HRM

ಸುಧೀರ ದುರ್ಬಲ ಹುಡುಗ. ಹಿರಿಯ ವಿದ್ಯಾರ್ಥಿಗಳು ಅವನಿಗೆ ಹೊಡೆದು, ಅವನು ತಂದಿದ್ದ ಬುತ್ತಿ ತಿನ್ನುತ್ತಿದ್ದರು. ಅವರ ವಿರುದ್ಧ ದೂರ ಕೊಡಬೇಕೆಂದು ಸುಧೀರ ಹೊರಟಾಗ, ಹಿರಿಯ ವಿದ್ಯಾರ್ಥಿಗಳು ಅವನನ್ನು ಹೆದರಿಸಿದರು. “ನೀನೇನಾದರೂ ನಮ್ಮ ವಿಷಯದಲ್ಲಿ ದೂರು ಕೊಟ್ಟರೆ, ನಿನಗೆ ಇನ್ನಷ್ಟು ತೊಂದರೆ ಕೊಡುತ್ತೇವೆ” ಎಂದರು. ಅಸಹಾಯಕನಾದ ಸುಧೀರ ಅದೊಂದು ದಿನ ದುಃಖದಿಂದ ಉದ್ಯಾನಕ್ಕೆ ಹೋದ. ಅಲ್ಲಿನ ಬೆಂಚಿನಲ್ಲಿ ಕುಳಿತಾಗ ಅವನೊಂದು ಕಣಜದ ಹುಳವನ್ನು ನೋಡಿದ. ತಕ್ಷಣವೇ ಅವನಿಗೆ ಹೆದರಿಕೆಯಾಯಿತು. ಅನಂತರ “ಇಷ್ಟು ಸಣ್ಣ ಕಣಜದ ಹುಳ ನನ್ನಲ್ಲಿ ಯಾಕೆ ಹೆದರಿಕೆ ಹುಟ್ಟಿಸುತ್ತದೆ?" ಎಂದು ಅವನು ಯೋಚಿಸಿದ.

“ಕಣಜದ ಹುಳ ಕಂಡೊಡನೆ ಅದು ಚುಚ್ಚುತ್ತದೆಂದು ಜನರು ಹೆದರುತ್ತಾರೆ. ಇದುವೇ ತನ್ನನ್ನು ರಕ್ಷಿಸಿಕೊಳ್ಳಲು ಉಪಾಯ” ಎಂದು ಸುಧೀರನಿಗೆ ಅರ್ಥವಾಯಿತು. ಮರುದಿನ ದಢಿಯ ಹುಡುಗನೊಬ್ಬ ಸುಧೀರನ ಬುತ್ತಿಯನ್ನು ಕಿತ್ತುಕೊಂಡು ತಿಂದ. ಆದರೆ, ಆ ದಿನ ಸುಧೀರ ತಂದಿದ್ದ ತಿನಿಸು ಭಾರೀ ಖಾರವಾಗಿತ್ತು. ಅದನ್ನು ತಿಂದ ದಢಿಯ ನೀರು ಕುಡಿಯಲಿಕ್ಕಾಗಿ ಓಡಿದ. ಅನಂತರ, ಸುಧೀರನ ಬುತ್ತಿಯನ್ನು ಯಾರೂ ಮುಟ್ಟಲಿಲ್ಲ. ಇನ್ನೊಮ್ಮೆ ದಾಂಢಿಗ ಹುಡುಗನೊಬ್ಬ ಸುಧೀರನಿಗೆ ಹೊಡೆಯಲು ಬಂದ. ಸುಧೀರ ಗಂಭೀರ ಧ್ವನಿಯಲ್ಲಿ ಅವನಿಗೆ ಹೇಳಿದ, "ನಾನು ಈಗಾಗಲೇ ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ನೀನೇನಾದರೂ ನನ್ನ ಮೈಮುಟ್ಟಿದರೆ ಅವರಿಗೆ ನಾನು ಫೋನ್ ಮಾಡ್ತೇನೆ. ಅವರು ಬಂದು ನಿನ್ನ ಹೆಡೆಮುರಿ ಕಟ್ಟಿ, ಜೈಲಿಗೆ ಒಯ್ಯುತ್ತಾರೆ.” ಇದನ್ನು ಕೇಳಿ ಹೆದರಿದ ದಾಂಢಿಗ ಅಲ್ಲಿಂದ ಓಡಿ ಹೋದ. ಅಂತೂ ಕಣಜದ ಹುಳದ ಸ್ಫೂರ್ತಿಯಿಂದ ಸುಧೀರ ಆತ್ಮವಿಶ್ವಾಸ ಬೆಳೆಸಿಕೊಂಡ.

ಜಗತ್ಪ್ರಸಿದ್ಧ ವಿಜ್ನಾನಿ, ಸಾಪೇಕ್ಷತಾ ಸಿದ್ಧಾಂತದ ಪ್ರತಿಪಾದಕ, ಐನ್-ಸ್ಟೀನ್ ಬಾಲ್ಯದಲ್ಲಿ ಸಾಧಾರಣ ಬುದ್ಧಿಮತ್ತೆಯ ಬಾಲಕನಾಗಿದ್ದ. ನಾಲ್ಕು ವರುಷ ವಯಸ್ಸಿನ ವರೆಗೆ ಆತ ಸರಿಯಾಗಿ ಮಾತನಾಡುತ್ತಿರಲಿಲ್ಲ ಮತ್ತು ಏಳು ವರುಷ ವಯಸ್ಸಿನ ವರೆಗೆ ಓದುತ್ತಿರಲಿಲ್ಲ. ಅವನ ಶಿಕ್ಷಕರೂ ಹೆತ್ತವರೂ ಅವನು ವಿಕಲಚೇತನ, ನಿಧಾನ ಕಲಿಕೆಯ ಮತ್ತು ಸಂವಹನದ ಸಮಸ್ಯೆಯಿರುವ ಬಾಲಕ ಎಂದೇ ಭಾವಿಸಿದ್ದರು. ಅವನ ಯೋಚನಾ ವಿಧಾನವೇ ಬೇರೆಯಾಗಿತ್ತು ಎಂಬುದು ಅವರು ಯಾರಿಗೂ ಅರ್ಥವಾಗಲೇ ಇಲ್ಲ.

ಅಂತೂ ಐನ್-ಸ್ಟೀನನ್ನು ಶಾಲೆಯಿಂದ ಹೊರ ಕಳಿಸಲಾಯಿತು! ಜ್ಯುರಿಚ್ ಪಾಲಿಟೆಕ್ನಿಕ್ ಶಾಲೆಯಲ್ಲಿ ಅವನಿಗೆ ಪ್ರವೇಶ ನಿರಾಕರಿಸಲಾಯಿತು. ಐನ್-ಸ್ಟೀನನ ಸಂವಹನದ ಮತ್ತು ವರ್ತನೆಯ ಸಮಸ್ಯೆಗಳಿಗೆ ಅವನ ಬುದ್ಧಿವಂತಿಕೆ ಕಡಿಮೆ ಆಗಿದ್ದದ್ದು ಕಾರಣವಾಗಿರಲಿಲ್ಲ. ಶಾಲೆಯಲ್ಲಿ ಇತರರಂತೆ “ಕಲಿಯಲು” ಅವನು ನಿಧಾನವಾಗಿ ಶುರು ಮಾಡಿರಬಹುದು; ಆದರೆ, ಅಂತಿಮವಾಗಿ ಐನ್-ಸ್ಟೀನ್ ತನ್ನ ಪ್ರಚಂಡ ಬುದ್ಧಿಮತ್ತೆ ಮತ್ತು ಪ್ರತಿಭೆಯಿಂದ ಬೆಳಗಿದ. ತನ್ನ ಸಾಪೇಕ್ಷತಾ ಸಿದ್ಧಾಂತದ ಮೂಲಕ ನ್ಯೂಟನನ ಭೌತಶಾಸ್ತ್ರದ ಸಿದ್ಧಾಂತಗಳ ನ್ಯೂನತೆಗಳನ್ನು ಸರಿಪಡಿಸಿದ. ಇದಕ್ಕಾಗಿ ಐನ್-ಸ್ಟೀನನ್ನು ಭೌತಶಾಸ್ತ್ರದ ನೊಬೆಲ್ ಪಾರಿತೋಷಕದಿಂದ ಪುರಸ್ಕರಿಸಲಾಯಿತು. ಅವನ E = mc2 ಎಂಬ ಅದ್ಭುತ ಸೂತ್ರ ಪ್ರತಿಯೊಬ್ಬರಿಗೂ ಪರಿಚಿತ. ಐನ್-ಸ್ಟೀನ್ ಅತ್ಯಧಿಕ ಐಕ್ಯೂ ಹೊಂದಿದ್ದ ವ್ಯಕ್ತಿ ಎಂಬುದಂತೂ ಎಲ್ಲರಿಗೂ ಗೊತ್ತು.

ಚಿನ್ಮಯಿಗೆ ಕಿವಿ ಕೇಳಿಸುತ್ತಿರಲಿಲ್ಲ. ಅವಳ ಸಹಪಾಠಿಗಳಿಗೆ ಅವಳೆಂದರೆ ಅಚ್ಚುಮೆಚ್ಚು. ಆದರೆ ಅವಳೊಂದಿಗೆ ಯಾರೂ ಆಟವಾಡುತ್ತಿರಲ್ಲ. ಅವರಿಗೆಲ್ಲರಿಗೂ ಆತಂಕ - ಆಟವಾಡುವಾಗ ಅವಳಿಗೆ ಏಟಾದರೆ ಎಂದು. ಹಿರಿಯರೂ ತಮ್ಮ ಮಾತುಗಳು ಅವಳಿಗೆ ಅರ್ಥವಾಗುವುದಿಲ್ಲವೆಂದು ಅವಳನ್ನು ದೂರವಿಟ್ಟಿದ್ದರು. ಅಂತೂ ಚಿನ್ಮಯಿಯೊಂದಿಗೆ ಆಟವಾಡುವವರೂ ಇಲ್ಲ, ಮಾತನಾಡುವವರೂ ಇಲ್ಲ. ಇದರಿಂದಾಗಿ ಅವಳನ್ನು ಒಬ್ಬಂಟಿತನ ಕಾಡುತ್ತಿತ್ತು; ಅವಳಿಗೆ ದುಃಖವಾಗುತ್ತಿತ್ತು. ಅದೊಂದು ದಿನ ಚಿನ್ಮಯಿಯ ಗೆಳತಿ ಪಾವನಿ ಹಿರಿಯರೊಂದಿಗೆ ಮಾತನಾಡಿದಳು; ಭಾನುವಾರವನ್ನು “ಕಿವುಡು ದಿನ”ವಾಗಿ ಆಚರಿಸಬೇಕೆಂದು ಆಗ್ರಹಿಸಿದಳು. ಎಲ್ಲರೂ ಒಪ್ಪಿದರು.

ಹಾಗಾಗಿ, ಮುಂದಿನ ಭಾನುವಾರ ಎಲ್ಲರೂ ಇಯರ್-ಪ್ಲಗ್ ಹಾಕಿಕೊಂಡು ಬಂದರು. ಶುರುವಿಗೆ ಅವರೆಲ್ಲರಿಗೂ ಇದು ಮಜವೆಂದು ಅನಿಸಿತು. ಆದರೆ ಕ್ರಮೇಣ ಅವರಿಗ ಅರ್ಥವಾಯಿತು - ಇಯರ್-ಪ್ಲಗ್ ಹಾಕಿಕೊಂಡರೆ ಇತರರ ಮಾತು ಕೇಳಲು ಎಷ್ಟು ಕಷ್ಟವಾಗುತ್ತದೆ ಎಂದು. ಜೊತೆಗೆ, ಚಿನ್ಮಯಿಗೆ ಇತರರೊಂದಿಗೆ ಸಂವಹನ ನಡೆಸಲು ಎಷ್ಟು ಕಷ್ಟವಾಗುತ್ತಿರಬಹುದು ಎಂಬುದೂ ಅವರಿಗೆ ಅರ್ಥವಾಯಿತು. ಆದರೂ, "ಕೈಸನ್ನೆ ಭಾಷೆ” ಮತ್ತು ಹಾವಭಾವಗಳ ಮೂಲಕ ಚಿನ್ಮಯಿ ಸಮರ್ಥವಾಗಿ ಸಂವಹನ ಮಾಡುತ್ತಿದ್ದಳು. ಈಗ ಅವರೆಲ್ಲರೂ ಚಿನ್ಮಯಿ ಜೊತೆ ಮಾತನಾಡಲು ಪ್ರಯತ್ನಿಸಿದರು ಮತ್ತು ತಮ್ಮ ಆಟಗಳಲ್ಲಿ ಚಿನ್ಮಯಿಯನ್ನೂ ಸೇರಿಸಿಕೊಂಡರು. ಅವರಲ್ಲಿ ಹಲವರು ಕೈಸನ್ನೆ ಭಾಷೆ ಕಲಿತರು. ಅನಂತರ ಚಿನ್ಮಯಿಗೆ ತಾನು ಒಬ್ಬಂಟಿ ಅನಿಸಲೇ ಇಲ್ಲ. ಯಾಕೆಂದರೆ, ಈಗ ಅವಳೊಂದಿಗೆ ಆಟವಾಡಲು ಮತ್ತು ಮಾತನಾಡಲು ಗೆಳೆಯರ ತಂಡವೇ ಜೊತೆಗಿರುತ್ತಿತ್ತು.

ಹಲವಾರು ದಶಕಗಳ ಮುಂಚೆ ಜರ್ಮನಿಯಲ್ಲಿ ಲುಡ್ವಿಗ್ ವ್ಯಾನ್ ಬೀತೋವನ್ ಜನನ. ಅವನ ಬಾಲ್ಯದಲ್ಲಿ, ಸಣ್ಣಪುಟ್ಟ ತಪ್ಪುಗಳಿಗೂ ಅವನ ತಂದೆ ಅವನನ್ನು ಸದೆಬಡಿಯುತ್ತಿದ್ದ. ಅವನು ಪಿಯಾನೋವನ್ನು ಸರಿಯಾಗಿ ನುಡಿಸುವುದಿಲ್ಲವೆಂದು ಅವನನ್ನು ಟೀಕಿಸಲಾಗುತ್ತಿತ್ತು. ಅವನ ಟೀಚರುಗಳೂ ಅವನೊಬ್ಬ “ನಿರಾಶಾದಾಯಕ ಕಂಪೋಸರ್" ಎಂದು ಹೇಳಿದ್ದರು. ಅಂತೂ ಬೀತೋವನನ್ನು ಹೊಗಳುವವರು ಅಥವಾ ಅವನಿಗೆ ಪ್ರೋತ್ಸಾಹ ನೀಡುವವರು ಯಾರೂ ಇರಲಿಲ್ಲ.

ಆದರೆ ಬೀತೋವನ್ ನಿರಾಶನಾಗಲಿಲ್ಲ. ಅವನು ಸಂಗೀತದಲ್ಲಿ ಸತತವಾಗಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ದ. ಕೊನೆಗೂ ಅವನು ಸಾಂಪ್ರದಾಯಿಕ ಸಂಗೀತಕ್ಕೆ ಹೊಸ ಆಯಾಮವೊಂದನ್ನು ನೀಡುವ ಸಾಧನೆ ಮಾಡಿದ. ತನ್ನ ಸಾಧನೆಯ ಬಗ್ಗೆ ಅವನು ಹೀಗೆನ್ನುತ್ತಿದ್ದ, “ಯಾವಾಗಲೂ ಸಂಗೀತ ಕಂಪೋಸ್ ಮಾಡುವಾಗ ನನ್ನ ಮನಸ್ಸಿನಲ್ಲೊಂದು ಚಿತ್ರವಿರುತ್ತದೆ. ನಾನು ಆ ಚಿತ್ರವನ್ನು ಅನುಸರಿಸಿ ಸಂಗೀತ ನುಡಿಸುತ್ತೇನೆ.” ಬೀತೋವನ್ ತನ್ನ ಸಂಗೀತ ಸಾಧನೆಯ ಉತ್ತುಂಗದಲ್ಲಿ ಇದ್ದಾಗ, ಅವನಿಗೆ ಆಘಾತ. ಅವನು ತನ್ನ ಶ್ರವಣ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡ. ಆದರೂ ಬೀತೋವನ್ ತನ್ನ ಸಾಧನಾಪಥದಲ್ಲಿ ಮುಂದುವರಿದ; ಐದು ಜಗತ್ಪ್ರಸಿದ್ಧ ಸಿಂಫೋನಿಗಳನ್ನು ಅವನು ಕಂಪೋಸ್ ಮಾಡಿದ.

ಇಷ್ಟಾದರೂ ಅವನ ಟೀಕಾಕಾರರು ಸುಮ್ಮನಾಗಲಿಲ್ಲ. "ಆ ಸಿಂಫೋನಿಗಳು ಅಸಾಂಪ್ರದಾಯಿಕ” ಎಂಬುದವರ ಟೀಕೆ. ಬೀತೋವನ್ ಇದರಿಂದ ವಿಚಲಿತನಾಗಲಿಲ್ಲ. ಯಾಕೆಂದರೆ ಅವನಿಗೆ ತನ್ನ ಸಿಂಫೋನಿಗಳ ನಾವೀನ್ಯದಲ್ಲಿ ನಂಬಿಕೆಯಿತ್ತು. ಕೊನೆಗೂ ಅವನು ಜಗದ್ವಿಖ್ಯಾತ ಕ್ಲಾಸಿಕಲ್ ಸಂಗೀತದ ಕಂಪೋಸರ್ ಎಂದು ಗೌರವಿಸಲ್ಪಟ್ಟ. ಪಾಶ್ಚಾತ್ಯ ಕ್ಲಾಸಿಕಲ್ ಸಂಗೀತವನ್ನು ರೋಮ್ಯಾಂಟಿಕ್ ಸಂಗೀತವಾಗಿ ಪರಿವರ್ತಿಸುವ ಮಹಾನ್ ಸಾಧನೆಯಲ್ಲಿ ಲುಡ್ವಿಗ್ ವ್ಯಾನ್ ಬೀತೋವನ್ ಪಾತ್ರಕ್ಕೆ ಸರಿಸಾಟಿಯಿಲ್ಲ.

ಚಂದದ ಉದ್ಯಾನದಲ್ಲಿ ಹಲವಾರು ಕೀಟಗಳ ವಾಸ. ಅಲ್ಲಿದ್ದ ಮನಮೋಹಕ ಚಿಟ್ಟೆಯೊಂದಕ್ಕೆ ತನ್ನ ಸೌಂದರ್ಯದ ಬಗ್ಗೆ ಬಹಳ ಜಂಬ. ಯಾವಾಗಲೂ ತನಗಿಂತ ಸುಂದರ ಚಿಟ್ಟೆ ಈ ಜಗತ್ತಿನಲ್ಲೇ ಇಲ್ಲವೆಂದು ಆತ್ಮಪ್ರಶಂಸೆ ಮಾಡಿಕೊಳ್ಳುತ್ತಿತ್ತು. ಜಿರಳೆಯೊಂದಕ್ಕೆ ಇದನ್ನು ಕೇಳಿಕೇಳಿ ಸಾಕಾಯಿತು. ಅದು ಚಿಟ್ಟೆಗೆ ಸವಾಲು ಹಾಕಿತು, “ನೀನು ಅಷ್ಟೆಲ್ಲ ಜಂಬ ಪಡಬೇಕಾಗಿಲ್ಲ. ನನ್ನ ಜೊತೆ ಸೌಂದರ್ಯ ಸ್ಪರ್ಧೆಗೆ ಬಾ.”

ಈ ಸವಾಲನ್ನು ಕೇಳಿದ ಚಿಟ್ಟೆ ಬಿದ್ದುಬಿದ್ದು ನಕ್ಕಿತು. “ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವುದು ನಾನೇ. ಸರಿ, ಸ್ಪರ್ಧೆ ನಡೆಸೋಣ. ತೀರ್ಪುಗಾರರನ್ನು ನೇಮಿಸು” ಎಂದು ಸ್ಪರ್ಧೆಗೆ ಮುಂದಾಯಿತು ಚಿಟ್ಟೆ. ಜಿರಳೆಗಳು, ಹುಳಗಳು ಮತ್ತು ಚಿಪ್ಪುಹುಳಗಳು ಸ್ಪರ್ಧೆಯ ತೀರ್ಪುಗಾರರೆಂದು ಆಯ್ಕೆಯಾದರು. ಅವರೆಲ್ಲರೂ ಜಿರಳೆಯೇ ಸ್ಪರ್ಧೆಯ ವಿಜೇತ ಎಂದು ತೀರ್ಪು ನೀಡಿದರು. ಚಿಟ್ಟೆ ತೀರ್ಪುಗಾರರ ಜೊತೆ ಜಗಳವಾಡಿತು. "ನಾನೇ ಅತ್ಯಂತ ಸುಂದರ ಕೀಟ ಎಂಬುದನ್ನು ಪ್ರತಿಯೊಬ್ಬರೂ ಕಣ್ಣಾರೆ ಕಾಣಬಹುದು. ನಿಮ್ಮ ತೀರ್ಪು ನ್ಯಾಯಸಮ್ಮತವಲ್ಲ” ಎಂದಿತು ಚಿಟ್ಟೆ. ಆಗ ಚಿಪ್ಪುಹುಳವೊಂದು ಹೀಗೆಂದಿತು, “ಓ ಚಿಟ್ಟೆ, ನಿನ್ನಲ್ಲಿ ಇರೋದು ಬಾಹ್ಯ ಸೌಂದರ್ಯ ಅಷ್ಟೇ. ಕಳೆದ ಚಳಿಗಾಲದಲ್ಲಿ ನನ್ನ ಮನೆ ಹಾಳಾಗಿ ಹೋಯಿತು. ನಾನು ನಿನ್ನ ಬಳಿ ಬಂದು ನನಗೆ ಸಹಾಯ ಮಾಡಬೇಕೆಂದು ಕೇಳಿದೆ. ಆದರೆ ನೀನು ನಿನ್ನ ಮನೆಯ ಬಾಗಿಲನ್ನು ದಢಾರನೆ ಮುಚ್ಚಿದೆ. ಆಗ ಜಿರಳೆ ನನ್ನನ್ನು ಕರೆದು ತನ್ನ ಮನೆಯಲ್ಲಿ ನನಗೆ ಆಶ್ರಯ ಕೊಟ್ಟಿತು. ಚಳಿಗಾಲವಿಡೀ ಜಿರಳೆ ನನಗೆ ಸಹಾಯ ಮಾಡಿತು." ಈಗ ಚಿಟ್ಟೆ ತಲೆ ತಗ್ಗಿಸಿತು. "ಜಿರಳೆ, ನಿನ್ನಲ್ಲಿ ನಿಜಕ್ಕೂ ಸೌಂದರ್ಯವಿದೆ” ಎಂದು ಚಿಟ್ಟೆ ತೀರ್ಪುಗಾರರ ತೀರ್ಪನ್ನು ಅನುಮೋದಿಸಿತು.

ಹೆಲೆನ್ ಕೆಲ್ಲರ್ ಹುಟ್ಟಿದಾಗ (1880) ಆಕೆಯ ಹೆತ್ತವರಿಗೆ ಸಂಭ್ರಮ. ದುರದೃಷ್ಟದಿಂದ ಆ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಯಾಕೆಂದರೆ ಆಕೆ ಸ್ಕಾರ್ಲೆಟ್ ಜ್ವರ ಪೀಡಿತಳಾದಳು. ಅವಳ ಅಮ್ಮ ಆಹೋರಾತ್ರಿ ಅವಳ ಆರೈಕೆ ಮಾಡಿ, ಅವಳ ಜೀವ ಉಳಿಸಿದರು. ಆದರೆ ಆ ಜ್ವರದಿಂದಾಗಿ ಹೆಲೆನ್ ಕೆಲ್ಲರ್ ದೃಷ್ಟಿ ಮತ್ತು ಶ್ರವಣ ಶಕ್ತಿ ಕಳೆದುಕೊಂಡಳು. ಆಕೆ ದುಃಖದಿಂದ ದಿನಗಳೆಯುತ್ತಿದ್ದಳು.

ಹೆಲೆನ್ ಕೆಲ್ಲರಿಗೆ ಏಳು ವರುಷ ವಯಸ್ಸಾದಾಗ, ಅನ್ನಿ ಸುಲ್ಲಿವಾನ್ ಎಂಬ ದೃಷ್ಟಿಹೀನ ಯುವತಿಯ ಪರಿಚಯವಾಯಿತು. “ಈ ಜಾಣ ಹುಡುಗಿಗೆ ನಾನು ವಿದ್ಯೆ ಕಲಿಸುತ್ತೇನೆ” ಎಂದು ಹೆಲೆನ್ ಕೆಲ್ಲರಳ ಹೆತ್ತವರಿಗೆ ಸುಲ್ಲಿವಾನ್ ಭರವಸೆ ನೀಡಿದಳು. ಇತರ ಕಿವುಡ ಮಕ್ಕಳಂತೆ ಹೆಲೆನ್ ಕೆಲ್ಲರಳಿಗೆ ತನ್ನ ಧ್ವನಿಯೇ ಕೇಳುತ್ತಿರಲಿಲ್ಲ ಮತ್ತು ಅವಳಿಗೆ ಮಾತನಾಡಲಿಕ್ಕೂ ಆಗುತ್ತಿರಲಿಲ್ಲ. ಸುಲ್ಲಿವಾನಳ ತರಬೇತಿಯಿಂದಾಗಿ ಹೆಲೆನ್ ಕೆಲ್ಲರ್ ಬೇಗನೇ ಇಂಗ್ಲಿಷ್ ಮಾತನಾಡಲು ಕಲಿತಳು; ಅನಂತರ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ಮಾತನಾಡಲಿಕ್ಕೂ ಕಲಿತಳು! ಅವಳು ಉಬ್ಬಿದ ಅಕ್ಷರಗಳನ್ನು ತನ್ನ ಬೆರಳು ತುದಿಗಳಿಂದ ಸ್ಪರ್ಶಿಸಿ ಓದಲಿಕ್ಕೂ ಕಲಿತಳು. ಕ್ರಮೇಣ “ಬಿಂದುಗಳ ಲಿಪಿ ಬ್ರೇಲ್”ನಲ್ಲಿಯೂ ಓದಲು ಕಲಿತಳು. ಬೋಸ್ಟನಿನ ರಾಡ್‌ಕ್ಲಿಫ್ ಕಾಲೇಜಿನಲ್ಲಿ ಶಿಕ್ಷಣ ಪಡೆದು, 1904ರಲ್ಲಿ ಉತ್ತಮ ಶ್ರೇಣಿಯಲ್ಲಿ ಪದವೀಧರಳಾದಳು. ಮುಂದೆ ಹೆಲೆನ್ ಕೆಲ್ಲರ್ ಹಲವಾರು ದೇಶಗಳಲ್ಲಿ ಉಪನ್ಯಾಸಗಳನ್ನು ನೀಡಿ, ದೃಷ್ಟಿಹೀನ ಮತ್ತು ಕಿವುಡ ಮಕ್ಕಳ ಪೋಷಣೆಗಾಗಿ ಲಕ್ಷಗಟ್ಟಲೆ ರೂಪಾಯಿ ದೇಣಿಗೆ ಸಂಗ್ರಹಿಸಿದಳು. ಈ ರೀತಿಯಲ್ಲಿ ಜಗತ್ತಿನ ಎಲ್ಲ ವಿಕಲಚೇತನ ವ್ಯಕ್ತಿಗಳಿಗೆ ಹೆಲನ್ ಕೆಲ್ಲರಳ ಬದುಕು ದೊಡ್ಡ ಪ್ರೇರಣೆ.

ಇಬ್ಬರು ಪುಟ್ಟ ಸೋದರಿಯರು ಯಾವಾಗಲೂ ತಮ್ಮ ಆಟಿಕೆಗಳನ್ನು ಹಂಚಿಕೊಂಡು ಆಟವಾಡುತ್ತಿದ್ದರು. ಅದೊಂದು ದಿನ ಅವರಿಬ್ಬರಲ್ಲಿ ಹೊಸ ಆಟಿಕೆಯೊಂದಕ್ಕಾಗಿ ಜಗಳವಾಯಿತು. ಅದರಿಂದಾಗಿ ಅವರು ತಮ್ಮ ಆಟಿಕೆಗಳನ್ನು ಎರಡು ಪಾಲು ಮಾಡಿಕೊಂಡರು. ಅನಂತರ, ತಮ್ಮತಮ್ಮ ಆಟಿಕೆಗಳೊಂದಿಗೆ ಮಾತ್ರ ಅವರು ಆಟವಾಡುತ್ತಿದ್ದರು; ಜೊತೆಯಾಗಿ ಆಟವಾಡುತ್ತಿರಲಿಲ್ಲ. ಆಟವಾಡಿದ ನಂತರ ತಮ್ಮತಮ್ಮ ಆಟಿಕೆಗಳನ್ನು ಪ್ರತ್ಯೇಕವಾಗಿ ಇಡುತ್ತಿದ್ದರು.

ಕೆಲವು ವರುಷಗಳು ದಾಟಿದವು. ಅವರು ದೊಡ್ಡವರಾದರು. ಆದರೆ ಅವರು ಯಾವತ್ತೂ ಜೊತೆಯಾಗಿ ಆಟವಾಡಲಿಲ್ಲ. ಒಬ್ಬರನ್ನೊಬ್ಬರು ನೋಡಿದಾಗ ಮುಗುಳ್ನಗುತ್ತಲೂ ಇರಲಿಲ್ಲ. ಒಮ್ಮೆ ಅವರು ಅತ್ತೆಯ ಮನೆಗೆ ಹೋದರು. ಅಲ್ಲಿ ಪಕ್ಕದ ಉದ್ಯಾನದಲ್ಲಿ ಇಬ್ಬರು ಪುಟ್ಟ ಬಾಲಕಿಯರು ನಗುನಗುತ್ತಾ ಆಟಿಕೆಗಳೊಂದಿಗೆ ಆಟವಾಡುತ್ತಿದ್ದುದನ್ನು ಇವರು ಕಂಡರು. ಇವರಿಬ್ಬರು ಸೋದರಿಯರಿಗೆ ತಾವೂ ಬಾಲ್ಯದಲ್ಲಿ ಹಾಗೆಯೇ ಆಟವಾಡುತ್ತಿದ್ದದ್ದು ನೆನಪಾಯಿತು. ತಾವು ಎಂತಹ ತಪ್ಪು ಮಾಡಿದೆವೆಂದು ಇವರಿಗೆ ಈಗ ಅರ್ಥವಾಯಿತು. ತಾವಿಬ್ಬರೂ ಆ ಪುಟ್ಟ ಮಕ್ಕಳಂತೆಯೇ ಹಲವಾರು ವರುಷ ಖುಷಿಯಿಂದ ಆಟವಾಡುತ್ತ ಇರಬಹುದಾಗಿತ್ತು; ಅದನ್ನು ತಾವು ಕಳೆದುಕೊಂಡೆವು ಎಂದು ಪಶ್ಚಾತ್ತಾಪ ಪಟ್ಟರು. ಅನಂತರ ಇವರಿಬ್ಬರೂ ಪರಸ್ಪರರೊಂದಿಗೆ ಪ್ರೀತಿವಿಶ್ವಾಸದಿಂದ ದಿನಗಳೆಯ ತೊಡಗಿದರು.

ಸಮುದ್ರದಲ್ಲಿ ಒಂದು ಜೆಲ್ಲಿಮೀನು ವಾಸವಾಗಿತ್ತು. ಇತರ ಮೀನುಗಳು ಅದನ್ನು ಇಷ್ಟ ಪಡುತ್ತಿರಲಿಲ್ಲ ಯಾಕೆಂದರೆ ಅದರ ಮುಳ್ಳು ಭಾರೀ ಅಪಾಯಕಾರಿ. ಎಲ್ಲ ಮೀನುಗಳೂ ಅದರಿಂದ ದೂರವೇ ಇರುತ್ತಿದ್ದ ಕಾರಣ ಜೆಲ್ಲಿಮೀನಿಗೆ ದುಃಖವಾಯಿತು. ಒಂದು ದಿನ ಬೇರೊಂದು ಮೀನನ್ನು ಹಿಡಿಯುವಾಗ ಜೆಲ್ಲಿಮೀನಿನ ನೂಲಿನಂತಹ ಗ್ರಹಣಾಂಗಗಳು ಒಂದಕ್ಕೊಂದು ಸಿಕ್ಕಿ ಹಾಕಿಕೊಂಡವು. ಅದಕ್ಕೆ ಅತ್ತಿತ್ತ ಚಲಿಸಲು ಸಾಧ್ಯವಾಗಲಿಲ್ಲ. ಹತ್ತಿರದಲ್ಲಿ ಈಜುತ್ತಾ ಹೋಗುತ್ತಿದ್ದ ಮೀನುಗಳನ್ನು ಕರೆದು ಸಹಾಯಕ್ಕಾಗಿ ವಿನಂತಿಸಿತು ಜೆಲ್ಲಿಮೀನು. ಆದರೆ ಆ ಮೀನುಗಳು ದೂರ ಸಾಗಿದವು.

ಕೊನೆಗೆ ಒಂದು ವಿಚಿತ್ರ ಮೀನಿಗೆ ಜೆಲ್ಲಿಮೀನಿನ ಮೇಲೆ ಕರುಣೆ ಮೂಡಿತು. ಅದು ಜೆಲ್ಲಿಮೀನಿನ ಗ್ರಹಣಾಂಗಗಳ ಸಿಕ್ಕು ಬಿಡಿಸಲು ಸಹಾಯ ಮಾಡಿತು. ಜೆಲ್ಲಿ ಮೀನು ಕೃತಜ್ನತೆ ಸಲ್ಲಿಸಿತು; ಆದರೆ ಕೈಕುಲುಕಲಿಲ್ಲ. ಯಾಕೆಂದರೆ, ಕೈಕುಲುಕುವಾಗ ವಿಚಿತ್ರ ಮೀನಿಗೆ ಘಾಸಿಯಾಗಬಹುದೆಂದು ಜೆಲ್ಲಿಮೀನಿಗೆ ಆತಂಕ. ಅಷ್ಟರಲ್ಲಿ ಒಂದು ದೊಡ್ಡ ಶಾರ್ಕ್ ಮೀನು ಅಲ್ಲಿಗೆ ನುಗ್ಗಿತು ಮತ್ತು ವಿಚಿತ್ರ ಮೀನನ್ನು ಬೆನ್ನಟ್ಟಿತು. ಇತರ ಎಲ್ಲ ಮೀನುಗಳೂ ಭಯದಿಂದ ಸಿಕ್ಕಸಿಕ್ಕಲ್ಲಿಗೆ ಈಜುತ್ತಾ ಹೋದವು. ತನ್ನನ್ನು ರಕ್ಷಿಸಿದ ವಿಚಿತ್ರ ಮೀನಿಗೆ ಅಪಾಯ ಕಾದಿದೆ ಎಂದು ಜೆಲ್ಲಿಮೀನಿಗೆ ತಿಳಿಯಿತು. ಅದು, ಧಾವಿಸಿ ಹೋಗಿ ಶಾರ್ಕ್ ಮೀನಿಗೆ ಸೂಕ್ಷ್ಮ ಜಾಗಗಳಲ್ಲಿ ಚುಚ್ಚಿತು - ಕಣ್ಣುಗಳಿಗೆ, ಕಿವಿರುಗಳಿಗೆ ಮತ್ತು ಹೊಟ್ಟೆಗೆ. ಶಾರ್ಕ್ ಮೀನಿಗೆ ಆಘಾತವಾಯಿತು. ಅದು ಹೆದರಿ ಅಲ್ಲಿಂದ ದೂರಕ್ಕೆ ಓಡಿ ಹೋಯಿತು. ಇತರ ಮೀನುಗಳು ಜೆಲ್ಲಿಮೀನಿನ ಧೈರ್ಯಕ್ಕೆ ಅದನ್ನು ಅಭಿನಂದಿಸಿದವು. ಅನಂತರ, ಜೆಲ್ಲಿಮೀನು, ವಿಚಿತ್ರ ಮೀನು ಮತ್ತು ಇತರ ಮೀನುಗಳೆಲ್ಲವೂ ಒಳ್ಳೆಯ ಸ್ನೇಹಿತರಾದವು.

ಅದೊಂದು ನವಿಲು. ಚಂದದ ನವಿಲು. ತನ್ನ ಚಂದದ ಬಗ್ಗೆ ಅದಕ್ಕೆ ಭಾರೀ ಜಂಬ. ಒಮ್ಮೆ ಮಳೆಗಾಲದ ಶುರುವಿನಲ್ಲಿ ಕುಣಿಯುತ್ತಿದ್ದಾಗ ಅದರ ಗರಿಯೊಂದರ “ಕಣ್ಣು" ಬಿದ್ದು ಹೋಯಿತು. ಇದನ್ನು ಗಮನಿಸಿದ ನವಿಲು, ಕಾಡಿನ ಅತ್ಯುತ್ತಮ ಪತ್ತೇದಾರರಾದ ನರಿ ಮತ್ತು ಮಂಗನನ್ನು ಕರೆಯಿತು. ತನ್ನ ಗರಿಯ ಕಣ್ಣನ್ನು ಹುಡುಕಿ ಕೊಡಬೇಕೆಂದಿತು.

ನರಿ ಮತ್ತು ಮಂಗ - ಇಬ್ಬರೂ ಬುದ್ಧಿವಂತರೇ. ಕಾಡಿನಲ್ಲಿ ನವಿಲಿನ ಕಣ್ಣನ್ನು ಹುಡುಕಲಿಕ್ಕಾಗಿ ನರಿ ಹಲವೆಡೆ ತಿರುಗಾಡಿತು.. ಆಗ ಅದು ಒಂದು ಹಾವನ್ನು ಕಂಡಿತು. ಆದರೆ ನವಿಲಿನ ಕಣ್ಣಿನ ಬಗ್ಗೆ ಹಾವನ್ನು ನರಿ ವಿಚಾರಿಸಲಿಲ್ಲ. ಯಾಕೆಂದರೆ ತಾನು ಹಾವಿಗಿಂತ ಬುದ್ಧಿವಂತ ಎಂಬುದು ನರಿಯ ಭಾವನೆ. ಕೊನೆಗೂ ನರಿಗೆ ನವಿಲಿನ ಬಿದ್ದುಹೋದ ಕಣ್ಣನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.

ಮಂಗ ನರಿಯ ಹಾಗಲ್ಲ; ಮಂಗನ ಮಾತು ಜಾಸ್ತಿ. ಅದೂ ಕಾಡಿನಲ್ಲಿ ಹಲವೆಡೆ ಸುತ್ತಾಡಿ ನವಿಲಿನ ಕಣ್ಣನ್ನು ಹುಡುಕಿತು. ಮಂಗನೂ ಅದೇ ಹಾವನ್ನು ನೋಡಿತು. ಅದು ಕೂಡಲೇ ಹಾವಿಗೆ ವಂದಿಸಿತು ಮತ್ತು ನವಿಲಿನ ಬಿದ್ದುಹೋದ ಕಣ್ಣಿನ ಬಗ್ಗೆ ವಿಚಾರಿಸಿತು. ನವಿಲು ಕುಣಿಯುತ್ತಿದ್ದಾಗ ಅದರ ಗರಿಯಿಂದ “ಕಣ್ಣು" ನೆಲಕ್ಕೆ ಬಿದ್ದದ್ದನ್ನು ಹಾವು ಕಂಡಿತ್ತು. ಆ ಜಾಗವನ್ನು ಮಂಗನಿಗೆ ಹಾವು ತೋರಿಸಿತು. ಅಲ್ಲಿ ಹುಡುಕಿದಾಗ ನವಿಲಿನ ಗರಿಯ ಕಣ್ಣು ಸಿಕ್ಕಿತು! ಅದನ್ನು ನವಿಲಿಗೆ ಮಂಗ ತಲಪಿಸಿತು. ಇದಕ್ಕಾಗಿ ಮಂಗನಿಗೆ ದೊಡ್ಡ ಬಹುಮಾನವನ್ನು ನವಿಲು ಕೊಟ್ಟಿತು. ಈಗ ನರಿಗೆ ಅರ್ಥವಾಯಿತು: ಬೇರೆಯವರ ಸಹಾಯ ಕೇಳುವುದರಿಂದ ತನ್ನ ಬುದ್ಧಿವಂತಿಕೆ ಕಡಿಮೆಯಾಗೋದಿಲ್ಲ ಎಂದು.

ಗೀಜಗನ ಹಕ್ಕಿಗಳು ತಮ್ಮ ಗೂಡಿನಿಂದ ಹೊರಕ್ಕೆ ಹೋಗುವಾಗ ತಮ್ಮ ಮರಿಗಳನ್ನು ಎಚ್ಚರಿಸಿದವು - ಮರಿಗಳೆಲ್ಲ ಜೊತೆಯಾಗಿ ಇರಬೇಕು ಮತ್ತು ಎಲ್ಲೆಲ್ಲೋ ಸುತ್ತಾಡಲು ಹೋಗಬಾರದೆಂದು. ಆದರೆ ಅತ್ಯಂತ ಕಿರಿಯ ಮರಿಗೆ ತುಂಟಾಟ ಜಾಸ್ತಿ. ಅದು ಹಾರಾಡುವಾಗ ಅತ್ತಿತ್ತ ನೋಡುತ್ತಿತ್ತು; ಹೂಗಳ ಸುತ್ತ ಸುತ್ತಾಡುತ್ತಿತ್ತು ಮತ್ತು ಇತರ ಹಕ್ಕಿಗಳೊಂದಿಗೆ ಹರಟೆ ಹೊಡೆಯುತ್ತಿತ್ತು. ಅಪ್ಪನಂತೆ ಅಮ್ಮ ಗೀಜಗನೂ ದೂರಕ್ಕೆ ಹಾರಿ ಹೋದಾಗ, ಕಿರಿಯ ಮರಿ ಗೀಜಗ ಸುತ್ತಾಟಕ್ಕೆ ಹೊರಟಿತು.

ಒಂದು ತೊರೆ ಕಂಡೊಡನೆ ಕಿರಿಯ ಗೀಜಗ ಮರಿ ಅಲ್ಲಿ ನೀರು ಕುಡಿಯಲಿಕ್ಕಾಗಿ ನೆಲಕ್ಕೆ ಇಳಿಯಿತು. ನಂತರ ಅಲ್ಲಿನ ಒಂದು ಹೂವಿನ ಬಳಿ ಹಾರಾಡುತ್ತಿದ್ದ ಚಿಟ್ಟೆಯ ಜೊತೆ ಹರಟೆ ಹೊಡೆಯಲು ಶುರು ಮಾಡಿತು. ಅಷ್ಟರಲ್ಲಿ ಇತರ ಗೀಜಗ ಮರಿಗಳು ದೂರಕ್ಕೆ ಹಾರಿ ಹೋದವು. ಕಿರಿಯ ಗೀಜಗ ಮರಿಗೆ ತಾನೀಗ ದಿಕ್ಕು ತಪ್ಪಿದ್ದೇನೆಂದು ತಿಳಿಯಿತು. ಅದು ಗಾಬರಿಯಿಂದ ಅತ್ತಿತ್ತ ಹಾರಾಡಿತು; ಅದಕ್ಕೆ ಅಪ್ಪ-ಅಮ್ಮ ಗೀಜಗ ಕಾಣಿಸಲಿಲ್ಲ; ಇತರ ಗೀಜಗನ ಮರಿಗಳೂ ಕಾಣಿಸಲಿಲ್ಲ. ಅದಕ್ಕೆ ಅಳುವೇ ಬಂತು. ಕೊನೆಗೆ ತನ್ನ ಅಪ್ಪ-ಅಮ್ಮನನ್ನು ಜೋರಾಗಿ ಕರೆಯುತ್ತಾ ಅದು ಹಾರತೊಡಗಿತು. ಇದನ್ನು ಕಂಡ ಒಂದು ಗಿಳಿಕುಟುಂಬದ ಗಿಳಿಗಳೂ ಗೀಜಗ ಅಪ್ಪ-ಅಮ್ಮನನ್ನು ಕೂಗಿ ಕರೆಯತೊಡಗಿದವು. ಅಂತೂ, ಗೀಜಗ ಅಪ್ಪ-ಅಮ್ಮನನ್ನು ಗಿಳಿಗಳು ಪತ್ತೆ ಮಾಡಿದವು. ಕಿರಿಯ ಗೀಜಗ ಮರಿ ಅಪ್ಪ-ಅಮ್ಮನನ್ನು ತಬ್ಬಿಕೊಂಡಿತು. ಅವರ ಮಾತು ಕೇಳದಿದ್ದ ತನ್ನನ್ನು ಕ್ಷಮಿಸಬೇಕೆಂದು ಬೇಡಿಕೊಂಡಿತು. ಅನಂತರ ಗಿಳಿ ಕುಟುಂಬದ ಗಿಳಿಗಳಿಗೆ ಧನ್ಯವಾದ ತಿಳಿಸಿತು.

Pages