ಜಗತ್ತಿನ ಬಹುಪಾಲು ಜನಸಂಖ್ಯೆ ಹೊಂದಿರುವ ಏಷ್ಯಾ ಖಂಡದಲ್ಲಿ ಪ್ರಪ್ರಥಮವಾಗಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತರಾದವರು ಎಂಬ ಹೆಗ್ಗಳಿಕೆ ವಿಶ್ವಕವಿ ರವೀಂದ್ರನಾಥ ಟಾಗೋರ್ ಅವರದು.

ಕೊಲ್ಕತಾದಲ್ಲಿ ೭ ಮೇ ೧೮೬೧ರಲ್ಲಿ ಜನಿಸಿದ ಟಾಗೋರರ ೧೫೯ನೇ ಜನ್ಮ ಜಯಂತಿ ಇವತ್ತು ನಮ್ಮ ದೇಶದಲ್ಲಿ ರವೀಂದ್ರ ಜಯಂತಿಯಾಗಿ ಆಚರಿಸಲ್ಪಡುತ್ತಿದೆ. ಪಶ್ಚಿಮ ಬಂಗಾಳದ ಜನರಿಗಂತೂ ಬೈಸಾಕಿಯ ಇಂದಿನ ದಿನ ಸಂಭ್ರಮದ ದಿನ.

ಟಾಗೋರರು ಕವನಗಳನ್ನು ಮಾತ್ರವಲ್ಲ, ಹಲವಾರು ಸಣ್ಣಕತೆ, ಕಾದಂಬರಿ ಮತ್ತು ನಾಟಕಗಳನ್ನು ಬರೆದಿದ್ದಾರೆ. ಜನಸಾಮಾನ್ಯರ ಬದುಕು, ಸಾಮಾಜಿಕ ಸಂಗತಿಗಳು, ಸಾಹಿತ್ಯ ವಿಮರ್ಶೆ ಮತ್ತು ತತ್ವಶಾಸ್ತ್ರ ಅವರ ಬರಹಗಳ ಹೂರಣ.ಅವರ ಬಹುಪಾಲು ಬರವಣಿಗೆ ಮೂಲತಃ ಬಂಗಾಳಿ ಭಾಷೆಯಲ್ಲಿದೆ. ಅನಂತರ, ಪಾಶ್ಚಾತ್ಯ ದೇಶಗಳ ಜನರಿಗೂ ಅವು ಓದಲು ಲಭ್ಯವಾಗಲೆಂದು ಅವನ್ನು ಇಂಗ್ಲಿಷಿಗೆ ಅನುವಾದಿಸಲಾಯಿತು.

“ಜೋಗದ ಸಿರಿಬೆಳಕಿನಲ್ಲಿ ….. ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ” - ೧೯೭೦ರ ದಶಕದಲ್ಲಿ, ನನ್ನ ತಲೆಮಾರಿನ ಯುವಕರಲ್ಲಿ ರೋಮಾಂಚನ ಮೂಡಿಸಿದ ಕವನ. ಈಗಲೂ ಕನ್ನಡ ನಾಡಿನ ಎಲ್ಲ ತಲೆಮಾರಿನವರಲ್ಲಿ ರೋಮಾಂಚನ ಚಿಮ್ಮಿಸುವ ಕವಿತೆ. ಅದನ್ನು ಬರೆದ ಕವಿ ಕೆ.ಎಸ್. ನಿಸಾರ್ ಅಹಮದ್ (೮೪) ಇಂದು ನಮ್ಮೊಂದಿಗಿಲ್ಲ. ನಿನ್ನೆ, ೩ ಮೇ ೨೦೨೦ರಂದು ನಮ್ಮನ್ನಗಲಿದರು. (ಜನನ: ೫ ಫೆಬ್ರವರಿ ೧೯೩೬, ದೇವನಹಳ್ಳಿ, ಬೆಂಗಳೂರು ಜಿಲ್ಲೆ)

ನಮ್ಮ “ಸಂಪದ"ದ "ಶ್ರಾವ್ಯ" ವಿಭಾಗದಲ್ಲಿ ಅವರ ಸಂದರ್ಶನ ಲಭ್ಯ (ಸಂಪುಟ ೭). ಆ ಸಂದರ್ಶನವನ್ನು (೪೮ ನಿಮಿಷ) ಇವತ್ತು ಪುನಃ ಕೇಳಿದೆ. ಜನಪ್ರಿಯ ಕವಿಯಾಗಿ, ಪ್ರಾಧ್ಯಾಪಕರಾಗಿ, ಚಿಂತಕರಾಗಿ, ಕನ್ನಡದ ಕಟ್ಟಾಳುವಾಗಿ, ಮಾನವತಾವಾದಿಯಾಗಿ ನಿಸಾರ್ ಅಹಮದರ ವ್ಯಕ್ತಿತ್ವ ಅದರಲ್ಲಿ ಮೂಡಿ ಬಂದಿದೆ.

ಆ ಸಂದರ್ಶನದ ಆರಂಭದಲ್ಲಿಯೇ ಅವರು ಹೇಳಿದ್ದಾರೆ, “ವಿಜ್ನಾನದ ಜೊತೆಯಲ್ಲಿ ಕನ್ನಡ ಹೆಜ್ಜೆ ಹಾಕಬೇಕು. ಇಲ್ಲದಿದ್ದರೆ ಮುಂದುವರಿಯಲು ಆಗಲ್ಲ.” ತಂತ್ರಜ್ನಾನದ ಅಡಿಪಾಯದಿಂದ “ಸಂಪದ" ಬೆಳೆದು ಬಂದಿರುವುದು ಸಿಹಿಸುದ್ದಿ ಎಂದ ನಿಸಾರ್ ಅಹಮದರು ಇದು ಜಗತ್ತಿನ ಕನ್ನಡಿಗರೆಲ್ಲ ಸಂವಾದ ನಡೆಸಲು ವೇದಿಕೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಮೇ ೩, ೨೦೨೦ರಂದು ಬೆಳಗಾಗುತ್ತಿದ್ದಂತೆ ಮಡದಿಯೊಂದಿಗೆ ಅಡ್ಡೂರಿನ ನಮ್ಮ ತೋಟಕ್ಕೆ ಪ್ರಯಾಣ - ತೆಂಗಿನ ಮರಗಳಿಗೂ, ಇತರ ಗಿಡಗಳಿಗೂ ವಾರಾಂತ್ಯದಲ್ಲಿ ನೀರುಣಿಸಲಿಕ್ಕಾಗಿ.

ಅಲ್ಲಿ ಗೇಟಿನ ಪಕ್ಕದಲ್ಲೇ ಇರುವ ಹಳೆಯ ಪುನರ್ಪುಳಿ (ಕೋಕಂ) ಮರದಲ್ಲಿ ಹಣ್ಣುಗಳನ್ನು ಕಂಡು ಖುಷಿ. ಯಾಕೆಂದರೆ, ಕಳೆದ ವರುಷ ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ) ಕೆಲಸಗಾರರು ಅದರ ಗೆಲ್ಲುಗಳನ್ನು ಕಡಿದು ಹಾಕಿದ್ದರಿಂದಾಗಿ ಅದು ಫಲ ಕೊಟ್ಟಿರಲಿಲ್ಲ. ಅಂತೂ ಅದರ ಹಣ್ಣುಗಳನ್ನೆಲ್ಲ ಕೊಯ್ದೆ.

ಆಗ ಮಡದಿ ಕರೆದು ಹೇಳಿದ್ದು: “ಇಲ್ಲೂ ಇದೆ ನೋಡಿ ಪುನರ್ಪುಳಿ.” ಓ, ಮನೆಯ ಹಿಂಬದಿಯ ಪುನರ್ಪುಳಿ ಮರದಲ್ಲಿ ಮೊದಲ ಬಾರಿ ಹಣ್ಣು! ಅದನ್ನು ಕಂಡು ಖುಷಿಯೋ ಖುಷಿ. ಯಾಕೆಂದರೆ, ಕಳೆದ ಐದು ವರುಷಗಳಿಂದ ಆ ಮರದ ಬುಡಕ್ಕೆ ಬೇಸಗೆಯಲ್ಲಿ ನೀರೆರೆಯುತ್ತಿದ್ದೆ. ಯಾವಾಗ ಈ ಮರ ಹಣ್ಣು ಕೊಟ್ಟೀತು ಎಂದು ಕಾಯುತ್ತಿದ್ದೆ. ಅಂತೂ ನನ್ನ ನಿರೀಕ್ಷೆ ಇಂದು ಹಣ್ಣಾಗಿತ್ತು. (ಇವೆರಡು ಮರಗಳ ಈ ವರುಷದ ಹಣ್ಣುಗಳ ಸಿಪ್ಪೆ ಸುಲಿದು ಒಣಗಿಸಲು ಬಿಸಿಲಿಗಿಟ್ಟಿರುವ ಫೋಟೋ ನೋಡಿ. ಇಡೀ ವರುಷ ತುರ್ತಾಗಿ ಊಟಕ್ಕೆ ಸಾರು ಮಾಡಲು ನಮಗೆ ಸಾಕಾಗುವಷ್ಟಿದೆ.)

ಮಹಾ ಸಮಾಜ ಸುಧಾರಕ ಬಸವಣ್ಣನವರು ಜನಿಸಿದ್ದು ೧೧೦೫ರಲ್ಲಿ - ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಎಪ್ರಿಲ್ ೨೬ ಬಸವಣ್ಣನವರ ಜಯಂತಿ.

ಜನಸಾಮಾನ್ಯರ ಆಡುಮಾತಿನಲ್ಲಿ ರಚಿಸಿದ ವಚನಗಳ ಮೂಲಕ ಸಾಮಾಜಿಕ ಬದಲಾವಣೆಯ ಕಹಳೆ ಮೊಳಗಿಸಿದವರು ಬಸವಣ್ಣ. ಬಾಲ್ಯದಿಂದಲೇ ಅವರ ಚಿಂತನಶೀಲತೆ, ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಸ್ವಭಾವ ಎದ್ದು ಕಾಣುತ್ತಿತ್ತು. ಉದಾಹರಣೆಗೆ ಎಂಟು ವರುಷ ವಯಸ್ಸಿನಲ್ಲಿ ಹೆತ್ತವರು ಉಪನಯನ ಮಾಡಲು ಮುಂದಾದಾಗ, ಬಸವಣ್ಣ ಅದನ್ನು ನಿರಾಕರಿಸಿದರು.

ಅಷ್ಟೇ ಅಲ್ಲ, ಕುಟುಂಬವನ್ನೇ ತೊರೆದು ಕೂಡಲಸಂಗಮಕ್ಕೆ ನಡೆದರು. ಅಲ್ಲಿ ಜಾತವೇದ ಮುನಿಗಳ ಶಿಷ್ಯರಾಗಿ, ವೇದ ಮತ್ತು ಉಪನಿಷತ್ತುಗಳ ಅಧ್ಯಯನದಲ್ಲಿ ತೊಡಗಿದರು. ದಿನದಿನವೂ ಸಂಗಮನಾಥ ದೇವರ ಪೂಜೆ ಮಾಡುತ್ತಾ, ಧಾರ್ಮಿಕ ಹಾಗೂ ಸಾಹಿತ್ಯ ಚಿಂತನೆಯಲ್ಲಿ ತಲ್ಲೀನರಾದರು. ಕ್ರಮೇಣ ಸರಳ ಭಾಷೆಯಲ್ಲಿ, ಜನಸಾಮಾನ್ಯರ ಮನಮುಟ್ಟುವ ಶೈಲಿಯಲ್ಲಿ ಅಧ್ಯಾತ್ಮಿಕ ಸಾಹಿತ್ಯ ರಚನೆಯನ್ನು ಕೈಗೆತ್ತಿಕೊಂಡರು. ಸಮಾಜದ ಭೇದಭಾವಗಳನ್ನು ತೊಡೆದು ಹಾಕಿ, ಸಮಾನತೆಯ ನೆಲೆಯಲ್ಲಿ ಹೊಸ ಸಮಾಜ ಕಟ್ಟುವುದೇ ಅವರ ಗುರಿಯಾಯಿತು.

ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ೧೪ರ ಯುಗಾದಿ ಸಂಭ್ರಮದ ಹಬ್ಬ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ)

ಸೌರಮಾನ ದಿನಗಣನೆ ಅನುಸಾರ ಹೊಸ ವರುಷದ ಮೊದಲ ದಿನ ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮರ್ಪಣೆ ಯುಗಾದಿಯ ವಿಶೇಷ. ಕೃಷಿಕರಾದರೆ ತಮ್ಮ ಜಮೀನಿನಲ್ಲಿ ಬೆಳೆದ ಭತ್ತ, ಹೂ, ಹಣ್ಣು, ತರಕಾರಿಗಳನ್ನು ತಂದು ದೇವರಿಗೆ ಅರ್ಪಿಸಿ ಕೈಮುಗಿಯುತ್ತಾರೆ. ಈಗ ನಗರಗಳಲ್ಲಿ ವಿವಿಧ ಧಾನ್ಯ, ಹೂ, ಹಣ್ಣು, ತರಕಾರಿಗಳನ್ನು ಖರೀದಿಸಿ ತಂದು ದೇವರ ಮೂರ್ತಿಯೆದುರು ಇಟ್ಟು ನಮಿಸುತ್ತಾರೆ.

ಇಲ್ಲಿ ಯುಗಾದಿಯಂದು ಬೆಳಗ್ಗೆ ಎದ್ದೊಡನೆ ಯುಗಾದಿ "ಕಣಿ" ನೋಡಿ, ಕಣ್ತುಂಬಿಸಿಕೊಂಡು ಅದಕ್ಕೆ ನಮಿಸುವುದು ವಾಡಿಕೆ. ಅದಕ್ಕಾಗಿ ಮುಂಚಿನ ದಿನ ರಾತ್ರಿಯೇ "ಕಣಿ" ಜೋಡಿಸುತ್ತಾರೆ.

ಅದೊಂದು ಕಾಲವಿತ್ತು - ಮನೆಯೊಳಗೆ ಮತ್ತು ಮನೆಯ ಹೊರಗೆ ಗುಬ್ಬಿಗಳ ಚಿಂವ್ ಚಿಂವ್ ಸದ್ದು ಆಗಾಗ ಕೇಳುತ್ತಿದ್ದ ಕಾಲ. ಮನೆಯ ಮೂಲೆಗಳಲ್ಲಿ, ಜಂತಿಗಳಲ್ಲಿ, ಗೋಡೆಗೆ ಆನಿಸಿದ್ದ ಫೋಟೋಗಳ ಹಿಂಭಾಗದಲ್ಲಿ ಗುಬ್ಬಿಗಳು ಗೂಡುಕಟ್ಟಿ ಬಾಳುತ್ತಿದ್ದವು. ಹಗಲಿನಲ್ಲಿ ಅಂಗಳದಲ್ಲಿ ಗುಬ್ಬಿಗಳ ಆಟವೇ ಆಟ. ಈಗ ಮನುಷ್ಯರೊಂದಿಗೆ ಈ ಪುಟ್ಟ ಪಕ್ಷಿಗಳ ಸಹಜೀವನ ಕೇವಲ ನೆನಪು.

ಯಾಕೆ ಹೀಗಾಯಿತು? ಈಗ ಹುಲ್ಲಿನ ಮತ್ತು ಹಂಚಿನ ಚಾವಣಿಯ ಮನೆಗಳೇ ಅಪರೂಪ. ಆದ್ದರಿಂದ ಗುಬ್ಬಿಗಳಿಗೆ ಮನೆಯೊಳಗೆ ಗೂಡು ಕಟ್ಟಲು ಅವಕಾಶವೇ ಇಲ್ಲವಾಗಿದೆ. ಅದಲ್ಲದೆ, ಹೊಲದ ಬೆಳೆಗಳಿಗೆ ಮಾರಕ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ. ಧಾನ್ಯಗಳನ್ನು ತಿನ್ನುವ ಗುಬ್ಬಿಗಳು ಆ ವಿಷದಿಂದಾಗಿ ಸಾಯುತ್ತಿವೆ.

ನಾವು ಕಾಡುಗಳನ್ನು ಹೇಗೆ ನಾಶ ಮಾಡುತ್ತಿದ್ದೇವೆ? ಈ ಬರಹದ ಜೊತೆಗಿರುವ ಫೋಟೋ ನೋಡಿದರೆ ನಿಮಗೆ ಅಂದಾಜಾದೀತು. ಇದು, ಅಂದೊಮ್ಮೆ ಬ್ರೆಜಿಲಿನಲ್ಲಿ ದಟ್ಟ ಅರಣ್ಯವಾಗಿದ್ದ ಭೂ ಪ್ರದೇಶ. ಈಗ ಹೇಗಾಗಿದೆ ನೋಡಿ! ಅಲ್ಲಿ ಈಗ ಒಂದೇ ಒಂದು ಮರ ಉಳಿದಿದೆ!

ಇಡೀ ಜಗತ್ತಿಗೆ ಬೇಕಾದ ಆಮ್ಲಜನಕದ ಶೇ.೧೮ರಷ್ಟು ಪೂರೈಸುತ್ತಿರುವುದು ಅಮೆಜಾನ್ ಅರಣ್ಯ. ಅದರ ಬಹುಪಾಲು ಬ್ರೆಜಿಲ್ ದೇಶದಲ್ಲಿದೆ. ಆದರೆ ಅಲ್ಲೀಗ ಅರಣ್ಯ ನಾಶ ನಿರಂತರ. ೨೦೧೯ರಲ್ಲಿ ಅಲ್ಲಿ ಲಕ್ಷಗಟ್ಟಲೆ ಹೆಕ್ಟೇರ್ ಅರಣ್ಯ ಬೆಂಕಿಗೆ ಬಲಿಯಾದಾಗ, ಬ್ರೆಜಿಲಿನ ಸರಕಾರ ಕ್ಯಾರೇ ಅನ್ನಲಿಲ್ಲ. ನಿಜ ಹೇಳಬೇಕೆಂದರೆ, ಅಮೆಜಾನ್ ಅರಣ್ಯದ ರಕ್ಷಣಾ ಇಲಾಖೆಯನ್ನೇ ಅಲ್ಲಿನ ಸರಕಾರ ನಿಷ್ಕ್ರಿಯಗೊಳಿಸಿತ್ತು. ಇತರ ಕೆಲವು ದೇಶಗಳು “ಅಮೆಜಾನ್ ಅರಣ್ಯ ನಾಶ ತಡೆಯಲು ಕ್ರಮ ಕೈಗೊಳ್ಳಿ” ಎಂದಾಗ ಅಲ್ಲಿನ ಪ್ರಧಾನಮಂತ್ರಿಯ ಪ್ರತಿಕ್ರಿಯೆ ಏನಾಗಿತ್ತು ಗೊತ್ತೇ? “ಇದು ನಮ್ಮ ದೇಶದ ಕಾಡು. ನಾವು ಏನಾದರೂ ಮಾಡಿಕೊಳ್ಳುತ್ತೇವೆ” ಎಂಬಂತಿತ್ತು.

ಮಂಗಳೂರಿನ ಪ್ರಸಿದ್ಧ ಕಾಲೇಜುಗಳು ಎಂದಾಗ ನೆನಪಿಗೆ ಬರುವ ಹೆಸರುಗಳಲ್ಲಿ ಮುಖ್ಯವಾದದ್ದು, ಇಲ್ಲಿನ ಕೇಂದ್ರಭಾಗವಾದ ಹಂಪನಕಟ್ಟೆಯಲ್ಲಿರುವ "ಗವರ್ನಮೆಂಟ್ ಕಾಲೇಜು". ಇದು ೧೯೯೩ರಲ್ಲಿ “ಯುನಿವರ್ಸಿಟಿ ಕಾಲೇಜ್” ಆಗಿ ಪರಿವರ್ತನೆಗೊಂಡಿದ್ದರೂ, ನನ್ನಂತಹ ಹಳೆಯ ತಲೆಮಾರಿನವರಿಗೆ ಆ ಕಾಲೇಜಿನ ಪ್ರಸ್ತಾಪ ಮಾಡುವಾಗಲೆಲ್ಲ ಬಾಯಿಗೆ ಬರುವ ಹೆಸರು ಗವರ್ನಮೆಂಟ್ ಕಾಲೇಜ್.

ಈ ಕಾಲೇಜಿಗೆ ಇದೀಗ ೧೫೦ ಸಾರ್ಥಕ ವರುಷಗಳ ಸಂಭ್ರಮ. ೬ ಫೆಬ್ರವರಿ ೨೦೨೦ರಂದು ಕಾಲೇಜಿಗೆ ೧೫೦ ವರುಷ ತುಂಬಿದ್ದನ್ನು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ಆ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನವಂತೂ ಜನಮನ ಗೆದ್ದಿತು. ಸಂದರ್ಶಕರ ದಟ್ಟಣೆಯಿಂದಾಗಿ ಅದನ್ನು ಕೆಲವು ದಿನ ವಿಸ್ತರಿಸಬೇಕಾಯಿತು.

ಮಂಗಳೂರಿನ ಸುಪ್ರಸಿದ್ಧ ವಾರ್ಷಿಕ ಉತ್ಸವ ಕೊಡಿಯಾಲ ತೇರು ಅಥವಾ ಮಂಗಳೂರು ರಥೋತ್ಸವ. ಇದು ಗೌಡಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು (ಕೊಂಕಣಿಗರು) ವರುಷವಿಡೀ ನಿರೀಕ್ಷಿಸುವ ಸಂಭ್ರಮದ ಆಚರಣೆ.

ಇತ್ತೀಚೆಗೆ, ೧ ಫೆಬ್ರವರಿ ೨೦೨೦ರಂದು ಜರಗಿದ ಮಂಗಳೂರು ರಥೋತ್ಸವ ಕೊಂಕಣಿಗರ ಭಾವಭಕ್ತಿ ತುಂಬಿದ ಭಾಗವಹಿಸುವಿಕೆಗೆ ಮಗದೊಮ್ಮೆ ಸಾಕ್ಷಿಯಾಯಿತು. ಶತಮಾನಗಳ ಮುಂಚೆ ತಮ್ಮ ಮೂಲನೆಲೆ ತೊರೆದು ದಕ್ಷಿಣಕ್ಕೆ ಸಾಗಿ ಬಂದ ಈ ಸಮುದಾಯದವರು ಮಂಗಳೂರು ಸಹಿತ ಪಶ್ಚಿಮ ಕರಾವಳಿಯ ಹಲವಾರು ಊರುಗಳಲ್ಲಿ ನೆಲೆಯೂರಿದ್ದಾರೆ. ವ್ಯಾಪಾರ ವಹಿವಾಟಿನಲ್ಲಿ ಎಲ್ಲ ಊರುಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ.

ತಾವು ನೆಲೆನಿಂದ ಊರುಗಳಲ್ಲೆಲ್ಲ ತಮ್ಮ ಆರಾಧ್ಯ ದೇವರು ಶ್ರೀ ವೆಂಕಟರಮಣನ ದೇವಸ್ಥಾನ ಸ್ಥಾಪಿಸಿ, ವರುಷಕ್ಕೊಮ್ಮೆ ವಿಜೃಂಭಣೆಯಿಂದ ರಥೋತ್ಸವ ಜರಗಿಸುವುದು ಅವರ ಸಂಪ್ರದಾಯ. ಈ ವಾರ್ಷಿಕ ರಥೋತ್ಸವಗಳು ಈಗ ಬೇರೆಬೇರೆ ನಗರಪಟ್ಟಣಗಳಲ್ಲಿ ನೆಲೆಸಿರುವ ಆಯಾ ಊರಿನವರಿಗೆ ವರುಷಕ್ಕೊಮ್ಮೆ ಒಟ್ಟು ಸೇರಲು, ಕುಶಲೋಪರಿ ನಡೆಸಲು, ದೇವರ ಸೇವೆ ಮಾಡಲು, ಸಹಭೋಜನ ಸ್ವೀಕರಿಸಲು ಅದ್ಭುತ ಅವಕಾಶ ಒದಗಿಸುತ್ತವೆ.

ಉತ್ಸವ್ ರಾಕ್ ಗಾರ್ಡನಿಗೆ ೧೧ ಜನವರಿ ೨೦೧೪ರ ಪೂರ್ವಾಹ್ನ ಭೇಟಿಯಿತ್ತಾಗ, ಅದು ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರವಾಗಿ ಬೆಳೆದು ಬಂದ ಬಗೆಯನ್ನು ವಿವರಿಸಿದ್ದರು ಅದರ ಸ್ಥಾಪಕ ತಿಪ್ಪಣ್ಣ ಬಸವಣ್ಯೆಪ್ಪ ಸೊಲಬಕ್ಕನವರ್ (ಭಾಗ ೧ ಓದಿ).

ಅಂದು ಅಪರಾಹ್ನ ಅವರೊಂದಿಗೆ ಸಂವಾದ. ಆ ಸಂದರ್ಭದಲ್ಲಿ, “ಗ್ರಾಮಾಭಿವೃದ್ಧಿಗೆ ನಾವೇನು ಮಾಡಬಹುದು?” ಎಂಬುದರ ಬಗ್ಗೆ ತಮ್ಮ ಚಿಂತನೆಗಳನ್ನು ಅವರು ಹಂಚಿಕೊಂಡಿದ್ದರು. ಅದನ್ನು ಅವರ ಮಾತುಗಳಲ್ಲೇ ಈ ಬರಹದಲ್ಲಿ ದಾಖಲಿಸಿದ್ದೇನೆ:

"ನಾನು ನನ್ನ ಹಳ್ಳಿಗೆ ಮರಳಿ ಬಂದಿದ್ದು - ಎರಡು ಪ್ರಾಜೆಕ್ಟ್ ಇಟ್ಕಂಡು. ಒಂದು ಗ್ರಾಮರಂಗಭೂಮಿ ಸಂಘಟಿಸೋದು; ಅದಕ್ಕೆ “ಥರ್ಡ್ ರಂಗಭೂಮಿ” ಅಂತಾರೆ. ಇನ್ನೊಂದು ಸ್ವಾವಲಂಬಿ ಆಗೋದು.

ನಮ್ಮ ಹಳ್ಳಿ ಹುಲಸೋಗಿ. ಇಲ್ಲಿಂದ ನಾಲ್ಕು ಕಿಮೀ ದೂರದಲ್ಲಿದೆ. ನಮ್ಮ ಹಳ್ಳೀಲಿ ಏಳನೇ ಕ್ಲಾಸ್ ಪಾಸ್ ಮಾಡಿದ್ದು ನಾನೇ ಫಸ್ಟ್. ಆಗ ಹಳ್ಳಿಯೋರು ನನ್ನ ಮೆರವಣಿಗೆ ಮಾಡಿದ್ರು. ಅದಾದ ನಂತರಾನೂ ಎಲ್ಲದರಲ್ಲೂ ನಾನೇ ಫಸ್ಟ್. ಹಂಗಾಗಿ ಎಲ್ಲರಿಂದ ಗೌರವ ಸಿಗ್ತಿತ್ತು. ನಾನು ಹಳ್ಳಿಗೆ ಮರಳಿ ಬಂದಾಗ ನನ್ನ ಕೈಲಿ ೧೦,೦೦೦ ರೂಪಾಯಿ ಇತ್ತು. ಸ್ವಾವಲಂಬಿ ಆಗಬೇಕು ಅಂತ ಯಾಕೆ ಯೋಚನೆ ಮಾಡಿದೆ ಅಂತೀರಾ? ಇಲ್ಲಾಂದ್ರೆ ಹಳ್ಳೀಲಿ ಗೌರವ ಇರಲ್ಲ.

Pages