HRM

ನಗುವೊಂದು ರಸಪಾಕವಳುವೊಂದು ರಸಪಾಕ
ನಗುವಾತ್ಮ ಪರಿಮಳವ ಪಸರಿಸುವ ಕುಸುಮ
ದುಗುಡವಾತ್ಮವ ಕಡೆದು ಸತ್ತ್ವವೆತ್ತುವ ಮಂತು
ಬಗೆದೆರಡನುಂ ಭುಜಿಸು – ಮಂಕುತಿಮ್ಮ

ಬದುಕಿನಲ್ಲಿ ಸಂತೋಷವೇ ತುಂಬಿರಬೇಕು ಎಂಬಾಶೆ ನಮ್ಮದು. ಅದರಿಂದಾಗಿ ನಾವು ದುಃಖದಲ್ಲಿ ಮುಳುಗುತ್ತೇವೆ. ಇದಕ್ಕೆ ಪರಿಹಾರ ಏನೆಂದರೆ ಜೀವನದಲ್ಲಿ ಸಮಭಾವ ಬೆಳೆಸಿಕೊಳ್ಳುವುದು ಎಂಬ ಸರಳ ತತ್ವವನ್ನು ಈ ಮುಕ್ತಕದಲ್ಲಿ ಪ್ರಸ್ತುತ ಪಡಿಸಿದ್ದಾರೆ ಮಾನ್ಯ ಡಿ. ವಿ. ಗುಂಡಪ್ಪನವರು.

ಸಮಭಾವ ರೂಢಿಸಿಕೊಳ್ಳುವುದು ಹೇಗೆ? ಅದಕ್ಕಾಗಿ ನಮ್ಮ ಚಿಂತನಾಕ್ರಮವನ್ನೇ ಬದಲಾಯಿಸಿಕೊಳ್ಳಬೇಕು. ನಗುತ್ತಾ ಖುಷಿಯಿಂದ ಇರುವುದು ರಸಪಾಕ ಸವಿದಂತೆ. ಇದು ನಾವೇ ಬೆಳೆಸಿಕೊಂಡ ಭಾವ. ಅಳುತ್ತ ದುಃಖದಿಂದ ಇರುವುದೂ  ರಸಪಾಕ ಎಂದು ನಾವ್ಯಾಕೆ ಭಾವಿಸಬಾರದು?

ನಮಗೆ ಯಾರೋ ಮೋಸ ಮಾಡಿದಾಗ ದುಃಖ ಸಹಜ. ಪರಿಚಿತನೊಬ್ಬ ನಮ್ಮ ಬಗ್ಗೆ ಆಪಾದನೆ ಮಾಡಿದಾಗಲೂ ದುಃಖ ಸಹಜ. ಆಪ್ತರು ತೀರಿಕೊಂಡಾಗಲೂ ದುಃಖ ಸಹಜ. ಈ ಎಲ್ಲ ನೋವಿನ ಸಂಗತಿಗಳಲ್ಲಿ ಜೀವನಾನುಭವದ ರಸಗವಳವಿದೆ, ಅಲ್ಲವೇ? ಆ ಮೋಸದಿಂದಾಗಿ ಮನುಷ್ಯರನ್ನು ಸೂಕ್ಷ್ಮವಾಗಿ ಗಮನಿಸುವ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರುವ ಪ್ರವೃತ್ತಿ ನಮ್ಮಲ್ಲಿ ಬೆಳೆಯಲಿ. ಹಾಗೆಯೇ, ಅಪರಿಚಿತನ ಆಪಾದನೆಗಳನ್ನೆಲ್ಲ ತಿರಸ್ಕರಿಸೋಣ. ಅವನ ಆಪಾದನೆಗಳನ್ನು ಯಾರೂ ನಂಬದಂತೆ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಬದುಕೋಣ. ಅದೇ ರೀತಿಯಲ್ಲಿ, ನಾವು ಅತ್ತರೆ ಸತ್ತವರು ಎದ್ದು ಬರುವುದಿಲ್ಲ ಎಂಬ ಸತ್ಯ ಒಪ್ಪಿಕೊಂಡು, ನೋವು ನುಂಗಿ ಬದುಕೋಣ.

ಈ ಪ್ರಕಾರ ನಮ್ಮ ಚಿಂತನಾಕ್ರಮ ಬದಲಾಯಿಸಿಕೊಂಡಾಗ ನಮಗೆ ಅರ್ಥವಾಗುವ ಸತ್ಯ: ದುಗುಡ ಎಂಬುದು ನಮ್ಮ ಆತ್ಮವನ್ನೇ ಕಡೆದು ನಮ್ಮ ಸತ್ವವನ್ನು ಬೆಳಕಿಗೆ ತರುವ ಮಂತು. ಮೊಸರು ಕಡೆದಾಗ ಬೆಣ್ಣೆ ತೇಲಿ ಬರುವಂತೆ, ಸಂಕಟ ಎದುರಾದಾಗ ನಮ್ಮ ಅಂತಃಸತ್ವ ಹೊರಬರುತ್ತದೆ. ಕಬ್ಬಿಣ ಉಕ್ಕಾಗಬೇಕಾದರೆ ಅದು ಕೆಂಪಾಗಿ ಕಾಯಲೇಬೇಕು.

ಪ್ರಕೃತಿಯಿಂದ ಸತ್ಯಗಳನ್ನು ಕಲಿಯೋಣ. ಕತ್ತಲಿದ್ದರೆ ತಾನೇ ಬೆಳಕಿನ ಅನುಭವ? ಕಹಿ ಇದ್ದರೆ ತಾನೇ ಸಿಹಿಯ ಅನುಭವ? ದುಃಖವಿದ್ದರೆ ತಾನೇ ಸಂತೋಷದ ಅನುಭವ? ಬದುಕಿನಲ್ಲಿ ಮಾಗಬೇಕಾದರೆ ಈ ಎರಡೂ ಅನುಭವಗಳು ಅತ್ಯಗತ್ಯ. ಕೇವಲ ಸುಖ ಅನುಭವಿಸಿದವನಿಗೆ ಅದರ ಬೆಲೆ ತಿಳಿಯುವುದಕ್ಕಿಂತ ಚೆನ್ನಾಗಿ ದುಃಖ ಅನುಭವಿಸಿದವನಿಗೆ  ಸುಖದ ಬೆಲೆ ತಿಳಿಯುತ್ತದೆ.
ಆದ್ದರಿಂದ, ಎರಡನ್ನೂ ಸಮಭಾವದಿಂದ ಸ್ವೀಕರಿಸೋಣ. ನಗುವಿನಿಂದಲೂ ಕಲಿಯೋಣ, ಅಳುವಿನಿಂದಲೂ ಕಲಿಯೋಣ. ಹಾಗೆ ಕಲಿಯುತ್ತ ಬಾಳೋಣ, ಬೆಳೆಯೋಣ.


ಅಳುವಿಂದೆ ನಗುವಿಂದೆ ಕಳವಳದ ಸುಯ್ಲಿಂದೆ
ಚಲುವಿಕೆಯ ಜೊಂಪಿಂದೆ ನಲುಮೆಯಿಂದೆ
ಕೆಳೆಯ ಕಂಬನಿಯಿಂದೆ ಹಬೆಯ ಬಿಸಿ ಬೆವರಿಂದೆ
ಜಳಕವೋ ಜೀವಕ್ಕೆ – ಮರುಳಮುನಿಯ

ಜೀವನದಲ್ಲಿ ಎಲ್ಲ ಭಾವಗಳೂ ಬೇಕು – ನಾವು ಮಾಗಲಿಕ್ಕಾಗಿ, ಎಂಬ ಚಿಂತನೆಯನ್ನು “ಮರುಳಮುನಿಯನ ಕಗ್ಗ”ದ ಈ ಮುಕ್ತಕದಲ್ಲಿಯೂ ನಮ್ಮ ಮುಂದಿಡುತ್ತಾರೆ, ಮಾನ್ಯ ಡಿವಿಜಿಯವರು.

ಅಳು, ನಗು, ಕಳವಳ, ಚೆಲುವು, ನಲುಮೆ, ಗೆಳೆತನ, ಉದ್ವೇಗ – ಇವನ್ನು ನಾವೆಲ್ಲರೂ ಬೇರೆಬೇರೆ ಸಂದರ್ಭಗಳಲ್ಲಿ ಅನುಭವಿಸಿರುತ್ತೇವೆ. ನಮ್ಮ ಆಪ್ತರನ್ನು ಅಥವಾ ಬೆಲೆ ಬಾಳುವುದನ್ನು ಕಳೆದುಕೊಂಡಾಗ, ಮೈಗೆ ಅಥವಾ ಮನಸ್ಸಿಗೆ ನೋವಾದಾಗ ಅಳು ನುಗ್ಗಿ ಬರುತ್ತದೆ. ಆತ್ಮೀಯರ ಜೊತೆಗಿದ್ದಾಗ, ದೊಡ್ಡ ಸಾಧನೆ ಮಾಡಿದಾಗ, ಸಂತೋಷವಾದಾಗ ಮೆಲುನಗು ಮೂಡಿ ಬರುತ್ತದೆ. ಶಾಲಾಕಾಲೇಜುಗಳ ಪರೀಕ್ಷಾ ಫಲಿತಾಂಶ ಬರುವ ಮುನ್ನ ವಿದ್ಯಾರ್ಥಿಗಳಿಗೆ ಕಳವಳ ಸಹಜ. ಸೌಂದರ್ಯವನ್ನು ಆಸ್ವಾದಿಸುತ್ತಾ ಮಂಪರಿಗೆ ಜಾರುವುದೂ ಸಹಜ. ಸ್ನೇಹದಿಂದ ಜೊತೆಗಿದ್ದಾಗ ಖುಷಿ, ಆದರೆ ಅಗಲಿದಾಗ ಕಣ್ಣಲ್ಲಿ ನೀರು. ಹಾಗೆಯೇ ಯಾರೋ ಅವಮಾನ ಮಾಡಿದಾಗ ಸ್ವಾಭಿಮಾನ ಕೆರಳಿ, ಉದ್ವೇಗ ಉಕ್ಕುತ್ತದೆ. ೧೬ ನವಂಬರ್ ೨೦೧೩ರಂದು, ಮುಂಬೈಯ ವಾಂಖೆಡೆ ಅಂಗಣದಿಂದ ೨೪ ವರುಷಗಳ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ ಹೊರ ನಡೆಯುವಾಗ, “ಭಾರತರತ್ನ” ಪ್ರಶಸ್ತಿ ಪಡೆದಿದ್ದರೂ, ಸಚಿನ್ ತೆಂಡುಲ್ಕರನ ಕಣ್ಣಲ್ಲಿ ಕಣ್ಣೀರು ತೊಟ್ಟಿಕ್ಕಿದ್ದು ಸತ್ಯ.
ಮತ್ತೆಮತ್ತೆ ನಮಗೆ ಎದುರಾಗುವ ಪ್ರಶ್ನೆ: ಜೀವನದಲ್ಲಿ ಈ ಭಿನ್ನಭಿನ್ನ ಭಾವಗಳು ಯಾಕೆ? ಇದಕ್ಕೆ ಡಿ.ವಿ. ಗುಂಡಪ್ಪನವರು ಕೊಡುವ ಸರಳ ಉತ್ತರ: ಇವೆಲ್ಲವುಗಳಿಂದ “ಜಳಕವೋ ಜೀವಕ್ಕೆ.” ಸ್ನಾನ ಮಾಡಿದೊಡನೆ ಏನು ಅನಿಸುತ್ತದೆ? ಉಲ್ಲಾಸ ಅನಿಸುತ್ತದೆ. ಹಳತನ್ನು, ಬೆವರ ವಾಸನೆಯನ್ನು ತೊಳೆದುಕೊಂಡು, ಬದುಕಿನಲ್ಲಿ ಇನ್ನೊಂದು ಹೊಸ ದಿನಕ್ಕೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಭಿನ್ನಭಿನ್ನ ಭಾವಗಳೂ ನಮ್ಮನ್ನು ಮತ್ತೆಮತ್ತೆ ತೊಳೆದು, ಉಲ್ಲಾಸ ಮೂಡಿಸುತ್ತವೆ, ಅನುಭವಗಳಿಂದ ನಮ್ಮನ್ನು ಮಾಗಿಸುತ್ತವೆ. ಹಾಗಾಗಿ ಅವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ.
 

“ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ” ಮಾನ್ಯ ಡಿ.ವಿ. ಗುಂಡಪ್ಪನವರು ಮನುಕುಲಕ್ಕೆ ಇತ್ತ ಮಹಾನ್ ಕೊಡುಗೆಗಳು. ಈ ಮೇರುಕೃತಿಗಳ ಮುಕ್ತಕಗಳಲ್ಲಿ ಅಡಗಿವೆ ನಮ್ಮ ಬದುಕಿನ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು. ಅವುಗಳಲ್ಲಿ ಕೆಲವು ಮುಕ್ತಕಗಳ ಹೊಳಹನ್ನು ಓದುಗರ ಮುಂದಿಡುವ ಪುಟ್ಟ ಪ್ರಯತ್ನ ಈ ಸರಣಿ ಬರಹಗಳು. ಪ್ರತಿಯೊಂದು ಬರಹದ ಮೊದಲ ಭಾಗದಲ್ಲಿ “ಮಂಕುತಿಮ್ಮನ ಕಗ್ಗ”ದ ಒಂದು ಮುಕ್ತಕ ಮತ್ತು ಎರಡನೆಯ ಭಾಗದಲ್ಲಿ “ಮರುಳ ಮುನಿಯನ ಕಗ್ಗ”ದ ಒಂದು ಮುಕ್ತಕವನ್ನು ಅವುಗಳ ಸಂದೇಶದ ಸಹಿತ ಓದುಗರ ಮುಂದಿರಿಸುತ್ತೇನೆ. ಸಂದೇಶಗಳ ಸಾಮ್ಯತೆಯ ದೃಷ್ಠಿಯಿಂದ ಈ ಎರಡೂ ಮುಕ್ತಕಗಳನ್ನು ಆಯ್ದುಕೊಂಡಿದ್ದೇನೆ.
ಅಕ್ಕಿಯೊಳಗನ್ನವನು ಮೊದಲಾರು ಕಂಡವನು?
ಅಕ್ಕರದ ಬರಹಕ್ಕೆ ಮೊದಲಿಗನದಾರು?
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ
ದಕ್ಕುವುದೆ ನಿನಗೆ ಜಸ – ಮಂಕುತಿಮ್ಮ
ಇದರಲ್ಲಿ ಮಾನ್ಯ ಡಿ.ವಿ. ಗುಂಡಪ್ಪನವರು ಎತ್ತುವ ಪ್ರಶ್ನೆ, “ನಿನಗೆ ಕೀರ್ತಿ (ಜಸ) ಸಿಗಲಿಕ್ಕುಂಟೆ?” ಯಾಕೆಂದರೆ, ತಲೆತಲಾಂತರಗಳಿಗೆ ಸಲ್ಲುವಂತಹ ಮಹಾನ್ ಉಪಕಾರ ಮಾಡಿದವರನ್ನೇ (ಆದಿ ಬಂಧುಗಳನ್ನು) ಈ ಜಗತ್ತು ನೆನಪಿಟ್ಟುಕೊಂಡಿಲ್ಲ. ಉದಾಹರಣೆಗೆ, ಕಾಡಿನ ಹುಲ್ಲಿನ ಬೀಜಗಳಾದ ಅಕ್ಕಿ ಬೇಯಿಸಿ ತಿಂದರೆ ಹಸಿವು ತಣಿಯುತ್ತದೆ ಎಂಬುದನ್ನು ಮೊತ್ತಮೊದಲಾಗಿ ಪತ್ತೆ ಮಾಡಿದ ವ್ಯಕ್ತಿ ಯಾರು? ಅಕ್ಷರದ ಬರಹಕ್ಕೆ ನಾಂದಿ ಹಾಡಿದವನು/ಳು ಯಾರು? ಇವೆರಡೂ ಅಸಾಮಾನ್ಯ ಸಾಧನೆಗಳು. ಲಕ್ಷಲಕ್ಷ ಮನುಷ್ಯರು ಬದುಕಿ ಉಳಿಯಲು ಅನ್ನ ಕಾರಣವಾಯಿತು. ವರುಷದಿಂದ ವರುಷಕ್ಕೆ ಮನುಷ್ಯನ ವಿಕಾಸಕ್ಕೆ ಒತ್ತಾಸೆಯಾದ ಭಾಷೆಯ ಬೆಳವಣಿಗೆಗೆ ಅಕ್ಷರಗಳು ಕಾರಣವಾದವು.
ಇಂತಹ ಬೆಲೆಕಟ್ಟಲಾಗದ ಅನ್ವೇಷಣೆ ಮಾಡಿದವರ ಹೆಸರನ್ನೇ ಈ ಜಗತ್ತು ದಾಖಲಿಸಿಲ್ಲ. ಹಾಗಿರುವಾಗ, ಸಣ್ಣಪುಟ್ಟ ಸಾಧನೆಗಳನ್ನು ಮಾಡುವ ಮನುಷ್ಯರು, ತಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕು ಎಂದು ಹಂಬಲಿಸುವುದಕ್ಕೆ ಅರ್ಥವಿದೆಯೇ? “ಇದು ನಾನು ಮಾಡಿದ್ದು, ಅದು ನನ್ನ ಕೊಡುಗೆ” ಎಂದು ಡಂಗುರ ಸಾರುವುದು ಸರಿಯೇ? ದೇವಸ್ಥಾನಗಳಲ್ಲಿ ಹಲವರ ಹೆಸರು ರಾರಾಜಿಸುವುದನ್ನು ಕಂಡಿದ್ದೀರಾ? ಈ ಗಡಿಯಾರ ಇವರು ಕೊಟ್ಟದ್ದು, ಆ ಗೋಡೆ ಅವರು ಕಟ್ಟಿಸಿದ್ದು ಎಂಬ ಫಲಕಗಳು ದೇವರ ಮೂರ್ತಿಯ ಮುಂದೆ! ಹೀಗೆಲ್ಲ ಮಾಡಿದರೆ ನನಗೆ ಕೀರ್ತಿ ದಕ್ಕುವುದೇ ಎಂಬ ಪ್ರಶ್ನೆ ಮತ್ತೆಮತ್ತೆ ಮನದಲ್ಲಿ ಮೂಡಿ ಬರಲಿ.

ಜಗದೆ ನೀಂ ಕೊಂಡದ್ದೆ ಜಗಕೆ ನೀಂ ಕೊಟ್ಟದ್ದೆ
ಮಿಗಿಲಾವುದೆರಡರೊಳು ನಿನ್ನ ಬೆಲೆ ಏನು?
ಬಗೆಯದೀ ಲೆಕ್ಕವನು ಜಗದುಣಿಸನುಂಬವನು
ಮೃಗ ಮಾತ್ರನಲ್ಲವೇಂ? – ಮರುಳ ಮುನಿಯ
ಈ ಜಗತ್ತಿನಿಂದ ನೀನು ಪಡೆದದ್ದು ಎಷ್ಟು? ಈ ಜಗತ್ತಿಗೆ ನೀನು ಕೊಟ್ಟದ್ದು ಎಷ್ಟು? ಇವು ಎರಡರಲ್ಲಿ ಹೆಚ್ಚು (ಮಿಗಿಲು) ಯಾವುದು? ಎಂಬ ಮೂಲಭೂತ ಪ್ರಶ್ನೆಯನ್ನು ಕೇಳಿ, ತಟಕ್ಕನೆ, ಹಾಗಾದರೆ ನಿನ್ನ ಬೆಲೆ ಏನು? ಎಂಬ ಪ್ರಶ್ನೆಯ ಮೂಲಕ ನಮ್ಮನ್ನು ಚಿಂತನೆಗೆ ಒಡ್ಡುತ್ತಾರೆ ಮಾನ್ಯ ಡಿ.ವಿ.ಜಿ.ಯವರು.
ಇದು ನಾವು ದಿನದಿನವೂ ಮಲಗುವ ಮುನ್ನ ಕೇಳಿಕೊಳ್ಳಬೇಕಾದ ಪ್ರಶ್ನೆ. ಈ ಪ್ರಶ್ನೆಯನ್ನು ಎದುರಿಸಿ, ಅದಕ್ಕೆ ಉತ್ತರ ಕೊಟ್ಟರೆ ಮಾತ್ರ ನೆಮ್ಮದಿಯ ನಿದ್ದೆ ಬಂದೀತು. ಯಾಕೆಂದರೆ ಇಂದಿನ ಬದುಕಿನಲ್ಲಿ ನಾನು ಈ ಜಗತ್ತಿಗೆ ಕೊಟ್ಟದ್ದಕ್ಕಿಂತ ಹೆಚ್ಚು ಪಡೆದಿದ್ದರೆ, ಮಲಗುವಾಗ ನಾನು ಸಾಲಗಾರನಾಗಿರುತ್ತೇನೆ. ಇದರ ಬಗ್ಗೆ ಒಂದು ಕ್ಷಣ ಚಿಂತಿಸಿ ಮಲಗಿದರೆ, ಮರುದಿನ ಏಳುವಾಗ ಮುಂದಿನ ದಿನದ ಸಾಲ ತೀರಿಸುವ ಸಂಕಲ್ಪ ತೊಡಲು ಸಾಧ್ಯವಾದೀತು. ಇಲ್ಲವಾದರೆ, ದಿನದಿಂದ ದಿನಕ್ಕೆ ನನ್ನ ಸಾಲದ ಹೊರೆ ಹೆಚ್ಚೀತು. ಅದರಿಂದಾಗಿ ಬದುಕಿನಲ್ಲಿ ನೆಮ್ಮದಿ ಇಲ್ಲವಾದೀತು.
ಈ ಲೆಕ್ಕಾಚಾರವನ್ನೇ ಮಾಡದೆ, ಈ ಜಗತ್ತಿನಿಂದ ಇನ್ನಷ್ಟು ಮತ್ತಷ್ಟು ಪಡೆಯುವ (ಜಗದ ಉಣಿಸನು ಉಂಬವನು) ಚಟಕ್ಕೆ ಬಿದ್ದವನು, ಒಂದು ಪ್ರಾಣಿಯಲ್ಲವೇ? ಎಂದು ಕೇಳುತ್ತಾರೆ ಮಾನ್ಯ ಡಿ.ವಿ.ಜಿ. ಇಂದಿನ ಜಗತ್ತಿನ ಎಲ್ಲ ಸಂಕಟಗಳಿಗೂ ಹೆಚ್ಚೆಚ್ಚು ಜನರು ಈ ಲೆಕ್ಕಾಚಾರ ಮಾಡದೆ ಬದುಕುತ್ತಿರುವುದೇ ಕಾರಣವಲ್ಲವೇ? ಈ ಲೆಕ್ಕಾಚಾರ ವ್ಯಕ್ತಿಯೊಬ್ಬನ ಸಾವಿನೊಂದಿಗೆ ಮುಗಿಯುತ್ತದೆಯೇ? ಹಲವರ ಬದುಕನ್ನು ಪರಿಶೀಲಿಸಿದರೆ, “ಇಲ್ಲ” ಎಂಬ ಸತ್ಯ ತಿಳಿಯುತ್ತದೆ. ಆದ್ದರಿಂದ “ಸಾಲಗಾರ”ರಾಗದೆ ಬದುಕಲು ಕಲಿಯೋಣ.
ನಿವೃತ್ತರಾದ ಹಲವರು ಮತ್ತೆ ಯಾವುದೋ ಸಂಬಳದ ಕೆಲಸಕ್ಕೆ ಸೇರಿಕೊಂಡು, ಇನ್ನಷ್ಟು ಹಣಕ್ಕಾಗಿ ಆಶೆ ಪಡುವುದನ್ನು ನಾವು ಕಾಣುತ್ತಿದ್ದೇವೆ. ದೀರ್ಘ ಸೇವಾವಧಿಯ ನಂತರ, ಕೊನೆಯ ಸಂಬಳದ ಅರ್ಧ ಹಣವನ್ನು ನಿವೃತ್ತಿ ವೇತನವಾಗಿ ಪಾವತಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಹಾಗಿರುವಾಗ “ಇನ್ನಷ್ಟು ಹಣ ನನಗೆ ಬರಲಿ” ಎಂಬ ಈ ಹಪಾಹಪಿ ಯಾತಕ್ಕೆ? ನಿವೃತ್ತರಾದ ನಂತರವಾದರೂ, ಈ ವರೆಗೆ ಸಮಾಜದಿಂದ ಪಡೆದದ್ದನ್ನು ನೆನೆದು, ಸಮಾಜಕ್ಕೆ ಕಿಂಚಿತ್ ಕೊಡುವ ಪ್ರಯತ್ನ ಯಾಕೆ ಮಾಡುವುದಿಲ್ಲ? ಕೊನೆಗೊಂದು ದಿನ ಪಡೆದ ಎಲ್ಲವನ್ನೂ ಇಲ್ಲಿ ಬಿಟ್ಟು ಹೋಗಬೇಕಾಗುತ್ತದೆ ಎಂಬ ಸತ್ಯವನ್ನು ಒಪ್ಪಿಕೊಂಡರೆ, ಅಂಥವರಿಗೆ ನಿವೃತ್ತಿಯ ನಂತರವಾದರೂ ಸಮಾಜಕ್ಕೆ ಕೊಡುವ ಬುದ್ಧಿ ಬಂದೀತೇನೋ?
 

Pages