ಆಗಸ್ಟ್ 15, 2022ರಂದು ಭಾರತ ದೇಶದ ಉದ್ದಗಲದಲ್ಲಿ  “ಮನೆಮನೆಯಲ್ಲಿ ರಾಷ್ಟ್ರಧ್ವಜಾರೋಹಣ” ಮೂಲಕ ಸ್ವಾತಂತ್ರ್ಯ ಗಳಿಸಿ 75 ವರುಷ ಪೂರೈಸಿದ್ದನ್ನು ಸಂಭ್ರಮಿಸಲಾಯಿತು.

ಇದು ಅಂಚೆ ವಿತರಣೆಗಾಗಿ ರೂಪಿಸಿದ “ಪಿನ್ ಕೋಡ್”ಗೆ 50 ವರುಷ ತುಂಬಿದ ಸಂದರ್ಭವೂ ಹೌದು. ಯಾಕೆಂದರೆ, ಪಿನ್ ಕೋಡ್ (ಪೋಸ್ಟಲ್ ಇಂಡೆಕ್ಸ್ ನಂಬರ್) ಜ್ಯಾರಿಗೊಳಿಸಿದ್ದು 15 ಆಗಸ್ಟ್ 1972ರಂದು.

ಭಾರತ ದೇಶ 15 ಆಗಸ್ಟ್ 1947ರಂದು ಸ್ವಾತಂತ್ರ್ಯ ಗಳಿಸಿದಾಗ, ಇಲ್ಲಿ ಇದ್ದ ಅಂಚೆ ಕಚೇರಿಗಳ ಸಂಖ್ಯೆ 23,344. ಅನಂತರ ವಿವಿಧ ರಂಗಗಳಲ್ಲಿ ನಮ್ಮ ದೇಶ ಸಾಧಿಸಿದ ಅಭಿವೃದ್ಧಿ ಅಭೂತಪೂರ್ವ. ಕೋಟಿಗಟ್ಟಲೆ ಜನರಿರುವ ಇಂತಹ ವಿಶಾಲ ದೇಶದಲ್ಲಿ ಅಂಚೆಯನ್ನು ಸುಲಭವಾಗಿ ವಿಂಗಡಿಸಲು ಮತ್ತು ತಲಪಿಸಲಿಕ್ಕಾಗಿ “ಪಿನ್ ಕೋಡ್” ರೂಪಿಸಲಾಯಿತು. ಯಾಕೆಂದರೆ, ನಮ್ಮ ದೇಶದಲ್ಲಿ ಒಂದೇ ಹೆಸರು ಹೊಂದಿರುವ ಹಲವಾರು ಸ್ಥಳಗಳಿವೆ. ಉದಾಹರಣೆಗೆ, ಕರ್ನಾಟಕದ ಮಂಗಳೂರು ತಾಲೂಕಿನಲ್ಲಿ ಗುರುಪುರವಿದೆ (ಪಿನ್ ಕೋಡ್ 574145); ಹಾಗೆಯೇ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿಯೂ ಗುರುಪುರವಿದೆ (ಪಿನ್ ಕೋಡ್ 571105). ಅದಲ್ಲದೆ, ಒಂದೇ ಊರಿನ ಹೆಸರನ್ನು ಬೇರೆಬೇರೆ ಅಕ್ಷರಘಟಿತದಲ್ಲಿ (Spelling) ಬರೆಯಲಾಗುತ್ತದೆ. ಉದಾಹರಣೆಗೆ, ಕನ್ನಡದ ಮುತ್ತೂರು ಮತ್ತು ಅಡ್ಡೂರು. ಇದರಿಂದಾಗಿ, ಅಂಚೆ ವಿತರಣೆ ಮತ್ತು ಬಟವಾಡೆಯಲ್ಲಿ ಬಹಳ ಸಮಸ್ಯೆಗಳು ಉಂಟಾಗುತ್ತಿದ್ದವು.

“ಸಾವಿರಾರು ವರುಷಗಳ ಪರಂಪರೆ ಇರುವ ನಮ್ಮ ದೇಶದ ಬಗ್ಗೆ ನಾವು ಅಭಿಮಾನ ಪಡಬಹುದಾದ ಸಂಗತಿಗಳು ಸಾವಿರಾರು. ಉದಾಹರಣೆಗೆ, ಭಾರತೀಯ ಸಮಾಜದಲ್ಲಿ ಇದ್ದಂತಹ ಮೌಲ್ಯಶಿಕ್ಷಣದ ವ್ಯವಸ್ಥೆ.  “ಸತ್ಯವನ್ನೇ ಹೇಳು, ಸುಳ್ಳು ಹೇಳಬೇಡ” ಎಂದು ಕಿರಿಯರಿಗೆ ಹಿರಿಯರು ಮತ್ತೆಮತ್ತೆ ಹೇಳುತ್ತಿದ್ದರು. ಸುಳ್ಳು ಹೇಳಿದರೆ ಏನಾಗುತ್ತದೆ ಎಂಬುದನ್ನು ಸತ್ಯ ಘಟನೆಗಳ ಮತ್ತು ಕತೆಗಳ ಮೂಲಕ ಮಕ್ಕಳ ಮನಸ್ಸಿಗೆ ನಾಟುವಂತೆ ವಿವರಿಸುತ್ತಿದ್ದರು. ಬಾಲ್ಯದಲ್ಲೇ ಕಲಿತ ಇಂತಹ ಸಂಗತಿಗಳು ಮಕ್ಕಳ ಮನಸ್ಸಿನಲ್ಲಿ ಗಾಡವಾಗಿ ಅಚ್ಚೊತ್ತಿ, ಅವರು ಬೆಳೆದು ದೊಡ್ಡವರಾದಾಗ ದಾರಿ ತಪ್ಪದಂತೆ ಮಾರ್ಗದರ್ಶನ ಮಾಡುತ್ತಿದ್ದವು. ಇವತ್ತು ಅಂತಹ ವ್ಯವಸ್ಥೆಯೇ ಇಲ್ಲವಾಗಿದೆ. ನಾವು ಈಗ ಸಮಾಜದಲ್ಲಿ ಕಾಣುತ್ತಿರುವ ಹಲವು ಅನಿಷ್ಠಗಳಿಗೆ ಇದುವೇ ಕಾರಣ” ಎಂದು ಡಾ. ರಾಘವೇಂದ್ರ ಹೊಳ್ಳ, ಚೇರ್ಮನ್, ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಅವರು "ನಮ್ಮ ಹೆಮ್ಮೆಯ ಭಾರತ” ಪುಸ್ತಕವನ್ನು ಲೋಕಾರ್ಪಣೆ ಮಾಡಿದ ನಂತರ ಮಾತನಾಡುತ್ತಾ ಹೇಳಿದರು.

ಇವತ್ತಿನಿಂದ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧ - ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಸೂಚನೆಯ ಅನುಸಾರ (01-07-2022ರಿಂದ). ಇದನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಮತ್ತು ಭಾರೀ ದಂಡ ಕಾದಿದೆ.

“ಯಾಕೆ ನಿಷೇಧ?" ಎಂಬುದು ಹಲವರ ಪ್ರಶ್ನೆ. ಯಾಕೆಂದರೆ ಇದು ಮಾನವ ಕುಲದ ಉಳಿವಿನ ಪ್ರಶ್ನೆ ಎಂಬುದೇ ಉತ್ತರ. ಅದು ಹೇಗೆ? ಎಂದು ಕೇಳುವವರು ಹಲವರು. ಅದಕ್ಕೆ ಉತ್ತರವಾಗಿ ಇಲ್ಲಿದೆ ಕೆಲವು ಮಾಹಿತಿ.

ಮಾನವನ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯ

ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಆನೆಗಳು ಇರುವುದು ನಮ್ಮ ಕರ್ನಾಟಕದಲ್ಲಿ (2017ರಲ್ಲಿ ನಡೆದ ಆನೆಗಣತಿಯ ಅನುಸಾರ ಕರ್ನಾಟಕದ ಆನೆಗಳ ಸಂಖ್ಯೆ 6,049). 2021ರಲ್ಲಿ ಇಲ್ಲಿ ಸಾವಿಗೀಡಾದ 79 ಆನೆಗಳಲ್ಲಿ ಅಸಹಜ ಕಾರಣದಿಂದ ಸತ್ತ ಆನೆಗಳ ಸಂಖ್ಯೆ 17. ಅಂದರೆ ವಿದ್ಯುತ್ ಆಘಾತ, ಗುಂಡೇಟು ಇತ್ಯಾದಿ ಕಾರಣಗಳಿಂದಾದ ಸಾವು. ಇದು ಅರಣ್ಯ ಇಲಾಖೆ ನೀಡಿರುವ ಮಾಹಿತಿ.

ಅರಣ್ಯ ನಾಶದಿಂದಾಗಿ ಆನೆಗಳ ವಾಸಪ್ರದೇಶದ ವ್ಯಾಪ್ತಿ ವರುಷದಿಂದ ವರುಷಕ್ಕೆ ಕಡಿಮೆಯಾಗುತ್ತಿದೆ. ಅವುಗಳ ಮೇವಿನ ಲಭ್ಯತೆಯೂ ಕಡಿಮೆಯಾಗುತ್ತಿದೆ. ಈ ಕಾರಣಗಳಿಂದಾಗಿ ಅವು ತೋಟ ಹಾಗೂ ಹೊಲಗಳಿಗೆ ನುಗ್ಗುತ್ತಿವೆ. ಹಾಗಾಗಿ ಆನೆಗಳು - ಮನುಷ್ಯರ ಸಂಘರ್ಷ ಜಾಸ್ತಿಯಾಗುತ್ತಿದೆ. ಇದರಿಂದಾಗಿ 2017-18ರಲ್ಲಿ ಕರ್ನಾಟಕದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸುಮಾರು 20. ಅದಲ್ಲದೆ 15 ಜನರು ಅಂಗವಿಕಲರಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಬೆಳೆನಾಶವೂ ಆಗಿದೆ.

ಆನೆಗಳು ಮನುಷ್ಯರ ವಾಸಸ್ಥಳಗಳತ್ತ ನುಗ್ಗುವುದನ್ನು ತಡೆಯುವುದಕ್ಕಾಗಿ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ: ಆನೆಗಳು ದಾಟಲಾಗದ ಕಂದಕಗಳನ್ನು ತೋಡುವುದು; ಸೌರಶಕ್ತಿಯ ಬೇಲಿಗಳ ನಿರ್ಮಾಣ; ರೈಲ್ವೇ ಹಳಿಗಳ ತಡೆಬೇಲಿ ನಿರ್ಮಾಣ. ಜೊತೆಗೆ, ಆನೆಗಳ ವಾಸಪ್ರದೇಶಗಳ ಹತ್ತಿರದ ಹಳ್ಳಿಗರಿಗೆ ಆನೆ ಹಿಂಡುಗಳ ಸಂಚಾರದ ಮಾಹಿತಿ ನೀಡಲಿಕ್ಕಾಗಿ 24 ೱ 7 ಮಾಹಿತಿ ಕೇಂದ್ರ ಸ್ಥಾಪಿಸಿದೆ.

ಅದು ಪಶ್ಚಿಮ ಘಟ್ಟದ ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದ ಗಡಿಯ ಹೆಗ್ಗೋಡು ಹಳ್ಳಿ. ಅಲ್ಲಿನ ಫೀಲ್ಡ್ ಡೈರೆಕ್ಟರ್ ಅಜಯ್ ಗಿರಿ (35) ಬಲಗೈಯಲ್ಲಿ ಉದ್ದದ ಕೊಕ್ಕೆ ಇದೆ. ಎಡಗೈಯಲ್ಲಿ ಹಿಡಿದಿರುವ ಎಂಟಡಿ ಉದ್ದದಕಾಳಿಂಗ ಸರ್ಪದ ಬಾಲ ಮತ್ತೆಮತ್ತೆ ತಿರುಚುತ್ತಿದೆ. ಅದನ್ನು ರಕ್ಷಿಸಲಿಕ್ಕಾಗಿ ಅವರು ಅಲ್ಲಿಗೆ ಬಂದಿದ್ದಾರೆ.

ಕಳೆದ ಶತಮಾನದಲ್ಲಿ ಪಶ್ಚಿಮ ಘಟ್ಟಗಳ ಶೇಕಡಾ 35 ಅರಣ್ಯ ನಾಶವಾಗಿದೆ. ಇದರಿಂದಾಗಿ ಅಲ್ಲಿನ ಕಾಳಿಂಗ ಸರ್ಪಗಳ ವಾಸಸ್ಥಳದ ವ್ಯಾಪ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ಅವು ಆಹಾರ ಹುಡುಕಿಕೊಂಡು ಅರಣ್ಯದ ಅಂಚಿನ ಹೊಲಗಳಿಗೆ ಬರುತ್ತಿವೆ. ಅಂದರೆ, ಮನುಷ್ಯರ ಮನೆಗಳ ಹತ್ತಿರ ಹೆಚ್ಚೆಚ್ಚಾಗಿ ಬರುತ್ತಿವೆ. ಆದ್ದರಿಂದ, ಸಂಶೋಧನಾ ಕೇಂದ್ರದ “ಕಾಳಿಂಗ ರಕ್ಷಣಾ ತಂಡ"ಕ್ಕೆ ಹಾವು ಹಿಡಿಯಲಿಕ್ಕಾಗಿ ಆಗಾಗ ಫೋನ್ ಕರೆಗಳು ಬರುತ್ತಿವೆ.

“ಕಾಳಿಂಗ ಸರ್ಪಗಳು ನಾಚಿಕೆ ಸ್ವಭಾವದವು. ಅವನ್ನು ಉದ್ರೇಕಿಸದಿದ್ದರೆ ಅವು ದಾಳಿ ಮಾಡೋದಿಲ್ಲ" ಎನ್ನುತ್ತಾರೆ ಅಜಯ್ ಗಿರಿ. ಇದನ್ನು ಅನುಮೋದಿಸುತ್ತಾರೆ, ಸಂಶೋಧನಾ ಕೇಂದ್ರದ ಸ್ಥಾಪಕರಾದ ಸರ್ಪತಜ್ನ ರೋಮುಲಸ್ ವಿಟೆಕರ್. ಅವರ ಅನುಸಾರ, “ಬಹುಪಾಲು ಜನರು ಕಾಳಿಂಗ ಸರ್ಪ ಭಯಾನಕ ಸರ್ಪವೆಂದು ಭಾವಿಸುತ್ತಾರೆ. ಆದರೆ, ಕಾಳಿಂಗ ಸರ್ಪಗಳು ಮನುಷ್ಯರಿಗೆ ಕಚ್ಚಿದ ದಾಖಲೆಗಳು ತೀರಾ ಅಪರೂಪ.”  

ಮಧ್ಯಪ್ರದೇಶದ ಪೆಂಚ್ ಹುಲಿ ರಕ್ಷಿತಾರಣ್ಯದಲ್ಲಿ ಜನವರಿ 2022ರಲ್ಲಿ ತನ್ನ ಬದುಕು ಮುಗಿಸಿದ ಹೆಣ್ಣುಹುಲಿ “ಕೊಲರ್ ವಾಲಿ". ಭಾರಿ ಗಾತ್ರ ಮತ್ತು ಮನುಷ್ಯರೊಂದಿಗೆ ವೈರತ್ವವಿಲ್ಲದ ವರ್ತನೆ ಅದರ ಆಕರ್ಷಣೆಗಳು.

ಆದರೆ, ಕೊಲರ್ ವಾಲಿ ಹೆಣ್ಣುಹುಲಿ ಪ್ರಸಿದ್ಧವಾದದ್ದು ಅದು ಜನ್ಮವಿತ್ತ ಹುಲಿಮರಿಗಳ ಸಂಖ್ಯೆಗಾಗಿ - 29 ಹುಲಿಮರಿಗಳ ಮಹಾತಾಯಿ ಆಕೆ. (ಇದು 2018ರ ಗಣತಿಯ ಅನುಸಾರ ಭಾರತದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆಯ ಶೇಕಡಾ ಒಂದು).

ಕೊಲರ್ ವಾಲಿ ಹುಲಿಯ ತಾಯಿಯನ್ನು "ಬಡಿ ಮಾತಾ” ಎಂಬ ಹೆಸರಿನಿಂದ ಗುರುತಿಸಲಾಗಿತ್ತು. ಬಡಿ ಮಾತಾ ಹುಲಿ ಬಗ್ಗೆ ಜಗದ್ವಿಖ್ಯಾತ ಪ್ರಸಾರ ವಾಹಿನಿ “ಬಿಬಿಸಿ" ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿತ್ತು. ಅದರ ಹೆಸರು "ಟೈಗರ್: ಸ್ಪೈ ಇನ್ ದ ಜಂಗಲ್”. ಅದು 2018ರಿಂದ ಬಡಿ ಮಾತಾ ಹುಲಿ ಮತ್ತು ಅದರ ನಾಲ್ಕು ಮರಿಗಳ ಬದುಕನ್ನು ದಾಖಲಿಸಿತ್ತು.

ಅದರ ಒಂದು ಮರಿ ಈ ಕೊಲರ್ ವಾಲಿ ಹುಲಿ. ಹದಿನೇಳು ವರುಷ ಬದುಕಿದ ಕಾಲರ್ ವಾಲಿ ಹುಲಿ, ಸರಾಸರಿ ಆಯುಷ್ಯವಾದ 15 ವರುಷಕ್ಕಿಂತಲೂ ಜಾಸ್ತಿ ಬದುಕಿದ್ದು ವಿಶೇಷ. 2022ರ ಜನವರಿಯಲ್ಲಿ ಇದು ಸತ್ತಾಗ ರಾಜ್ಯದ ಅರಣ್ಯ ಸಚಿವರೇ ಇದರ ಅಂತ್ಯಕ್ರಿಯೆಗೆ ಹಾಜರಾಗಿದ್ದರು. ಆಗ ಪ್ರಸಿದ್ಧ ಹಾಲಿನ ಕಂಪೆನಿ “ಅಮುಲ್" ಇದರ ಬಗ್ಗೆ “ಷಿ ಅರ್ನ್‌ಡ್ ಹರ್ ಸ್ಟ್ರೈಪ್ಸ್” ಎಂಬ ಶೀರ್ಷಿಕೆಯ ಕಾರ್ಟೂನ್ ಜಾಹೀರಾತನ್ನು ಪ್ರಕಟಿಸಿತು.

ಇವತ್ತು ಅಂತರರಾಷ್ಟ್ರೀಯ ಯೋಗ ದಿನ (21-6-2022). "ಅಜಾದಿ ಕಾ ಅಮೃತ್ ಮಹೋತ್ಸವ್” ಭಾಗವಾಗಿ ಭಾರತದಾದ್ಯಂತ 75 ಪ್ರಸಿದ್ಧ ಸ್ಥಳಗಳಲ್ಲಿ ಯೋಗ ದಿನದ ಆಚರಣೆ. ಜಗತ್ತಿನ ಹಲವು ದೇಶಗಳಲ್ಲಿಯೂ ಈ ಮಹತ್ವದ ದಿನದ ಆಚರಣೆಯಲ್ಲಿ ಭಾಗಿಯಾಗಿರುವವರು ಲಕ್ಷಗಟ್ಟಲೆ ಜನರು.

ನಮ್ಮ ಕರ್ನಾಟಕದಲ್ಲಿಯೂ ಇವತ್ತು ಸಂಭ್ರಮ. ಯಾಕೆಂದರೆ, ಮೈಸೂರು ಅರಮನೆ ಆವರಣದಲ್ಲಿ ಮುಂಜಾನೆ ಜರಗಿದ ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದರು. ಅಲ್ಲಿ ಪ್ರಧಾನಿಯವರ ಜೊತೆ ಯೋಗಾಸನಗಳನ್ನು ಮಾಡಿದ ಜನರ ಸಂಖ್ಯೆ 15 ಸಾವಿರ. ಅವರಲ್ಲಿ 1,200 ವಿದ್ಯಾರ್ಥಿಗಳು. 45 ನಿಮಿಷಗಳ ಅವಧಿ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶಿತವಾದ ಯೋಗಾಸನಗಳು 19. ಅಲ್ಲಿ ಪ್ರಧಾನಿಯವರು ಹೇಳಿದ ಒಂದು ಮಾತು ಯೋಗದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುತ್ತದೆ: "ಯೋಗ ನಮ್ಮೆಲ್ಲರಿಗೂ ಸಮಸ್ಯಾ ಪರಿಹಾರಕ ಆಗಬಲ್ಲದು.”

ಮಂಜಿನ ಖಂಡ ಅಂಟಾರ್ಕ್‌ಟಿಕ್. ಅಲ್ಲಿ 1640 ಅಡಿ ಆಳದಲ್ಲಿರುವ ನದಿಯಲ್ಲಿ ಹೊಸ ಜೀವಿಗಳನ್ನು ಪತ್ತೆ ಮಾಡಿದ್ದಾರೆ ಸಂಶೋಧಕರು. ನ್ಯೂಝಿಲೆಂಡಿನ ಸಂಶೋಧಕರು ಮಂಜುಗಡ್ಡೆಯ ಬೃಹತ್ ಪದರವನ್ನು ಕೊರೆದು, ಆ ತೂತಿನಲ್ಲಿ ಆಳದ  ಗವಿಗೆ ಕೆಮರಾ ಇಳಿಸಿದಾಗ, ಹಿಂದೆಂದೂ ಕಂಡಿರದಿದ್ದ ಜೀವಿಗಳು ಪತ್ತೆಯಾಗಿವೆ. ಸಿಗಡಿಯಂತಿರುವ ಸಣ್ಣ ಗಾತ್ರದ ಸಾವಿರಾರು ಉಭಯಜೀವಿಗಳು ಕೆಮರಾವನ್ನು ಮುತ್ತಿದವು.

ರೊಸ್ಸ್ ಐಸ್ ಶೆಲ್ಫ್ ಎಂಬುದು ಅಂಟಾರ್ಕ್‌ಟಿಕ್ ದಕ್ಷಿಣ ತುದಿಯಲ್ಲಿರುವ ಜಗತ್ತಿನ ಅತ್ಯಂತ ದೊಡ್ಡ ತೇಲುವ ಐಸ್ ಶೆಲ್ಫ್. ಇದರ ಅಂಚಿನ ಆಳದಲ್ಲಿದೆ ಈ ಹೊಸ ಜೀವಲೋಕ. ವಾತಾವರಣ ಬದಲಾವಣೆಯು ಐಸ್ ಶೆಲ್ಫುಗಳನ್ನು ಹೇಗೆ ಕರಗಿಸುತ್ತಿದೆ ಮತ್ತು ಅಲ್ಲಿನ ಜೀವರಾಶಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ದಾಖಲಿಸುವ ಸಂಶೋಧನಾ ಯೋಜನೆಯ ಸಂಶೋಧಕರು ಈ ಶೋಧ ಮಾಡಿದವರು.

ಏಷ್ಯಾದ ಅತ್ಯಂತ ಹಳೆಯ ದಿನಪತ್ರಿಕೆಗೆ ೨೦೦ ವರುಷ ತುಂಬಿದೆ. ಅದುವೇ ಮುಂಬೈಯಿಂದ ಪ್ರಕಟವಾಗುತ್ತಿರುವ   "ಮುಂಬೈ ಸಮಾಚಾರ್” ಎಂಬ ಗುಜರಾತಿ ದಿನಪತ್ರಿಕೆ.  ಅದನ್ನು 1822ರಲ್ಲಿ ಶುರು ಮಾಡಿದವರು ಫರ್-ದುನ್‌ಜೀ ಮರ್-ಜಾನ್ ಎಂಬವರು.

14 ಜೂನ್ 2022ರಂದು ಆ ಪತ್ರಿಕೆಯ “ದ್ವಿಶತಮಾನೋತ್ಸವ" ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಆ ಸಂಭ್ರಮದ ನೆನಪಿಗಾಗಿ ವಿಶೇಷ ಅಂಚೆಚೀಟಿ ಬಿಡುಗಡೆಗೊಳಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹೋರಾಟದ ಧ್ವನಿಯಾಗಿದ್ದ ಪತ್ರಿಕೆ, ನಮ್ಮ ದೇಶ ಸ್ವತಂತ್ರವಾದ ನಂತರದ 75 ವರುಷಗಳಲ್ಲಿ ಎಲ್ಲ ವಯಸ್ಸಿನವರನ್ನೂ ತಲಪಿದೆಯೆಂದರು.

ಆರಂಭದ ಹತ್ತು ವರುಷಗಳಲ್ಲಿ ಇದು ವಾರಪತ್ರಿಕೆಯಾಗಿ, ಅನಂತರ ವಾರದಲ್ಲಿ ಎರಡು ದಿನ ಪ್ರಕಟವಾಗುತ್ತಿತ್ತು. 1855ರಿಂದ ದಿನಪತ್ರಿಕೆಯಾಗಿ ಪ್ರಕಟವಾಗುತ್ತಿರುವ ಇದರ ಕಚೇರಿ ಮುಂಬೈಯ ಫೋರ್ಟ್‌ನ ಹಾನಿಮನ್ ವೃತ್ತದ ಹತ್ತಿರದ ಚಾರಿತ್ರಿಕ ಕೆಂಪು ಕಟ್ಟಡದಲ್ಲಿದೆ. ಹಡಗುಗಳ ಸಂಚಾರ ಮತ್ತು ಸರಕುಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಈ ಪತ್ರಿಕೆ ಈಗ ಪ್ರಧಾನವಾಗಿ ವ್ಯಾಪಾರವಹಿವಾಟಿನ ಬಗ್ಗೆ ವರದಿ ಮಾಡುತ್ತಿದೆ.

ಬಂಗಾಳಿ ದಿನಪತ್ರಿಕೆ “ಸಮಾಚಾರ ದರ್ಪಣ್” ಪ್ರಕಟಣೆ ಆರಂಭಿಸಿದ 4 ವರುಷ ನಂತರ "ಬೊಂಬಾಯಿ ಸಮಾಚಾರ್” (ಆಗಿನ ಹೆಸರು) ಶುರುವಾಯಿತು. ಇದು ಭಾರತದ ಎರಡನೆಯ ಇಂಗ್ಲಿಷೇತರ ಪತ್ರಿಕೆ ಎಂಬುದು ಇದರ ಹೆಗ್ಗಳಿಕೆ.

ಹೌದು, ನೆಮ್ಮದಿ ಬೇಕಾದರೆ ಸಾಮಾಜಿಕ ಮಾಧ್ಯಮಗಳಿಂದ ದೂರವಿರಿ!

ಯಾರು ಹೇಳಿದ್ದು ಎಂದು ಕೇಳುತ್ತೀರಾ? ಇದು ಇತ್ತೀಚೆಗಿನ ಅಧ್ಯಯನವೊಂದರಿಂದ ಸಾಬೀತಾದ ಸತ್ಯಾಂಶ. ಅದು "ಸೈಬರ್ ಸೈಕೋಲಜಿ, ಬಿಹೇವಿಯರ್ ಆಂಡ್ ಸೋಷಿಯಲ್ ನೆಟ್ ವರ್ಕಿಂಗ್" ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ. ಅಧ್ಯಯನದಲ್ಲಿ ಭಾಗವಹಿಸಿದವರು ಸಾಮಾಜಿಕ ಮಾಧ್ಯಮಗಳನ್ನು ಒಂದು ವಾರ ಬಳಸದೆ ಇದ್ದದ್ದಕ್ಕೂ ಅವರ ಆತಂಕ ಮತ್ತು ಖಿನ್ನತೆಯ ಮಟ್ಟ ಗಣನೀಯವಾಗಿ ಕಡಿಮೆ ಆದದ್ದಕ್ಕೂ ಸಂಬಂಧ ಇದೆಯೆಂದು ಅಧ್ಯಯನ ಸ್ಪಷ್ಟವಾಗಿ ತೋರಿಸಿ ಕೊಟ್ಟಿದೆ. ಅಧ್ಯಯನದಲ್ಲಿ ಭಾಗವಹಿಸಿದವರ ಸಂಖ್ಯೆ 154. ಅವರ ಸರಾಸರಿ ವಯಸ್ಸು 29.6 ವರುಷ. ಅವರನ್ನು ಒಂದು ವಾರದ ಅವಧಿ ಫೇಸ್-ಬುಕ್, ಟ್ವಿಟರ್, ಇನ್-ಸ್ಟಾಗ್ರಾಮ್ ಮತ್ತು ಟಿಕ್-ಟೊಕ್ ಬಳಸುವವರು ಮತ್ತು ಬಳಸದವರು ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು.

ಭಾಗವಹಿಸಿದವರ “ಮಾನಸಿಕ ಆರೋಗ್ಯ"ವನ್ನು ಅಧ್ಯಯನ ಆರಂಭಿಸುವ ಮುಂಚೆ ಮತ್ತು ನಂತರ ದಾಖಲಿಸಲಾಗಿತ್ತು. ಒಂದು ವಾರ ಸಾಮಾಜಿಕ ಮಾಧ್ಯಮಗಳನ್ನು ಬಳಸದೆ ಇದ್ದವರು (ಈ ಮೇಲೆ ತಿಳಿಸಿದಂತೆ) ಸಕಾರಾತ್ಮಕ ಫಲಿತಾಂಶ ಅನುಭವಿಸಿದರು. ಅವನ್ನು ಬಳಸಿದವರು ಅಂದರೆ “ನಿಯಂತ್ರಣ ತಂಡ"ದವರು (ಕಂಟ್ರೋಲ್ ಗ್ರೂಪಿನವರು) ಅಂತಹ ಸಕಾರಾತ್ಮಕ ಫಲಿತಾಂಶ ಅನುಭವಿಸಲಿಲ್ಲ.

Pages