂಸ್ಕೃತಿಕ ಕಣ್ಣೋಟ” ಕ್ಷೇತ್ರ ಅಧ್ಯಯನ ಆಧಾರಿತ ಬೃಹತ್ ಕೃತಿ. 

Monday, January 26, 2026 - 08:10

ಲೇಖಕರು: ಡಾ. ಕೆ. ಶಿವರಾಮ ಕಾರಂತ 
ವಿತರಕರು: ಸಪ್ನ ಬುಕ್ ಹೌಸ್, ಬೆಂಗಳೂರು 
ಮೊದಲ ಮುದ್ರಣ: 1973          ಐದನೇ ಮುದ್ರಣ: 2023       ಪುಟ: 220       ಬೆಲೆ: ರೂ.130/-

ಯಕ್ಷಗಾನ, ಚಿತ್ರಕಲೆ, ವಿಜ್ಞಾನ ಸಾಹಿತ್ಯ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದವರು ಡಾ. ಕೆ. ಶಿವರಾಮ ಕಾರಂತರು. ಐವತ್ತಕ್ಕೂ ಮಿಕ್ಕಿ ಕಾದಂಬರಿಗಳನ್ನು ಬರೆದವರು. “ಕಡಲತಡಿಯ ಭಾರ್ಗವ” ಎಂದು ಹೆಸರಾದವರು. ತಮ್ಮ ಅಧ್ಯಯನಶೀಲತೆ ಮತ್ತು ಪ್ರತಿಭೆಯಿಂದ ಕನ್ನಡದ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರೆನಿಸಿದವರು. 

ಅವರು ಬರೆದಿರುವ ಕೆಲವೇ ಪ್ರವಾಸ ಕಥನಗಳಲ್ಲೊಂದು “ಪಾತಾಳಕ್ಕೆ ಪಯಣ”. ಇದರ ಬಗ್ಗೆ ಮುನ್ನುಡಿಯಲ್ಲಿ ಡಾ. ಕಾರಂತರು ಹೀಗೆನ್ನುತ್ತಾರೆ: “ನನ್ನೀ ಬರಹದಲ್ಲಿ ನಾನು ನೋಡಿದ ಬೃಹತ್ ದೇಶವಾದ ಯುನೈಟೆಡ್ ಸ್ಟೇಟ್ಸಿನ ಅಲ್ಪ ಪರಿಚಯವು ನಿಮಗೆ ಆದೀತು. ನನಗೆ ಇರುವುದೂ ಅದರ ಅಲ್ಪ ಪರಿಚಯವೇ! ನಾನು ಅಲ್ಲಿ ಇದ್ದ ಕಾಲ ಬಲು ಸ್ವಲ್ಪ; ಅಲ್ಲಿನ ಜನಗಳ ಪರಿಚಯವನ್ನು ಬೆಳೆಯಿಸುವ ಅವಕಾಶವಂತೂ ಆಗಿರಲೇ ಇಲ್ಲ. ಇದೊಂದು ವಿಹಂಗಮ ನೋಟ. ಆ ದೇಶ ನೋಡಿ ತಿಳಿಯಬೇಕು, ಸಂತೋಷಪಡಬೇಕು ಎಂಬ ಬಯಕೆಯಿಂದ ಹೋದ ನನ್ನ ಅಲ್ಪ ಅನುಭವವನ್ನಷ್ಟೇ ಅದು ತಿಳಿಸೀತು!”

ಡಾ. ಶಿವರಾಮ ಕಾರಂತರು ಯುನೈಟೆಡ್ ಸ್ಟೇಟ್ಸಿಗೆ ಒಂದು ತಿಂಗಳ ಅವಧಿಯ ಪ್ರವಾಸವನ್ನು ಯೋಜಿಸಿದ್ದರು. ಅದನ್ನು ತಿಳಿದ  ಅವರ ಯಕ್ಷಗಾನದ ವಿದ್ಯಾರ್ಥಿ, ಮಿಚಿಗನ್ ವಿಶ್ವವಿದ್ಯಾಲಯದ ಮಾರ್ತಾ ಎಸ್ಟನ್ “ಏಷಿಯನ್ ಥಿಯೇಟರ್ ಸಂಸ್ಥೆಗಳ” ವತಿಯಿಂದ ಅವುಗಳ “ವಾರ್ಷಿಕ ಸಮ್ಮೇಳನಕ್ಕೆ ಬನ್ನಿ. 1972ರ ಆಗಸ್ಟ್ 21ರಿಂದ ಆಗಸ್ಟ್ 24ರ ತನಕ ನಮ್ಮ ಜೊತೆಗೆ ಇದ್ದು ಬಿಡಿ” ಎಂಬ ಆಹ್ವಾನ ನೀಡಿದ್ದು ಕಾರಂತರಿಗೆ ಅನುಕೂಲವೇ ಆಯಿತು. 

Monday, January 26, 2026 - 08:06

ಲೇಖಕರು: ದೇವುಡು ನರಸಿಂಹ ಶಾಸ್ತ್ರಿ 
ಪ್ರಕಾಶಕರು: ವಸಂತ ಪ್ರಕಾಶನ, ಜಯನಗರ, ಬೆಂಗಳೂರು 
ಪ್ರಕಟ: 1997         ಪುಟ: 278          ಬೆಲೆ: ರೂ.150/-

“ದೇವುಡು” ಎಂದೇ ಪ್ರಸಿದ್ಧರಾದ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ದೇವುಡು ನರಸಿಂಹ ಶಾಸ್ತ್ರಿಗಳು ಬರೆದಿರುವ 22 ಸಣ್ಣ ಕತೆಗಳು ಈ ಸಂಕಲನದಲ್ಲಿವೆ. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾದ ಈ ಕೃತಿಯ ಸಂಪಾದಕರು ಲಿಂಗರಾಜು. 

ಬಹುಮುಖ ಪ್ರತಿಭೆಯ ದೇವುಡು (1896-1962) ಅವರು ಕನ್ನಡನಾಡಿನಲ್ಲಿ ಮನೆಮಾತಾಗಿರುವುದು ಅವರ “ಮಹಾ…” ಸರಣಿಯ ಈ ಮೂರು ಬೃಹತ್ ಕಾದಂಬರಿಗಳಿಂದಾಗಿ: “ಮಹಾಕ್ಷತ್ರಿಯ”, ಮಹಾಬ್ರಾಹ್ಮಣ” ಮತ್ತು “ಮಹಾದರ್ಶನ”. ಇವು ಭಾರತದ ವೈದಿಕ ಸಂಸ್ಕೃತಿಯ ಮೂಲವನ್ನು ಹೊಸತನದಲ್ಲಿ ಕಟ್ಟಿಕೊಡುತ್ತವೆ. ಕನ್ನಡ, ಸಂಸ್ಕೃತ, ಇಂಗ್ಲಿಷ್ ಹಾಗೂ ತೆಲುಗು ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ದೇವುಡು ಮಹಾನ್ ವಿದ್ವಾಂಸರು. ಜೊತೆಗೆ, ವೇದ, ವೇದಾಂತ, ಭಗವದ್ಗೀತೆ, ರಾಮಾಯಣ, ಮಹಾಭಾರತ, ಉಪನಿಷತ್ತು ಮತ್ತು ಮೀಮಾಂಸ ಶಾಸ್ತ್ರ ಇವನ್ನು ಗಾಢವಾಗಿ ಅಧ್ಯಯನ ಮಾಡಿದವರು. ಅವರ ಕೃತಿಗಳ ಭಾಷಾ ಪ್ರೌಢಿಮೆ, ಪದ ಸಂಪತ್ತು, ಸೃಜನಶೀಲತೆ ಹಾಗೂ ಕಲ್ಪನಾವಿಲಾಸಗಳನ್ನು ಕಂಡಾಗ ನಮಗೆ ಅವರ ಅಧ್ಯಯನದ ಆಳ ಮತ್ತು ವ್ಯಾಪ್ತಿಯ ಪರಿಚಯವಾಗುತ್ತದೆ. 

ಸುಮಾರು 60ಕ್ಕೂ ಅಧಿಕ ಕೃತಿಗಳನ್ನು ರಚಿಸಿರುವ ದೇವುಡು ಅವರು ಹದಿನೈದು ಕಾದಂಬರಿಗಳು, ಹಲವು ಸಣ್ಣ ಕತೆಗಳು ಮತ್ತು ವಿದ್ವತ್-ಪೂರ್ಣ ಕೃತಿಗಳನ್ನು ಬರೆದು, ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದವರು. ವಿದ್ವಾಂಸರಿಗಾಗಿ “ಮೀಮಾಂಸ ದರ್ಪಣ” ರಚಿಸುವುದರ ಜೊತೆಗೆ “ಯೋಗವಾಸಿಷ್ಠ”ವನ್ನು 24 ಸಂಪುಟಗಳಲ್ಲಿ ಅನುವಾದಿಸಿರುವುದು ಗಮನಾರ್ಹ. ಮಕ್ಕಳಿಗಾಗಿಯೂ ಅವರು ಹಲವಾರು ಕತೆಗಳನ್ನು ಬರೆದಿದ್ದಾರೆ. 

Pages