Consumers' Forum & RTI

ನಮ್ಮ ದೇಶದಲ್ಲಿ ವಿಲೇವಾರಿಯಾಗದಿರುವ ವ್ಯಾಜ್ಯಗಳ ಸಂಖ್ಯೆ ಸುಮಾರು ಮೂರು ಕೋಟಿ. ಇದರ ವಿಲೇವಾರಿಗೆ ಎರಡು ಶತಮಾನಗಳೇ ಬೇಕೆಂಬ ಮಾತು ಮತ್ತೆಮತ್ತೆ ಕೇಳಿ ಬರುತ್ತಿದೆ. ಕೋರ್ಟ್ಗಳ ಬಗ್ಗೆ ಜನರ ವಿಶ್ವಾಸಾರ್ಹತೆ ಕಡಿಮೆಯಾಗಲು ಇದುವೇ ಮುಖ್ಯ ಕಾರಣ.
ಬಾಕಿಯಿರುವ ವ್ಯಾಜ್ಯಗಳ ವಿಲೇವಾರಿಗೆ ಶತಮಾನ ಬೇಕಾದೀತೆಂಬ ಮಾತು ನಿಜವೇ? ಸುಪ್ರೀಂ ಕೋರ್ಟ್ ಪ್ರಕಟಿಸುತ್ತಿರುವ “ಕೋರ್ಟ್ ನ್ಯೂಸ್” ಎಂಬ ತ್ರೈಮಾಸಿಕದ ಅಂಕೆಸಂಖ್ಯೆಗಳನ್ನು ಜಾಲಾಡಿದರೆ ಸತ್ಯಾಸತ್ಯತೆ ತಿಳಿಯುತ್ತದೆ.


ಐದು ವರುಷಗಳ (2009 - 2013) ಅವಧಿಯ ಅಂಕೆಸಂಖ್ಯೆ ಪರಿಶೀಲಿಸೋಣ. 2009ರಲ್ಲಿ ಬಾಕಿಯಿದ್ದ ವ್ಯಾಜ್ಯಗಳ ಸಂಖ್ಯೆ 30.3 ದಶಲಕ್ಷ. 2013ರ ಅಂತ್ಯದಲ್ಲಿ ಈ ಸಂಖ್ಯೆ 31.7 ದಶಲಕ್ಷಗಳಿಗೆ ಏರಿತು. ಈ ಅವಧಿಯಲ್ಲಿ ಹಲವಾರು ನ್ಯಾಯಾಧೀಶರ ಹುದ್ದೆಗಳು ಖಾಲಿಯಾಗಿದ್ದವು. ಅವನ್ನೆಲ್ಲ ಭರ್ತಿ ಮಾಡಿದ್ದರೆ ಹಾಗೂ ಪ್ರತಿಯೊಬ್ಬ ನ್ಯಾಯಾಧೀಶರೂ ಸರಾಸರಿ ಸಂಖ್ಯೆಯಷ್ಟು ವ್ಯಾಜ್ಯಗಳನ್ನು ವಿಲೇವಾರಿ ಮಾಡುತ್ತಿದ್ದರೆ ಏನಾಗುತ್ತಿತ್ತು? ವಿಲೇವಾರಿಯಾಗುತ್ತಿದ್ದ ವ್ಯಾಜ್ಯಗಳ ಒಟ್ಟು ಸಂಖ್ಯೆ 20.48 ದಶಲಕ್ಷ ಆಗುತ್ತಿತ್ತು. ಅಂದರೆ, 2013ರ ಅಂತ್ಯದಲ್ಲಿ 11.25 ದಶಲಕ್ಷ (31.7 ದಶಲಕ್ಷಗಳ ಬದಲಾಗಿ) ವ್ಯಾಜ್ಯಗಳು ಮಾತ್ರ ಬಾಕಿ ಉಳಿಯುತ್ತಿದ್ದವು.


ಇದರಿಂದ ತಿಳಿಯಬೇಕಾದ್ದೇನು? ಖಾಲಿಯಿರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡದಿರುವುದೇ ಲಕ್ಷಗಟ್ಟಲೆ ವ್ಯಾಜ್ಯಗಳು ವಿಲೇವಾರಿ ಆಗದಿರಲು ಪ್ರಧಾನ ಕಾರಣ.


ಇದರ ಪರಿಣಾಮಗಳೇನು? ನಮ್ಮ ದೇಶದ ಜೈಲುಗಳಲ್ಲಿ ಇರುವವರಲ್ಲಿ ಮೂರನೆಯ ಒಂದು ಭಾಗ ಶಿಕ್ಷೆಗೊಳಗಾದ ಅಪರಾಧಿಗಳಾದರೆ, ಉಳಿದ ಮೂರನೆಯ ಎರಡು ಭಾಗ ವಿಚಾರಣಾಧೀನ ಖೈದಿಗಳು. ಅಪರಾಧ ಸಾಬೀತಾಗುವ ವರೆಗೆ ಆಪಾದಿತನೊಬ್ಬ ನಿರಪರಾಧಿ ಎನ್ನುತ್ತದೆ ನಮ್ಮ ನ್ಯಾಯದಾನ ವ್ಯವಸ್ಥೆ. ಅದೇ ವ್ಯವಸ್ಥೆ ಲಕ್ಷಗಟ್ಟಲೆ ವಿಚಾರಣಾಧೀನ ಖೈದಿಗಳನ್ನು ವಿಚಾರಣೆಯ ಹೆಸರಿನಲ್ಲಿ ನಿರ್ದಯವಾಗಿ ವರುಷಗಟ್ಟಲೆ ಜೈಲುಗಳಲ್ಲಿಡುತ್ತದೆ.

ಗುಜರಾತಿನಲ್ಲೊಂದು ವಿಶ್ವವಿದ್ಯಾಲಯ. ರಾಯ್ ವಿಶ್ವವಿದ್ಯಾಲಯ ಎಂಬ ಅದರ ಹೆಸರು ಪರಿಚಿತ – ಆದರೆ ಶಿಕ್ಷಣರಂಗದ ಸಾಧನೆಗಳಿಗಾಗಿ ಅಲ್ಲ. ಮತ್ತೆ ಯಾಕೆ? ಅದರ ಪ್ರವರ್ತಕರು ಮಾಧ್ಯಮಗಳಲ್ಲಿ ನೀಡುವ ಅಬ್ಬರದ ಜಾಹೀರಾತುಗಳಿಗಾಗಿ!
ನವಂಬರ್ ೨೦೧೩ರಲ್ಲಿ ಅದು ಇನ್ನೊಮ್ಮೆ ಸುದ್ದಿ ಮಾಡಿತು – ಈ ನಾಲ್ವರು ಸೆಲೆಬ್ರೆಟಿಗಳಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ: ಮಾರಾಟಗಾರಿಕೆ ಪರಿಣತ ಹಾಗೂ ನಟ ಸುಹೇಲ್ ಸೇತ್, ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಉದ್ಯಮಶೀಲ ಸಾಧಕ ಪ್ರೀತಿ ಪಾವುಲ್ ಮತ್ತು ಫ್ಯಾಷನ್ ಉಡುಪುಗಳ ವಿನ್ಯಾಸಗಾರ ರಿತು ಬೆರಿ.
ತಕ್ಷಣವೇ ಇಂಟರ್-ನೆಟ್ಟಿನ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಭುಗಿಲೆದ್ದಿತು: ಹೀಗೆ ಸೆಲೆಬ್ರೆಟಿಗಳಿಗೆ ಗೌರವ ಡಾಕ್ಟರೇಟ್ ನೀಡಿ ಸುದ್ದಿ ಮಾಡುವುದು ಅಮಾಯಕ ವಿದ್ಯಾರ್ಥಿಗಳನ್ನು ತಮ್ಮ ವಿಶ್ವವಿದ್ಯಾಲಯಕ್ಕೆ ಸೆಳೆಯುವ ತಂತ್ರವಲ್ಲವೇ? ಎಂಬ ಚರ್ಚೆ.
“ಕ್ಯಾರಿಯರ್ಸ್ ೩೬೦” ಎಂಬ ಉದ್ಯೋಗ ಸಲಹಾ ಸಂಸ್ಥೆಯ ಪ್ರಧಾನ ನಿರ್ವಹಣಾ ಅಧಿಕಾರಿ ಮಹೇಶ್ವರ್ ಪೆರಿ ಎಂಬವರು ಫೇಸ್-ಬುಕ್ಕಿನಲ್ಲಿ ಚರ್ಚೆಯೊಂದನ್ನು ಶುರುವಿಟ್ಟರು: ರಾಯ್ ವಿಶ್ವವಿದ್ಯಾಲಯದ ವಿರುದ್ಧ ಮಾನ್ಯತೆಯಿಲ್ಲದ ಕೋರ್ಸುಗಳನ್ನು ನಡೆಸುತ್ತಿರುವ ಮತ್ತು ಉದ್ಯೋಗ ಕೊಡಿಸುವ ಸುಳ್ಳು ಭರವಸೆ ನೀಡುತ್ತಿರುವ ಆಪಾದನೆಗಳಿವೆ. ಇಂತಹ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಿದ್ದೇನೆ ಎಂಬುದು ಸುಹೇಲ್ ಸೇತ್ ಅವರಿಗೆ ತಿಳಿದಿದೆಯೇ? ಇದಾದ ತಕ್ಷಣ ಸುಹೇಲ್ ಸೇಟ್ ಸ್ಪಂದಿಸಿದರು: ತನ್ನ ಗೌರವ ಡಾಕ್ಟರೇಟನ್ನು ರಾಯ್ ವಿಶ್ವವಿದ್ಯಾಲಯಕ್ಕೆ ಹಿಂತಿರುಗಿಸುವ ಮೂಲಕ.
ಇಂತಹ ಘಟನೆಗಳು ಮತ್ತೆಮತ್ತೆ ನಡೆಯುತ್ತಲೇ ಇರುತ್ತವೆ. ಯಾಕೆಂದರೆ, “ಇದು ಅದ್ಭುತ”, “ಇದು ಭಾರೀ ಉಪಯುಕ್ತ” ಎಂಬ “ಶಿಫಾರಸ್”ಗಳನ್ನು ಸೆಲೆಬ್ರೆಟಿಗಳು ನೀಡಿದರೆ (ಪತ್ರಿಕಾ, ರೇಡಿಯೋ ಅಥವಾ ಟಿವಿ ಮಾಧ್ಯಮಗಳಲ್ಲಿ) ಅದನ್ನು ನಂಬುವುದು ಭಾರತೀಯರ ಪ್ರವೃತ್ತಿ. ಇದನ್ನು ಕೆಲವು ವಿಶ್ವವಿದ್ಯಾಲಯಗಳು ಮತ್ತು ವಿದ್ಯಾಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ.

ಮ್ಯಾಗ್ಗಿ ನೂಡಲ್ ಮಣ್ಣು ಮುಕ್ಕಿತು; ತಿಂಗಳಿಗೆ ೩೫೦ ಕೋಟಿ ರೂಪಾಯಿ ವ್ಯವಹಾರ ಕಳೆದುಕೊಂಡಿತು- ಇದು ೨೦೧೫ನೇ ವರುಷದ ದೊಡ್ಡ ಸುದ್ದಿ.
ಆದರೆ, ಕಳೆದ ೨೦ ವರುಷಗಳಲ್ಲಿ ಅದರ ಉತ್ಪಾದಕ ಕಂಪೆನಿ ನೆಸ್ಲೆ ಮಾಡಿದ ಮೋಸಕ್ಕೆ, ಅನೈತಿಕ ಮಾರಾಟ ತಂತ್ರಗಳಿಗೆ, ಕೋಟಿಗಟ್ಟಲೆ ಅಮಾಯಕ ಜನರಿಗೆ ವಿಷ ಉಣಿಸಿದ್ದಕ್ಕೆ ಯಾವ ಶಿಕ್ಷೆಯೂ ಆಗಿಲ್ಲ – ಇದು ಸುದ್ದಿಯಾಗಲಿಲ್ಲ!
ಮ್ಯಾಗ್ಗಿ ನೂಡಲ್ ಪ್ಯಾಕೆಟುಗಳಲ್ಲಿ “ನೋ ಏಡೆಡ್ ಎಂ.ಎಸ್.ಜಿ.” ಎಂದು ಜಬರದಸ್ತಿನಿಂದ ಮುದ್ರಿಸುತ್ತಿದ್ದರು. ಆದರೆ, ಮ್ಯಾಗ್ಗಿ ನೂಡಲುಗಳಲ್ಲಿ ಎಂ.ಎಸ್.ಜಿ. ಇತ್ತು ಎಂಬ ಸತ್ಯ ಈಗ ಜಗಜ್ಜಾಹೀರಾಗಿದೆ. ಇದು ನೆಸ್ಲೆ ಕಂಪೆನಿ ಮಾಡಿದ ಮೋಸವಲ್ಲವೇ?
ಲಕ್ಷಗಟ್ಟಲೆ ತಾಯಂದಿರು ತಮ್ಮ ಮಕ್ಕಳನ್ನು ಜೋಪಾನದಿಂದ ಬೆಳೆಸುತ್ತಾರೆ. ಮನೆಯಲ್ಲಿ ಮಾಡಿದ ತಿಂಡಿತಿನಿಸು ಆಹಾರ ಮಾತ್ರ ತಿನಿಸಿ ಸಲಹುತ್ತಾರೆ. ಅಂತಹ ಮಕ್ಕಳು ಕಿಂಡರ್ ಗಾರ್ಟನಿಗೆ ಕಾಲಿಟ್ಟ ದಿನವೇ ಮ್ಯಾಗ್ಗಿ ನೂಡಲಿನ ಮಾರಾಟ ಪ್ರತಿನಿಧಿಗಳು ಅಲ್ಲಿಗೆ ವಕ್ಕರಿಸುತ್ತಾರೆ. ಮಕ್ಕಳಿಗೆ ಪುಕ್ಕಟೆ ಮ್ಯಾಗ್ಗಿ ನೂಡಲ್ ತಿನಿಸಿ ಚಟ ಹಿಡಿಸುತ್ತಾರೆ. ಅಂದು ಸಂಜೆ ಮನೆಗೆ ಮರಳಿದ ಮಗು “ನಂಗೆ ಮ್ಯಾಗ್ಗಿ ಕೊಡು” ಎಂದು ಹಟ ಮಾಡುತ್ತದೆ. ಇದು ನೆಸ್ಲೆ ಕಂಪೆನಿಯ ಅನೈತಿಕ ಮಾರಾಟ ತಂತ್ರ ಅಲ್ಲವೇ?
ಮ್ಯಾಗ್ಗಿ ನೂಡಲಿಗೆ ಸೀಸ ಹಾಕಬಾರದಿತ್ತು. ಸಹನೀಯ ಮಿತಿಗಿಂತ ಜಾಸ್ತಿ ಸೀಸ ಹಾಕಲೇ ಬಾರದಿತ್ತು. ಯಾಕೆಂದರೆ ಸೀಸ ವಿಷ. ಆದರೂ ಮ್ಯಾಗ್ಗಿ ನೂಡಲಿಗೆ ನೆಸ್ಲೆ ಕಂಪೆನಿ ಸೀಸ ಹಾಕಿದ್ದು ಯಾಕೆ? ಅದನ್ನು ತಿಂದವರ ಆರೋಗ್ಯ ಹದಗೆಟ್ಟರೂ ಚಿಂತಿಲ್ಲ, ತಮಗೆ ಲಾಭವಾದರೆ ಸಾಕು ಎಂಬುದೇ ಕಾರಣವಲ್ಲವೇ?
ಮ್ಯಾಗ್ಗಿ ನೂಡಲ್ಸ್ ಒಂದೇ ಅಲ್ಲ. ಲಾಭದ ಕೊಳ್ಳೆ ಹೊಡೆಯಲಿಕ್ಕಾಗಿ ನೆಸ್ಲೆಯಂತಹ ಕಂಪೆನಿಗಳು ಉತ್ಪಾದಿಸುವ ನೂರಾರು ವಿಷ ಆಹಾರಗಳು ಮಾರುಕಟ್ಟೆಯಲ್ಲಿವೆ. ಉದಾಹರಣೆಗೆ ಶಕ್ತಿಪೇಯ (ಎನರ್ಜಿ ಡ್ರಿಂಕ್ಸ್)ಗಳಾದ ಮೋನ್ಸ್-ಟರ್ ಮತ್ತು ರೆಸ್ಟ್-ಲೆಸ್.  ೨೦೧೫ರ ಆರಂಭದಲ್ಲಿ ಇವನ್ನು ಭಾರತದ ಮಾರುಕಟ್ಟೆಯಿಂದ ಹಿಂದೆಗೆಯುವ ಆದೇಶ ಹೊರಡಿಸಿದ್ದೂ ಸುದ್ದಿಯಾಗಲೇ ಇಲ್ಲ!

ನಮ್ಮ ದೇಶದ ಅಧಿಕಾರಷಾಹಿಯ ದಕ್ಷತೆಯ ಬಗ್ಗೆ ಬೆಳಕು ಚೆಲ್ಲುವ ಪ್ರಸಂಗವೊಂದು ಹೀಗಿದೆ:
ಪ್ರಸಿದ್ಧ ಅಂಕಣಕಾರ ಬಿಕ್ರಂ ವೊಹ್ರಾ ಅವರ ಸೋದರಿಗೆ ಆಕೆಯ ಪೆನ್ಷನ್ ಪಾವತಿ ಬಗ್ಗೆ ಒಂದು ಪತ್ರ ಬರುತ್ತದೆ. ಪೆನ್ಷನ್ ಪ್ರತಿ ತಿಂಗಳು ಪಾವತಿಯಾಗಲಿಕ್ಕಾಗಿ ಆರು ತಿಂಗಳಿಗೊಮ್ಮೆ ಆಕೆ ಒಂದು ಸರ್ಟಿಫಿಕೇಟನ್ನು ಸಲ್ಲಿಸಬೇಕಾಗಿತ್ತು. ಆ ಸರ್ಟಿಫಿಕೇಟಿಗೆ ಸ್ಥಳೀಯ ಬ್ಯಾಂಕ್ ಮೆನೇಜರ್ ಮತ್ತು ಒಬ್ಬ ಗೆಜೆಟೆಡ್ ಅಧಿಕಾರಿ ಸಹಿ ಮಾಡಬೇಕಾಗಿತ್ತು. ೨೦೧೩ರಲ್ಲಿ ಆರು ತಿಂಗಳ ಅವಧಿಯ ಒಂದು ಸರ್ಟಿಫಿಕೇಟನ್ನು ಸಲ್ಲಿಸಲು ಅವರಿಗೆ ಮರೆತು ಹೋಯಿತು. ಹನ್ನೆರಡು ತಿಂಗಳು ದಾಟಿದಾಗ, ಅದರ ನಂತರದ ಆರು ತಿಂಗಳ ಅವಧಿಯ ಸರ್ಟಿಫಿಕೇಟನ್ನು ಸಲ್ಲಿಸಿದರು.
ಅದಾದ ಬಳಿಕ ಅಧಿಕಾರಿಯಿಂದ ಆಕೆಗೆ ಬಂದ ಆ ಪತ್ರದ ಒಕ್ಕಣೆ ಹೀಗಿದೆ: ಇತ್ತೀಚೆಗಿನ “ಜೀವಂತವಾಗಿರುವುದನ್ನು ಖಾತರಿ ಪಡಿಸುವ ಸರ್ಟಿಫಿಕೇಟು” ಸಲ್ಲಿಸಿದ್ದಕ್ಕಾಗಿ ನಿಮಗೆ ವಂದನೆಗಳು. ಆದರೆ, ದಾಖಲೆಗಳು ಪೂರ್ಣ ಆಗಬೇಕಾದರೆ, ಮುಂಚಿನ ಆರು ತಿಂಗಳ ಅವಧಿಗೂ ಪ್ರತ್ಯೇಕ ಸರ್ಟಿಫಿಕೇಟನ್ನು ಸಲ್ಲಿಸತಕ್ಕದ್ದು.
ಆಕೆ ಈಗ ಜೀವಂತವಾಗಿದ್ದಾರೆ ಎಂದಾದರೆ, ಮುಂಚಿನ ಆರು ತಿಂಗಳ ಅವಧಿಯಲ್ಲಿಯೂ ಜೀವಂತವಾಗಿದ್ದರು ಎಂದು ಪರಿಗಣಿಸುವುದು ಸೂಕ್ತ ಎಂದು ವಿವರಿಸಿದರೂ ಅದನ್ನು ಕೇಳಲು ಆ ಅಧಿಕಾರಿ ತಯಾರಿಲ್ಲ.
ಆಕೆಯ ಪೆನ್ಷನ್ ಪಾವತಿಗೆ ಸಂಬಂಧಿಸಿದ ದಾಖಲೆಗಳು ಪೂರ್ಣವಾಗಿಲ್ಲ; “ಪವಿತ್ರ” ನಿಯಮಗಳನ್ನು ಆಕೆ ಅನುಸರಿಸಿಲ್ಲ. ಮುಂಚಿನ ಆರು ತಿಂಗಳಿಗೆ ಸಂಬಂಧಿಸಿದಂತೆ ಅಧಿಕೃತ ಸರ್ಟಿಫಿಕೇಟ್ ಕಳಿಸುವ ತನಕ ಆಕೆಯ ಬ್ಯಾಂಕ್ ಖಾತೆಗೆ ಪೆನ್ಷನ್ ಜಮೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು ಆ ಅಧಿಕಾರಿ!

ಹಿಮಾಚಲ ಪ್ರದೇಶದ ಮನಾಲಿಗೆ ಹೈದರಾಬಾದಿನ ವಿಜ್ನಾನಜ್ಯೋತಿ ಎಂಜಿನಿಯರಿಂಗ್ ಕಾಲೇಜಿನ ೫೧ ವಿದ್ಯಾರ್ಥಿಗಳ ಪ್ರವಾಸದ ಸಂದರ್ಭ. ೮ ಜೂನ್ ೨೦೧೪ರಂದು ಬಿಯಾಸ್ ನದಿ ದಡದಲ್ಲಿರುವ ಹನೋಗಿ ಮಾತಾ ದೇಗುಲದ ಹತ್ತಿರ ನೆರೆದಿದ್ದ ಅವರೆಲ್ಲ ಖುಷಿಯಿಂದ ಫೋಟೋ ತೆಗೆಸಿಕೊಳ್ಳುತ್ತಿದ್ದರು.
ಹಠಾತ್ತಾಗಿ ಬಿಯಾಸ್ ನದಿಯಲ್ಲಿ ಐದಾರು ಅಡಿಗಳೆತ್ತರಕ್ಕೆ ನೀರು ನುಗ್ಗಿ ಬಂತು. ನೋಡನೋಡುತ್ತಿದ್ದಂತೆಯೇ ಅವರಲ್ಲಿ ೨೪ ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋದರು.
ಯಾಕೆ ಹೀಗಾಯಿತು? ಯಾವುದೇ ಮುನ್ನೆಚ್ಚರಿಕೆ ನೀಡದೆ ಲಾರ್ಜಿ ಅಣೆಕಟ್ಟಿನ ಎಲ್ಲ ಗೇಟುಗಳನ್ನು ತೆರೆದ ಕಾರಣ. ಆದರೆ, ಪ್ರಕರಣದ ಮೂಲಕ್ಕೆ ಹೋದರೆ ತಿಳಿಯುತ್ತದೆ ನಿಜವಾದ ಕಾರಣ. ಅಣೆಕಟ್ಟಿನಿಂದ ನೀರು ಬಿಡುವಾಗ ನಿಧಾನವಾಗಿ ಒಂದೊಂದೇ ಗೇಟುಗಳನ್ನು ತೆರೆಯಬೇಕು. ಅದಲ್ಲದೆ, ಅಣೆಕಟ್ಟಿನ ಅಧಿಕಾರಿಗಳು ಜನರಿಗೆ ಕಡ್ಡಾಯವಾಗಿ ಮುನ್ನೆಚ್ಚರಿಕೆ ನೀಡಬೇಕು. ಅಂದರೆ, ನದಿದಡದಲ್ಲಿ ಜನ ಸೇರುವಲ್ಲೆಲ್ಲ ಅಣೆಕಟ್ಟಿನಿಂದ ನೀರು ಬಿಡುವ ಮುನ್ಸೂಚನೆ ಘೋಷಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಬೇಕು. ಮಾತ್ರವಲ್ಲ, ನದಿಯ ದಡದ ಪಕ್ಕದ ರಸ್ತೆಗಳಲ್ಲಿ ಸೈರನ್ ಬಾರಿಸುತ್ತಾ ವಾಹನಗಳಲ್ಲಿ ಹಲವು ಬಾರಿ ಸುತ್ತಾಡಿ ನೀರು ಬಿಡುವ ಬಗ್ಗೆ ಘೋಷಣೆ ಕೂಗಿ ಜನರನ್ನು ಎಚ್ಚರಿಸಬೇಕು.
ಅಲ್ಲಿ ಇದ್ಯಾವ ಮುನ್ನೆಚ್ಚರಿಕೆ ಕ್ರಮವನ್ನೂ ಅನುಸರಿಸದೆ, ಒಂದೇ ಸಲ ಅಣೆಕಟ್ಟಿನ ಎಲ್ಲ ಗೇಟುಗಳನ್ನೂ ತೆರೆದು, ನೀರು ಬಿಟ್ಟದ್ದು ಯಾಕೆ? ಸ್ಥಳೀಯರು ಹೇಳುವ ಪ್ರಕಾರ, ಮರಳು ಮಾಫಿಯಾ ಜೊತೆ ಲಾರ್ಜಿ ಅಣೆಕಟ್ಟಿನ ಅಧಿಕಾರಿಗಳು ಕೈಜೋಡಿಸಿದ್ದೇ ಇದಕೆ ಕಾರಣ. ರಾಷ್ಟ್ರೀಯ ಹೆದ್ದಾರಿಯಿಂದ ಬಿಯಾಸ್ ನದಿದಡಕ್ಕೆ ಹೋಗಲಿಕ್ಕಾಗಿ ಅಲ್ಲಲ್ಲಿ ಮರಳು ಮಾಫಿಯಾ ನಿರ್ಮಿಸಿರುವ ಅಕ್ರಮ ರಸ್ತೆಗಳೇ ಇದಕ್ಕೆ ಪುರಾವೆ. ಅಗಾಧ ಪ್ರಮಾಣದ ನೀರನ್ನು ಒಂದೇ ಬಾರಿ ಅಣೆಕಟ್ಟಿನಿಂದ ಕೆಳಕ್ಕೆ ನುಗ್ಗಿಸಿದರೆ ಭಾರೀ ಪರಿಮಾಣದ ಮರಳು ನೀರಿನೊಂದಿಗೆ ನದಿಬುಡಕ್ಕೆ ಇಳಿದು ಬಂದು ಶೇಖರವಾಗುತ್ತದೆ. ಈ ಮರಳನ್ನು ಕಳ್ಳಸಾಗಣೆದಾರರು ಅಕ್ರಮವಾಗಿ ರಾತ್ರಿ ಹೊತ್ತಿನಲ್ಲಿ ಟ್ರಾಕ್ಟರಿನಲ್ಲಿ ಸಾಗಿಸಿ, ಅನಂತರ ಮಾರಿ, ಲಕ್ಷಗಟ್ಟಲೆ ರೂಪಾಯಿ ಲಾಭ ಗಳಿಸುತ್ತಾರೆ.

ಬಹುರಾಷ್ಟ್ರೀಯ ಹಾಗೂ ಭಾರತೀಯ ಔಷಧಿ ಕಂಪೆನಿಗಳು ತಮ್ಮ ಹೊಸ ಔಷಧಿಗಳ ವೈದ್ಯಕೀಯ ಪ್ರಯೋಗಗಳನ್ನು ಮನುಷ್ಯರ ಮೇಲೂ ನಡೆಸುತ್ತವೆ. ಈ ಪ್ರಯೋಗಗಳಿಗೆ ಬಲಿಯಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ ಹಾಗೂ ಶಾಶ್ವತ ಅಂಗವೈಕಲ್ಯ ಅಥವಾ ಕ್ಯಾನ್ಸರಿನಂತಹ ರೋಗಗಳಿಂದ ನರಳುತ್ತಿದ್ದಾರೆ.

ಇಂತಹ "ಬಲಿವ್ಯಕ್ತಿ"ಗಳ ರಕ್ಷಣೆಗ ಸರಕಾರ ಮುಂದಾಗಬೇಕೆಂಬ ಬೇಡಿಕೆಯನ್ನು ಹಲವಾರು ಸರಕಾರೇತರ ಸಂಘಟನೆಗಳು ಈ ವರುಷ ಪ್ರಬಲವಾಗಿ ಮುಂದಿಟ್ಟಿವೆ. ಅಂತೂ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಆರೋಗ್ಯ ಮಂತ್ರಾಲಯದ ಅಧೀನದಲ್ಲಿರುವ ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್ಓ) ಇಂತಹ ಬಲಿವ್ಯಕ್ತಿಗಳ ಸಾವು ಮತ್ತು ದೈಹಿಕಹಾನಿಗೆ ಪರಿಹಾರ ನೀಡಲು ಸೂತ್ರವೊಂದನ್ನು ಸಿದ್ಧಪಡಿಸಿದೆ.

ಆದರೆ, ಈ ಸೂತ್ರದ ಪ್ರಕಾರ ಉತ್ತಮ ಸಂಬಳ ಪಡೆಯುತ್ತಿರುವ ವ್ಯಕ್ತಿಯು ಔಷಧಿ ಪ್ರಯೋಗದ ಬಲಿವ್ಯಕ್ತಿಯಾದರೆ ಮಾತ್ರ, ತನಗಾದ ನಷ್ಟಕ್ಕೆ ಸೂಕ್ತ ಪರಿಹಾರ ಪಡೆಯಬಹುದು. ಯಾವನೇ ಬಡವ, ನಿರುದ್ಯೋಗಿ, ರೋಗಪೀಡಿತ ಅಥವಾ ನಿರುದ್ಯೋಗಿ ಮಹಿಳೆ ಬಲಿವ್ಯಕ್ತಿಯಾದರೆ, ಅಲ್ಪ ಪರಿಹಾರ ಸಿಕ್ಕೀತು. "ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಬಡ ಹಾಗೂ ನಿರುದ್ಯೋಗಿ ವ್ಯಕ್ತಿಗಳಿಗೇ ಔಷಧಿ ಪ್ರಯೋಗಗಲಲ್ಲಿ ಭಾಗವಹಿಸಲು ಆಮಿಷ ಒಡ್ಡಲಾಗುತ್ತದೆ ಅಥವಾ ಅಂಥವರೇ ಇಲ್ಲಿ ಪುಕ್ಕಟೆ ಚಿಕಿತ್ಸೆ ಸಿಗುತ್ತದೆಂಬ ಆಶೆಯಿಂದ ಭಾಗವಹಿಸುತ್ತಾರೆ" ಎಂದು ತಿಳಿಸುತ್ತಾರೆ, ಡೆಲ್ಲಿಯ ಸಾಮ ಸಂಸ್ಥೆಯ ನಿರ್ದೇಶಕರಾದ ಎನ್. ಬಿ. ಸರೋಜಿನಿ (ಅವರದು ಮಹಿಳೆಯರ ಆರೋಗ್ಯ ವಿಷಯಗಳ ಬಗ್ಗೆ ಕೆಲಸ ಮಾಡುತ್ತಿರುವ ಲಾಭರಹಿತ ಸಂಸ್ಥೆ.) ಅಂಥವರು ಬಲಿವ್ಯಕ್ತಿಗಳಾದರೆ, ಈ ಸೂತ್ರದಿಂದ ನ್ಯಾಯ ಸಿಕ್ಕೀತೇ?

ಅತಾರ್ಕಿಕ ಸೂತ್ರ: ಬಲಿವ್ಯಕ್ತಿಗಳಿಗೆ ನೀಡುವ ಪರಿಹಾರದ ಮೊತ್ತ ಈ ನಾಲ್ಕು ಅಂಶಗಳನ್ನು ಅವಲಂಬಿಸಿದೆ: (ಎ) ಮಾಸಿಕ ಆದಾಯ (ಬಿ) ವಯಸ್ಸು (ಎಫ್) ಯಾವುದೇ ರೋಗದಿಂದ ಪೀಡಿತರಾಗಿದ್ದರೆ ಅದರ ತೀವ್ರತೆ ಮತ್ತು (ಡಿ) ಪ್ರಯೋಗದಿಂದಾಗಿ ದೈಹಿಕ ಹಾನಿ ಆಗಿದ್ದರೆ ಅದರ ಶೇಕಡಾ ಪ್ರಮಾಣ.

ಮಾಹಿತಿ ಹಕ್ಕು ಕಾಯಿದೆ ೨೦೦೫ರಲ್ಲಿ ಜ್ಯಾರಿಯಾದಾಗ ಇದರಿಂದ ಏನಾದೀತೆಂದು ಮೂಗು ಮುರಿದವರು ಹಲವರು. ಅವರೆಲ್ಲರೂ ಇಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕಾಗಿದೆ.

ಇದಕ್ಕೆ ಕಾರಣ ಮಾಹಿತಿ ಹಕ್ಕು ಕಾರ್ಯಕರ್ತರ ಛಲ ಬಿಡದ ಕಾಯಕದಿಂದಾಗಿ ಒಂದಾದ ಮೇಲೊಂದರಂತೆ ಹಗರಣಗಳು ಬಯಲಾಗುತ್ತಿರುವುದು. ಆದರೆ ಮಾಹಿತಿ ಕಾರ್ಯಕರ್ತರು ತಮ್ಮ ನಿಸ್ವಾರ್ಥ ಜನಪರ ಕೆಲಸಕ್ಕಾಗಿ ಜೀವವನ್ನೇ ಪಣಕ್ಕಿಡಬೇಕಾಗಿದೆ.

ಅಂತಹ ನೂರಾರು ಕಾರ್ಯಕರ್ತರಲ್ಲಿ ಛತ್ತಿಸಗಡದ ರಾಯಘರ್ ಜಿಲ್ಲೆಯ ರಮೇಶ್ ಅಗರವಾಲ್ ಒಬ್ಬರು. ಖಾಸಗಿ ಗಣಿ ಕಂಪೆನಿ ಮತ್ತು ವಿದ್ಯುದುತ್ಪಾದನಾ ಕಂಪೆನಿಗಳಿಂದಾಗಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡ ಅಸಹಾಯಕರ ಹಕ್ಕುಗಳ ರಕ್ಷಣೆಗಾಗಿ ಅವರ ಹೋರಾಟ.

ಜನಪರ ಕಾಯಕಕ್ಕೆ ರಮೇಶ್ ಅಗರವಾಲರು ಧುಮುಕಿದ್ದು ೧೯೯೦ರಲ್ಲಿ - ಸಾಕ್ಷರತಾ ಆಂದೋಲನ ರಾಯಘರದಲ್ಲಿ ಶುರುವಾದಾಗ. ಅದು ೩೦,೦೦೦ ಸ್ವಯಂಸೇವಕರ ಮೂಲಕ ಜಿಲ್ಲೆಯ ಮೂರು ಲಕ್ಷ ಅನಕ್ಷರಸ್ಥರಿಗೆ ಅಕ್ಷರಜ್ನಾನ ನೀಡುವ ಆಂದೋಲನ. ಯುವ ಸ್ವಯಂಸೇವಕರ ಉತ್ಸಾಹದಿಂದಾಗಿ ಆಂದೋಲನ ಯಶಸ್ವಿಯಾಯಿತು. ಜೊತೆಗೆ, ಅದು ಕೆಲವರ ಬದುಕನ್ನೇ ಬದಲಾಯಿಸಿತು. ಅಂಥವರಲ್ಲಿ ಒಬ್ಬರು ರಮೇಶ್ ಅಗರವಾಲ್.

ಅನಂತರ, ಹಲವು ಉತ್ಸಾಹಿ ಯುವಜನರ ಜೊತೆ ಸೇರಿ ಅವರು ಸ್ಥಾಪಿಸಿದ ಸಂಸ್ಥೆ "ಲೋಕಶಕ್ತಿ." ಶೋಷಣೆಗೊಳಗಾದ ಬಡಜನರಿಗೆ ಗೌರವದ ಬದುಕು ಕಟ್ಟಿಕೊಡುವುದು ಅದರ ಆಶಯ. ಹೊಸದಾಗಿ ಪಸರಿಸಿದ ಸಾಕ್ಷರತೆಯ ಆಧಾರದಿಂದ ಜನಸಮುದಾಯಗಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅನ್ಯಾಯಗಳ ವಿರುದ್ಧ ಪ್ರಜಾಸತ್ತಾತ್ಮಕ ವಿಧಾನಗಳಿಂದ ಪ್ರತಿಭಟಿಸುವುದು ಆ ಸಂಸ್ಥೆಯ ಕಾರ್ಯಯೋಜನೆ.

ದೈವಸಂಭೂತನೆಂದು ತಾನೇ ಹೇಳಿಕೊಂಡು, ತನ್ನ ಭಕ್ತರನ್ನು ವಂಚಿಸಿದ ವ್ಯಕ್ತಿ ಈಗ ರಾಜಸ್ಥಾನದ ಅಜ್ಮೀರದ ಸೆರೆಮನೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಆತ ೭೩ ವರುಷ ವಯಸ್ಸಿನ ಜಗಧೀಸ್ ಪ್ರಸಾದ್ ದಧೀಚ. ಆತ ಹೇಳಿಕೊಂಡದ್ದು ಕೆಟ್ಟ ಶಕ್ತಿಗಳನ್ನು ನಿವಾರಿಸುತ್ತೇನೆಂದು; ಆದರೆ ಮಾಡಿದ್ದು ಇಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿ ನಂಬಿದವರಿಗೆ ಮೋಸ.

ತಾನು ಭೂತಗಳ ಜೊತೆ ಮಾತನಾಡಬಲ್ಲೆ ಎನ್ನುತ್ತಿದ್ದ ಜಗಧೀಶ. ಆದರೆ, ಬೆಂಕಿಕಡ್ಡಿ ಪೊಟ್ಟಣದಲ್ಲಿ ಸಣ್ಣ ಧ್ವನಿಮುದ್ರಕವನ್ನು ಅಡಗಿಸಿಟ್ಟು, ಅದರಿಂದ ಕೆಲವು ಗುಸುಗುಸು ಮಾತುಗಳನ್ನು ಹೊರಡಿಸುತ್ತಿದ್ದ. ಕತ್ತಲು ತುಂಬಿದ ಕಾಡುಗಳಿಗೆ ಭಕ್ತರನ್ನು ಕರೆದೊಯ್ದು, ಲೇಸರ್ ಪಾಯಿಂಟರ್ ಮತ್ತು ಪುಟ್ಟ ಪ್ರೊಜೆಕ್ಟರುಗಳ ಮೂಲಕ ಎತ್ತರದ ಮರಗಳಲ್ಲಿ ಬೆಳಕಿನ ವಿನ್ಯಾಸಗಳನ್ನು ಮೂಡಿಸಿ, ಅವು ಚಲಿಸುವ ದೆವ್ವಗಳೆಂದು ಅವರನ್ನು ನಂಬಿಸುತ್ತಿದ್ದ. ಮೈಸೂರಿನ ದಸರಾದಲ್ಲಿ ಬನ್ನಿ ಮಂಟಪದ ಬಯಲಿನ ಆಕಾಶದಲ್ಲಿ (ಪಂಜಿನ ಕವಾಯತಿನ ಮುಂಚೆ) ಪ್ರದರ್ಶಿಸಿದ ಲೇಸರ್ ಬೆಳಕಿನ ಬಿಂಬಗಳನ್ನು ನೋಡಿದವರಿಗೆ ಲೇಸರ್ ಕಿರಣಗಳ ಮೂಲಕ ಕತ್ತಲಿನಲ್ಲಿ ಬೆಳಕಿನ ಯಾವುದೇ ವಿನ್ಯಾಸ ಮೂಡಿಸ ಬಹುದೆಂಬುದು ಅರ್ಥವಾಗುತ್ತದೆ.

ಅವನಿಂದ ವಂಚನೆಗೊಳಗಾದ ಮೂವರು ದೂರು ನೀಡಿದ ಬಳಿಕ ೨೭ ಆಗಸ್ಟ್ ೨೦೧೨ರಂದು ಜಗಧೀಶನನ್ನು ಪೊಲೀಸರು ಬಂಧಿಸಿದರು. ಅಜ್ಮೀರದ ವರ್ತಕ ಮಹೇಂದ್ರ ಕುಮಾರ್ (ವಯಸ್ಸು ೫೦) ಕೆಟ್ಟಶಕ್ತಿಗಳು ತನಗೆ ತೊಂದರೆ ನೀಡುತ್ತಿವೆ ಎಂದು ಭಾವಿಸಿದ್ದರು; ಅವನ್ನು ನಿವಾರಿಸಲಿಕ್ಕಾಗಿ ಜಗಧೀಶ ತನ್ನಿಂದ ರೂ.೧.೮ ಲಕ್ಷ ಪಡೆದು ವಂಚಿಸಿದ್ದಾನೆಂದು ದೂರು ನೀಡಿದ್ದಾರೆ.

ಇದೇ ಉದ್ದೇಶಕ್ಕಾಗಿ ಜಗಧೀಶ ತನ್ನಿಂದ ರೂ.೧೬,೦೦೦ ಕಿತ್ತುಕೊಂಡಿದ್ದಾನೆ ಎಂಬುದು ಇನ್ನೊಬ್ಬರ ದೂರು. "ಜಗಧೀಶ ಏನೇನೋ ಪೂಜಾವಿಧಿಗಳನ್ನು ಮಾಡಿದ. ದೆವ್ವಗಳ ಜೊತೆ ಮಾತಾಡಿದ್ದೇನೆಂದು ಮತ್ತೆಮತ್ತೆ ಹೇಳಿದ. ಆದರೆ ನನಗೇನೂ ಒಳ್ಳೆಯದಾಗಲಿಲ್ಲ" ಎಂಬುದು ಅವರ ಅಳಲು. ಮೂರನೆಯ ದೂರುದಾರ ಮುಖೇಶ್, ನಿಧಿ ಶೋಧನೆಗೆ ಸಹಾಯ ಮಾಡಲಿಕ್ಕಾಗಿ ಜಗಧೀಶ ತನ್ನಿಂದ ರೂ.೧೧,೦೦೦ ಪಡೆದು ಮೋಸ ಮಾಡಿದ್ದಾನೆಂದು ದೂರಿತ್ತಿದ್ದಾರೆ.

ನಗರಗಳ ಹೊರವಲಯಗಳ ಬಹುಪಾಲು ರೈತರು ತರಕಾರಿ ಬೆಳೆಯಲಿಕ್ಕಾಗಿ ಕೊಳಚೆ ನೀರನ್ನು ಬಳಸುತ್ತಾರೆ. ಆ ಪ್ರದೇಶಗಳಲ್ಲಿ ಏರೊಸೋಲಿನಂತಹ ವಾಯು ಮಾಲಿನ್ಯಕಾರಕಗಳು ಜಾಸ್ತಿ. ಈ ಎರಡು ಕಾರಣಗಳಿಂದಾಗಿ ಅವರು ಬೆಳೆಯುವ ತರಕಾರಿ ವಿಷಮಯವಾಗಿರುತ್ತದೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಿಂದ ಇದೀಗ ತಿಳಿದು ಬಂದ ವಿಷಯ: ಅಂತಹ ಸ್ಥಳದಲ್ಲಿ ಬೆಳೆದ ತರಕಾರಿಗಳಲ್ಲಿ ಭಾರಲೋಹಗಳ ಪ್ರಮಾಣ ಜಾಸ್ತಿ ಇರುತ್ತದೆ. ಇದು ಆಹಾರ ಕಲಬೆರಕೆ ನಿಷೇಧ ಕಾಯಿದೆಯಲ್ಲಿ ಸೂಚಿಸಿದ "ಸಹನೀಯ ಮಟ್ಟ"ಕ್ಕಿಂತಲೂ ಅಧಿಕ.

ರಾಡಿಷ್, ಸ್ಪಿನಾಚ್ ಮತ್ತು ಟೊಮೆಟೊಗಳನ್ನು ಮಣ್ಣಿನ ಕುಂಡಗಳಲ್ಲಿ ಸಂಶೋಧಕರು ಬೆಳೆಸಿದರು. ಅವುಗಳಿಗೆ ನೀಡಿದ್ದು ಕೊಳಚೆನೀರು ಮತ್ತು ಏರೊಸೋಲ್. ಈ ಕುಂಡಗಳನ್ನು ಇರಿಸಿದ್ದು ಮೂರು ಸ್ಥಳಗಳಲ್ಲಿ: ತಡಿಯ ಎಂಬ ಗ್ರಾಮೀಣ ಸ್ಥಳದಲ್ಲಿ, ಕಂಟೋನ್ಮೆಂಟ್ ಜಾಗದಲ್ಲಿ ಮತ್ತು ವಾರಣಾಸಿಯಲ್ಲಿ ವಿಶ್ವವಿದ್ಯಾಲಯದ ಸನಿಹದ ಹೆದ್ದಾರಿ ಹತ್ತಿರದಲ್ಲಿ. ಸಂಶೋಧನೆಯಲ್ಲಿ ಹೋಲಿಕೆಗಾಗಿ (ಕಂಟ್ರೋಲ್) ಬಳಸಿದ್ದು ವಿಶ್ವವಿದ್ಯಾಲಯದಲ್ಲಿ ಇರಿಸಿದ ಶುದ್ಧನೀರು ಎರೆದ ಕುಂಡಗಳನ್ನು.

ಸಂಶೋಧನೆಗೆ ಒಳಪಡಿಸಿದ ಸಸ್ಯಗಳಲ್ಲಿ ಅತ್ಯಧಿಕವಾಗಿ ಸಂಗ್ರಹವಾದದ್ದು ಸೀಸ. ಅನಂತರದ ಸ್ಥಾನ ಭಾರಲೋಹಗಳಾದ ತಾಮ್ರ, ನಿಕ್ಕಲ್, ಕ್ರೋಮಿಯಂ, ಮತ್ತು ಕಾಡ್ಮಿಯಂ. ಹೆದ್ದಾರಿ ಹತ್ತಿರದ ಕುಂಡಗಳ ಸಸಿಗಳಲ್ಲಿ ಅತ್ಯಧಿಕ ಸಂಗ್ರಹ ಇದ್ದದ್ದು ಏರೊಸೋಲಿನದು. ಯಾಕೆಂದರೆ ಅಲ್ಲಿ ಭಾರವಾಹನಗಳಿಂದ, ಸಣ್ಣ ಕೈಗಾರಿಕೆಗಳಿಂದ ಮತ್ತು ರೈಲುಗಳಿಂದ ಹೊರನುಗ್ಗುವ ಹೊಗೆಯಿಂದಾಗಿ ಮಾಲಿನ್ಯಕಾರಕಗಳ ಪ್ರಮಾಣವೂ ಅಧಿಕ.

ಸಂಶೋಧಕರ ತಂಡವು ಪತ್ತೆ ಮಾಡಿದ ವಿಷಯ: ಏರೊಸೋಲ್ ಮತ್ತು ಕೊಳಚೆನೀರು ಬಳಸಿ ಬೆಳೆಸಿದ ತರಕಾರಿ ಸಸಿಗಳ "ತಿನ್ನುವ ಭಾಗ"ಗಳಾದ ಎಲೆ, ಹಣ್ಣು ಮತ್ತು ಬೇರುಗಳಲ್ಲಿ ಭಾರಲೋಹಗಳ ಪ್ರಮಾಣ ಶೇಕಡಾ ೧೦ರಿಂದ ಶೇಕಡಾ ೩೦ ಅಧಿಕ.

ಕೊಳಚೆನೀರು ಹಾಯಿಸಿದ ಕಾರಣ ಬೇರುತರಕಾರಿಗಳಲ್ಲಿ ಭಾರಲೋಹಗಳ ಸಂಗ್ರಹಣೆ ಅಧಿಕವಾಯಿತು. ಹಾಗೆಯೇ ವಾಯು ಮಾಲಿನ್ಯದಿಂದಾಗಿ ಸಸ್ಯಗಳ ಎಲೆತರಕಾರಿಗಳಲ್ಲಿ ಭಾರಲೋಹಗಳ ಪ್ರಮಾಣ ಅಧಿಕವಾಯಿತು.

ಮಧ್ಯಪ್ರದೇಶದ ಪೊಲೀಸರು ಆಯುರ್ವೇದ ವೈದ್ಯರೂ ಸಾಮಾಜಿಕ ಕಾರ್ಯಕರ್ತರೂ ಆದ ಮೆಹಮೂದ್ ನಯ್ಯಾರ್ ಅಜಂರನ್ನು ೧೯೯೨ರಲ್ಲಿ ಬಂಧಿಸಿದರು. ವಿದ್ಯುತ್ ಕದ್ದಿದ್ದಾರೆ ಎಂಬುದು ಅವರ ಮೇಲಿನ ಆಪಾದನೆ.

ಅನಂತರ ಇಪ್ಪತ್ತು ವರುಷಗಳ ಉದ್ದಕ್ಕೂ ಪೊಲೀಸರಿಂದ ಅಜಂರಿಗೆ ಮಾನಸಿಕ ಹಿಂಸೆ, ಕಿರುಕುಳ ಹಾಗೂ ಸಾರ್ವಜನಿಕ ಅವಮಾನ. ಕಲ್ಲಿದ್ದಲು ಮಾಫಿಯಾ ಮತ್ತು ಭ್ರಷ್ಟ ಪೊಲೀಸರಿಂದ ಶೋಷಣೆಗೊಳಗಾದ ಜನರ ಪರವಾಗಿ ಮೆಹಮೂದ್ ಅಜಂ ಹೋರಡುತ್ತಿದ್ದುದೇ ಇದಕ್ಕೆಲ್ಲ ಕಾರಣ.

ನ್ಯಾಯಕ್ಕಾಗಿ ಹಾಗೂ ಆತ್ಮಗೌರವಕ್ಕಾಗಿ ಪಣ ತೊಟ್ಟಿದ್ದ ಮೆಹಮೂದ ಅಜಂ ಅಂತಿಮವಾಗಿ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ದೇಶದ ಅತ್ಯುನ್ನತ ಕೋರ್ಟ್ ೩ ಆಗಸ್ಟ್ ೨೦೧೨ರಲ್ಲಿ ಚಾರಿತ್ರಿಕ ತೀರ್ಪು ನೀಡಿದೆ. ಈ ತೀರ್ಪಿನಲ್ಲಿ, (ಈಗಿನ) ಚತ್ತಿಸಘರ್ ರಾಜ್ಯವು ಅಜಂರಿಗೆ ರೂಪಾಯಿ ೫ ಲಕ್ಷ ಪರಿಹಾರ ಪಾವತಿಸಬೇಕೆಂದೂ, ಈ ಮೊತ್ತವನ್ನು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳಿಂದ ಸಮಾನ ಅನುಪಾತದಲ್ಲಿ ಸರಕಾರವು ವಸೂಲಿ ಮಾಡಬೇಕೆಂದೂ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಮೆಹಮೂದ್ ಅಜಂರಿಗೆ ಪೊಲೀಸರು ಮಾಡಿದ ಅಮಾನವೀಯ ಹಿಂಸೆ ಮತ್ತು ಸಾರ್ವಜನಿಕ ಅವಮಾನಕ್ಕೆ ಪರಿಹಾರವಾಗಿ ಈ ಮೊತ್ತ ಎಂಬುದು ಸುಪ್ರೀಂ ಕೋರ್ಟಿನ ಅಭಿಮತ. ಅಜಂರನ್ನು ಬಂಧಿಸಿದ ಬಳಿಕ "ಕಳ್ಳ ಮತ್ತು ಮೋಸಗಾರ" ಎಂಬ ಫಲಕವನ್ನು ಅವರ ಕೈಯಲ್ಲಿರಿಸಿ, ಅವರ ಫೋಟೋ ತೆಗೆಸಿದ್ದರು ಪೊಲೀಸರು. ಅನಂತರ, ಆ ಫೋಟೋ ಸಹಿತವಾದ ಬ್ಯಾನರುಗಳನ್ನು ನಗರದಲ್ಲಿ ಹಲವಾರು ಜಾಗಗಳಲ್ಲಿ ಪ್ರದರ್ಶಿಸಿದ್ದರು ಪೊಲೀಸರು. ಅಜಂರ ಸಾಮಾಜಿಕ ಮತ್ತು ಕೌಟುಂಬಿಕ ಜೀವನವನ್ನು ನಾಶ ಮಾಡುವುದೇ ಈ ಕೃತ್ಯದ ಉದ್ದೇಶವಾಗಿತ್ತು.

Pages